ಮಳೆಯಲ್ಲಿ ನೆನೆಯುತ್ತಲೇ ಚರಂಡಿ ಕ್ಲೀನ್ ಮಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸರು​​; ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದ ಪರಿಸ್ಥಿತಿಯಲ್ಲಿ ಸಂಚಾರಿ ಪೊಲೀಸರು ತಮ್ಮ ಕರ್ತವ್ಯವನ್ನೂ ಮೀರಿ ಸಾರ್ವಜನಿಕರ ರಕ್ಷಣೆಗೆ ನಿಂತರು. ರಸ್ತೆಗಳಲ್ಲಿ ತುಂಬಿದ ನೀರನ್ನು ಬರಿದುಮಾಡಲು ಚರಂಡಿ ಸ್ವಚ್ಛಗೊಳಿಸಿ, ಬಿದ್ದ ಮರಗಳನ್ನು ತೆರವುಗೊಳಿಸಿ, ಕೆಟ್ಟು ನಿಂತ ವಾಹನಗಳನ್ನು ತಳ್ಳಿದರು. ಈ ನಿಸ್ವಾರ್ಥ ಸೇವೆ ಹಾಗೂ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮಳೆಯಲ್ಲಿ ನೆನೆಯುತ್ತಲೇ ಚರಂಡಿ ಕ್ಲೀನ್ ಮಾಡಿದ ಬೆಂಗಳೂರು ಟ್ರಾಫಿಕ್ ಪೊಲೀಸರು​​; ವಿಡಿಯೋ ವೈರಲ್
ಸಂಚಾರಿ ಪೊಲೀಸ್

Updated on: Jun 02, 2026 | 10:30 PM

ಬೆಂಗಳೂರು, ಜೂ.2: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಪ್ರವಾಹದಂತಹ ಪರಿಸ್ಥಿತಿ ಮತ್ತು ಮೈಲಿಗಟ್ಟಲೆ ಸಾಲುಗಟ್ಟಿ ನಿಂತಿದ್ದ ಟ್ರಾಫಿಕ್ ಜ್ಯಾಮ್‌ನಿಂದಾಗಿ ಇಡೀ ನಗರವೇ ಕಂಗೆಟ್ಟಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾರ್ವಜನಿಕರ ರಕ್ಷಣೆಗೆ ಧಾವಿಸಿದ ಬೆಂಗಳೂರು ಸಂಚಾರಿ ಪೊಲೀಸರು (BTP), ಕೇವಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸುವುದಷ್ಟೇ ಅಲ್ಲದೆ, ತಮ್ಮ ಕರ್ತವ್ಯದ ವ್ಯಾಪ್ತಿಯನ್ನೂ ಮೀರಿ ನಗರವನ್ನು ಯಥಾಸ್ಥಿತಿಗೆ ತರಲು ಶ್ರಮಿಸುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಅಪಾರ ಪ್ರಶಂಸೆಗೆ ಪಾತ್ರವಾಗಿವೆ. ಇದೀಗ ಬಗ್ಗೆ ವಿಡಿಯೋವೊಂದನ್ನು ಬೆಂಗಳೂರು ಪೋಸ್ಟ್​ (Bengaluru Post) ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ರಸ್ತೆಗಳ ಮೇಲೆ ಮೊಣಕಾಲಿನವರೆಗೆ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾಗ, ಸಂಚಾರಿ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿ ನಿಲ್ಲಲಿಲ್ಲ. ಮಳೆನೀರು ಸರಾಗವಾಗಿ ಹರಿದು ಹೋಗಲು ರಸ್ತೆ ಬದಿಯ ಚರಂಡಿಗಳಲ್ಲಿ ಸಿಲುಕಿಕೊಂಡಿದ್ದ ಪ್ಲಾಸ್ಟಿಕ್, ಕಸ ಹಾಗೂ ತ್ಯಾಜ್ಯಗಳನ್ನು ಪೊಲೀಸರು ತಮ್ಮ ಕೈಗಳಿಂದಲೇ ಸ್ವಚ್ಛಗೊಳಿಸಿದರು. ತಾವೇ ಖುದ್ದಾಗಿ ನಿಂತು ನೀರು ಬರಿದಾಗುವಂತೆ ಮಾಡುವ ಮೂಲಕ ರಸ್ತೆಗಳ ಮೇಲಿನ ಪ್ರವಾಹದ ತೀವ್ರತೆಯನ್ನು ಕಡಿಮೆ ಮಾಡಲು ಶ್ರಮಿಸಿದರು.

ಇದನ್ನೂ ಓದಿ: ಧಾರಾಕಾರ ಮಳೆಗೆ ಹೊಳೆಯಂತಾದ ಬೆಂಗಳೂರಿನ ರಸ್ತೆಗಳು: ಲ್ಯಾಂಡಿಂಗ್​​ ಸಾಧ್ಯವಾಗದೆ ಆಗಸದಲ್ಲೇ ಸುತ್ತಿದ ವಿಮಾನ!

ಇಲ್ಲಿದೆ ನೋಡಿ ವಿಡಿಯೋ:

ಭಾರಿ ಗಾಳಿ-ಮಳೆಗೆ ನಗರದ ಪ್ರಮುಖ ರಸ್ತೆಗಳ ಮೇಲೆ ಬಿದ್ದಿದ್ದ ಮರದ ಬೃಹತ್ ರೆಂಬೆ-ಕೊಂಬೆಗಳನ್ನು ಟ್ರಾಫಿಕ್ ಪೊಲೀಸರು ಸ್ವತಃ ತಾವೇ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲದೆ, ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ತಳ್ಳಿ ಸವಾರರಿಗೆ ನೆರವಾದರು. ಮಳೆ ಮತ್ತು ಟ್ರಾಫಿಕ್ ಅಸ್ತವ್ಯಸ್ತತೆಯ ನಡುವೆಯೂ ಇಡೀ ಬೆಂಗಳೂರು ನಗರದ ರಸ್ತೆಗಳು ಸದಾ ಚಲನಶೀಲವಾಗಿರುವಂತೆ (Keeping the city moving) ಮಾಡಲು ಹಗಲಿರುಳು ಶ್ರಮಿಸಿದ ಬಿಟಿಪಿ ಸಿಬ್ಬಂದಿಯ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಹಾಗೂ ನೆಟ್ಟಿಗರು ಸಾಲ್ಯೂಟ್ ಹೊಡೆಯುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us