
ಬೆಂಗಳೂರು, ಮೇ 29: ಸಿಲಿಕಾನ್ ಸಿಟಿ ಜನರಿಗೆ ವೀಕೆಂಡ್ ಆರಂಭದಲ್ಲೇ ಮಳೆ (Rain) ಶಾಕ್ ನೀಡಿದೆ. ಮೋಡ ಕವಿದ ವಾತಾವರಣವಿದ್ದ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ. ನಗರದ ಪ್ರಮುಖ ರಸ್ತೆಗಳು ಮಳೆ ನೀರಿಂದಾಗಿ ಜಲಾವೃತಗೊಂಡಿದ್ದು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಅಂಡರ್ಪಾಸ್ಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಸಂಜೆಯಿಂದಲೇ ನಗರದಾದ್ಯಂತ ಮೋಡ ಕವಿದ ವಾತಾವರಣ ಇತ್ತು. ಸಂಜೆ ಆಗುತ್ತಿದ್ದಂತೆ ಧಾರಾಕಾರ ಮಳೆ ಸುರಿದಿದೆ. ಮೆಜೆಸ್ಟಿಕ್, ಕಾರ್ಪೋರೇಶನ್, ಕೆ.ಆರ್. ಮಾರ್ಕೆಟ್, ಯುಬಿ ಸಿಟಿ, ರಿಚ್ಮಂಡ್ ಸರ್ಕಲ್, ಶಿವಾನಂದ ಸರ್ಕಲ್, ಜಯನಗರ ಹಾಗೂ ಮಲ್ಲೇಶ್ವರಂ ಸೇರಿದಂತೆ ನಗರದ ಮಧ್ಯಭಾಗದಲ್ಲಿ ಮಳೆ ಆರ್ಭಟಿಸಿದೆ.
ಇದನ್ನೂ ಓದಿ: ಮಂಗಳೂರಿನ ಜನರೇ ಸಂಜೆ 6ರೊಳಗೆ ಮನೆಗೆ ತಲುಪಿ!: ಇಂದು ಕರಾವಳಿ ಹಾಗೂ ಬೆಂಗಳೂರಿನಲ್ಲಿ ಭಾರೀ ಮಳೆ
ಇಷ್ಟೇ ಅಲ್ಲದೆ, ಯಲಹಂಕ, ಹೆಬ್ಬಾಳ, ಆರ್ಟಿ ನಗರ, ಸಹಕಾರನಗರ, ವಿದ್ಯಾರಣ್ಯಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ, ಬನಶಂಕರಿ, ಕೋರಮಂಗಲ, ಶಾಂತಿನಗರ, ಆನಂದ ರಾವ್ ವೃತ್ತ, ವಿದ್ಯಾರಣ್ಯಪುರ, ಸಹಕಾರನಗರದಲ್ಲಿ ಮಳೆ, ಟೌನ್ಹಾಲ್, ಮಾಗಡಿ ರಸ್ತೆ, ದಾಸರಹಳ್ಳಿ ಭಾಗದಲ್ಲೂ ಭಾರೀ ಮಳೆ ಸುರಿದಿದೆ. ಕಚೇರಿ ಕೆಲಸ ಮುಗಿಸಿ ವೀಕೆಂಡ್ ಸಂಭ್ರಮದಲ್ಲಿ ಮನೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಳೆಗೆ ಸಿಲುಕಿ ತೀವ್ರ ಪರದಾಡುವಂತಾಗಿದೆ. ರಸ್ತೆ ಬದಿ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಆಶ್ರಯ ಪಡೆದರು.
ಇನ್ನು ಧಾರಾಕಾರ ಮಳೆಗೆ ಬೆಂಗಳೂರಿನ ತಗ್ಗು ಪ್ರದೇಶಗಳು ಸಂಪೂರ್ಣ ಹೊಳೆಯಂತಾಗಿ ಮಾರ್ಪಟ್ಟಿವೆ. ರಸ್ತೆಗಳ ಮೇಲೆ ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಮಂದಗತಿಯಲ್ಲಿ ಸಾಗಿದೆ. ಅಂಡರ್ಪಾಸ್ಗಳು ಜಲಾವೃತಗೊಂಡಿವೆ. ಶಿವಾನಂದ ಸರ್ಕಲ್ನ ರೈಲ್ವೆ ಅಂಡರ್ ಪಾಸ್ನಲ್ಲಿ ಭಾರೀ ನೀರು ಹಿನ್ನೆಲೆ ಕಾರು ಸಿಲುಕಿಕೊಂಡಿದೆ. ಕಾರು ಹೊರತೆಗೆಯಲು ಚಾಲಕ ಹರಸಾಹಸ ಪಟ್ಟಿದ್ದಾರೆ. ಇನ್ನು ರಸ್ತೆಯಲ್ಲಿ ಎರಡು ಅಡಿಯಷ್ಟು ನೀರು ನಿಂತ ಹಿನ್ನೆಲೆ ನೀರು ನುಗಿ ಡೆಲಿವರಿ ಬಾಯ್ ಬೈಕ್ ಕೈಕೊಟ್ಟಿದೆ. ಬೈಕ್ ಆನ್ ಮಾಡಲು ಡೆಲಿವರಿ ಬಾಯ್ ಪರದಾಡಿದ್ದಾರೆ.
ವರದಿ: ನಟರಾಜ್ ಮೆಟ್ರೋ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:01 pm, Fri, 29 May 26