
ಬೆಂಗಳೂರು, ಜುಲೈ 22: ನಗರದ ಫುಟ್ಪಾತ್ನಲ್ಲಿ (Footpath) ಬೈಕ್ ಓಡಿಸುವವರಿಗೆ ವಿಧಿಸಲಾಗುತ್ತಿದ್ದ 500 ರೂ ದಂಡದ ಮೊತ್ತವನ್ನು ಐದು ಸಾವಿರ ರೂಗೆ ಹೆಚ್ಚಿಸುವಂತೆ ಸಾರಿಗೆ ಸಚಿವ ಭೈರತಿ ಸುರೇಶ್ಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಕೃಷ್ಣಬೈರೇಗೌಡ (Minister Krishna Byregowda) ಪತ್ರ ಬರೆದಿದ್ದಾರೆ. ಆ ಮೂಲಕ ಫುಟ್ಪಾತ್ ಶೂರರಿಗೆ ಬಿಗ್ ಶಾಕ್ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಬೆಂಗಳೂರಿನಲ್ಲಿ ಫುಟ್ಪಾತ್ನಲ್ಲಿ ಬೈಕ್ ಓಡಿಸುವವ ಸಂಖ್ಯೆ ಹೆಚ್ಚಾಗುತ್ತಿದೆ. ಫುಡ್ ಡೆಲವರಿ ಬಾಯ್ಗಳು ನಂಬರ್ ಇಲ್ಲದ ಎಲೆಕ್ಟ್ರಿಕ್ ಸ್ಕೂಟರ್ಗಳನ್ನ ಎಲ್ಲೆಂದರಲ್ಲಿ ನುಗ್ಗಿಸುತ್ತಿದ್ದಾರೆ. ಈ ಸಂಬಂಧ ಟಿವಿ9 ಕೂಡ ಈ ಹಿಂದೆ ರಿಯಾಲಿಟಿ ಚೆಕ್ ಮೂಲಕ ಸರ್ಕಾರದ ಕಣ್ಣು ತೆರೆ ಕೆಲಸ ಮಾಡಿತ್ತು. ಇದರ ಇಂಪ್ಯಾಕ್ಟ್ ಎಂಬಂತೆ ಸಚಿವ ಕೃಷ್ಣಬೈರೇಗೌಡ ಅಲರ್ಟ್ ಆಗಿದ್ದು, ಇದೀಗ ಫುಟ್ಪಾತ್ ಮೇಲೆ ಬೈಕ್ ಓಡಿಸುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
‘ಸಾರ್ವಜನಿಕರ ನಡೆಯುವ ಹಕ್ಕನ್ನು ಖಚಿತಪಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ಪಾದಾಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಐದು ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕೆಲಸಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಹೀಗೆ ಬೀದಿಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ಮೋಟಾರು ವಾಹನಗಳನ್ನು ಚಲಾಯಿಸುವುದು ಸರಿಯಲ್ಲ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಶಿವಾಜಿನಗರ ಹಲ್ಲೆ ಪ್ರಕರಣ: ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ, ಸಮಾಜಘಾತುಕರು; ಸಚಿವ ಕೃಷ್ಣಭೈರೇಗೌಡ ಕಿಡಿ
‘ವಾಹನ ಸವಾರರು ಯಾವುದೇ ಭಯ ಇಲ್ಲದೆ ಒತ್ತುವರಿ ತೆರವಾಗಿರುವ ಪಾದಾಚಾರಿ ಮಾರ್ಗದಲ್ಲಿ ಚಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವರು ಈಗಾಗಲೇ ನನಗೆ ದೂರು ನೀಡಿದ್ದಾರೆ. ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವಾಗ ಅಪಘಾತಗಳಾದರೆ ಯಾರು ಹೊಣೆ? ಹೀಗಾಗಿ ಟ್ರಾಫಿಕ್ ಪೊಲೀಸರು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಅಲ್ಲದೆ, ದಂಡದ ಮೊತ್ತ ಅಧಿಕವಾದರೆ ಮಾತ್ರ ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯ. ಹೀಗಾಗಿ ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಪ್ರಸ್ತುತ ಚಾಲ್ತಿಯಲ್ಲಿರುವ ರೂ.500 ದಂಡವನ್ನು ರೂ.5000ಕ್ಕೆ ಏರಿಸುವಂತೆ ಸಾರಿಗೆ ಇಲಾಖೆಗೆ’ ಪತ್ರದ ಮೂಲಕ ಸಚಿವ ಕೃಷ್ಣಬೈರೇಗೌಡ ಒತ್ತಾಯಿಸಿದ್ದಾರೆ.
ಬೆಂಗಳೂರು ನಗರ ಸಂಚಾರಿ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ನಗರದ ಟ್ರಾಫಿಕ್ ಸಮಸ್ಯೆಯ ಕುರಿತು ಸಚಿವ ಕೃಷ್ಣಬೈರೇಗೌಡ ಚರ್ಚೆ ಮಾಡಿದರು. ‘ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಚಾಲ್ತಿಯಲ್ಲಿರುವ “ಆಲ್ಟರ್ನೇಟ್ ಪಾರ್ಕಿಂಗ್” ಅಥವಾ “ಒನ್-ಸೈಡ್ ಪಾರ್ಕಿಂಗ್” ನಿಯಮವನ್ನು ಸವಾರರು ಪಾಲಿಸುತ್ತಿಲ್ಲ ಹಾಗೂ ಅಧಿಕಾರಿಗಳು ಇದನ್ನು ಜಾರಿಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿಯಮ ಪಾಲನೆಗೆ ಹೊಸ ಅಧಿಸೂಚನೆ ಅಗತ್ಯವಿಲ್ಲ ಎಂದ ಸಚಿವರು, ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾದರೆ ರಸ್ತೆಯ ಒಂದು ಬದಿಯಲ್ಲಿ ಕನಿಷ್ಠ 7 ರಿಂದ 8 ಅಡಿ ಜಾಗ ಉಳಿಯಲಿದ್ದು, ಸಂಚಾರ ಸುಗಮವಾಗಲಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಲಕ್ಷಾಂತರ ಕೋಟಿ ರೂ. ಖರ್ಚು ಮಾಡುವ ಮೊದಲು ಪಾರ್ಕಿಂಗ್ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು’.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್ಗಳಿಗೆ ಕ್ಲಾಸ್
ಸಿಗ್ನಲ್ಗಳ ತೀರಾ ಹತ್ತಿರದಲ್ಲಿ ಬಿಎಂಟಿಸಿ ಬಸ್ ಸೇರಿದಂತೆ ಇತರೆ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಹೀಗಾಗಿ ಸಿಗ್ನಲ್ಗಳಿಂದ ಕನಿಷ್ಠ 75 ಮೀಟರ್ ಹಾಗೂ ಜಂಕ್ಷನ್ಗಳಿಂದ 50 ಮೀಟರ್ ಅಂತರದಲ್ಲಿ ಬಸ್ ನಿಲ್ದಾಣಗಳು ಇರಬೇಕು. ನಿಯಮಕ್ಕೆ ವಿರುದ್ಧವಾಗಿ ಸಿಗ್ನಲ್ ಸಮೀಪವಿರುವ ಬಸ್ ನಿಲ್ದಾಣಗಳನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:57 pm, Wed, 22 July 26