ಭೂಕಬಳಿಕೆದಾರರಿಂದ ಒತ್ತುವರಿ ಮಾಡಿಕೊಳ್ಳಲಾಗಿದ್ದ 65 ಕೋಟಿ ರೂ. ಮೌಲ್ಯದ ಬಿಡಿಎ ಜಾಗ ಒತ್ತುವರಿ ತೆರವು
ಬಿಡಿಎಗೆ ಸೇರಿದ ಜಾಗದಲ್ಲಿ ವಾಹನ ತೂಕ ಹಾಕುವ ಯಂತ್ರ ಸೇರಿ ಕಟ್ಟಡ ಬಳಕೆಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು. ಪೊಲೀಸ್ ಭದ್ರತೆಯಲ್ಲಿ ಬಿಡಿಎ ಅಧಿಕಾರಿಗಳಿಂದ ಒತ್ತುವರಿ ತೆರವು ಮಾಡಲಾಗಿದೆ.

ಬೆಂಗಳೂರು: 65 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ ಪಡೆಯಲಾಗಿದೆ. ಜೆ.ಪಿ.ನಗರದ 9ನೇ ಹಂತದ 4ನೇ ಬ್ಲಾಕ್ನ ತಿಪ್ಪಸಂದ್ರದ ಸರ್ವೆ ನಂಬರ್ 10ರಲ್ಲಿದ್ದ ಬಿಡಿಎಗೆ ಸೇರಿದ ಸುಮಾರು ಒಂದೂವರೆ ಎಕರೆ ಜಾಗ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಸದ್ಯ ಒತ್ತುವರಿ ಜಾಗವನ್ನು ತೆರವು ಮಾಡಲಾಗಿದೆ. ಒತ್ತುವರಿದಾರರು ಬಿಡಿಎಗೆ ಸೇರಿದ ಜಾಗದಲ್ಲಿ ವಾಹನ ತೂಕ ಹಾಕುವ ಯಂತ್ರ ಸೇರಿ ಕಟ್ಟಡ ಬಳಕೆಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು. ಪೊಲೀಸ್ ಭದ್ರತೆಯಲ್ಲಿ ಬಿಡಿಎ ಅಧಿಕಾರಿಗಳಿಂದ ಒತ್ತುವರಿ ತೆರವು ಮಾಡಲಾಗಿದೆ.
ಸಚಿವ ಮುನಿರತ್ನ ಮತ್ತಿತರರಿಗೆ ಹೈಕೋರ್ಟ್ನಿಂದ ನೋಟಿಸ್ ಜಾರಿ
ಬೆಂಗಳೂರಿನ ಮಲ್ಲತ್ತಹಳ್ಳಿ ಕೆರೆ ಆವರಣದಲ್ಲಿ ಅಕ್ರಮ ಕಾಮಗಾರಿ ಆರೋಪಕ್ಕೆ ಸಂಬಂಧಿಸಿ ಸಚಿವ ಮುನಿರತ್ನ ಮತ್ತಿತರರಿಗೆ ಹೈಕೋರ್ಟ್ನಿಂದ ನೋಟಿಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ನಲ್ಲಿ ಗೀತಾ ಮಿಶ್ರಾ ಎಂಬುವವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್ ನೋಟಿಸ್ ನೀಡಿದೆ. ಕೆರೆಗಳ ಆವರಣದಲ್ಲಿ ಕಾಮಗಾರಿ ಕೈಗೊಳ್ಳದಂತೆ ನಿರ್ಬಂಧವಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿದೆ. ಶಿವರಾತ್ರಿ ಹಬ್ಬ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನಡೆದ ಕಾರ್ಯಕ್ರಮಕ್ಕಾಗಿ ಕೆರೆಗೆ ಧಕ್ಕೆ ಉಂಟುಮಾಡಿದ್ದಾರೆಂದು ಆರೋಪಕ್ಕೆ ಸಂಬಂಧಿಸಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಮಂಡ್ಯಕ್ಕೆ 800 ಕೋಟಿ ರೂ. ಯೋಜನೆ ಘೋಷಿಸಿದ ರಾಜ್ಯ ಸರ್ಕಾರ
ಒತ್ತುವರಿ ತೆರವು ಕುರಿತಂತೆ ಅಸಮರ್ಪಕ ಪ್ರಮಾಣಪತ್ರಕ್ಕೆ ಹೈಕೋರ್ಟ್ ಅತೃಪ್ತಿ
ಇನ್ನು ಮತ್ತೊಂದೆಡೆ ಬಿಡದಿಯ ಕೇತಗಾನಹಳ್ಳಿ ಬಳಿ ಭೂಕಬಳಿಕೆ ಆರೋಪಕ್ಕೆ ಸಂಬಂಧಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ ವಿರುದ್ಧದ ಕೇಸ್ ಸಂಬಂಧ ಹೈಕೋರ್ಟ್ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಅರ್ಜಿ ಸಲ್ಲಿಸಲಾಗಿದ್ದು ಇಂದು ಹೈಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದೆ. ಒತ್ತುವರಿ ತೆರವು ಕುರಿತಂತೆ ಅಸಮರ್ಪಕ ಪ್ರಮಾಣಪತ್ರಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ.
7 ಸರ್ವೆ ನಂಬರ್ ಬದಲು ಕೇವಲ 5 ಸರ್ವೆ ನಂಬರ್ಗಳ ಮಾಹಿತಿ ನೀಡಲಾಗಿದೆ. 14 ಎಕರೆ 4 ಗುಂಟೆ ಬದಲು 8 ಎಕರೆ 30 ಗುಂಟೆ ಜಮೀನು ಒತ್ತುವರಿ ಮಾಹಿತಿ ನೀಡಲಾಗಿದೆ. ಹೀಗಾಗಿ ನ್ಯಾ.ಬಿ.ವೀರಪ್ಪ ಹಾಗೂ ನ್ಯಾ.ರಾಜೇಶ್ ರೈರವರಿದ್ದ ಪೀಠ ಅಸಮಾಧಾನ ಹೊರ ಹಾಕಿದ್ದು ಈ ಬಗ್ಗೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ. ಗೋಮಾಳ ಒತ್ತುವರಿ ತೆರವಿನ ಮಹಜರು ಹಾಜರುಪಡಿಸಿ. ನಾಪತ್ತೆಯಾದ ಎರಡು ಸರ್ವೆ ನಂಬರ್ಗಳ ವಿವರಣೆ ನೀಡಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ. 2004ರಲ್ಲಿ ಸಾವಿತ್ರಮ್ಮರಿಂದ ಹೆಚ್ಡಿಕೆ ಜಮೀನು ದಾನ ಪಡೆದಿದ್ದರು. ಭೂ ವ್ಯವಹಾರದಲ್ಲಿ ಅಕ್ರಮವೆಂದು ದೂರು ದಾಖಲಾಗಿತ್ತು. ಲೋಕಾಯುಕ್ತಕ್ಕೆ ಮಾಜಿ ಸಂಸದ ಜಿ.ಮಾದೇಗೌಡ ದೂರು ನೀಡಿದ್ದರು. ಒತ್ತುವರಿ ತೆರವುಗೊಳಿಸುವಂತೆ 2014ರಲ್ಲಿ ಲೋಕಾಯುಕ್ತ ಆದೇಶಿಸಿತ್ತು. ಸಮಾಜ ಪರಿವರ್ತನಾ ಸಮುದಾಯ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು. 2020ರ ಆದೇಶ ಪಾಲಿಸಿಲ್ಲವೆಂದು ನ್ಯಾಯಾಂಗ ನಿಂದನೆ ದಾಖಲಿಸಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:48 pm, Mon, 20 February 23




