Bengaluru Rain: ಸಂಜೆಯಾಗುತ್ತಲೇ ಬೆಂಗಳೂರಿನಲ್ಲಿ ಮಳೆ ಆರಂಭ, ರಸ್ತೆಗಳು ಜಲಾವೃತ

ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಐದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಂತೆ ಇಂದು ಸಂಜೆಯಾಗುತ್ತಲೇ ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡವು.

Follow us
| Updated By: Rakesh Nayak Manchi

Updated on:Oct 09, 2023 | 9:19 PM

ಬೆಂಗಳೂರು, ಅ.9: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಐದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅದರಂತೆ ಇಂದು ಸಂಜೆಯಾಗುತ್ತಲೇ ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡವು. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿ ಟ್ರಾಫಿಕ್ ಜಾಮ್ ಉಂಟಾದವು.

ಸಂಜೆಯಾಗುತ್ತಲೇ ನಗರದ ಮೆಜೆಸ್ಟಿಕ್, ಮಾರ್ಕೆಟ್, ಮಲ್ಲೇಶ್ವರಂ, ರಿಚ್ ಮಂಡ್ ಸರ್ಕಲ್, ಸದಾಶಿವನಗರ, ಶಾಂತಿನಗರ, ಬಿಟಿಎಂ ಲೇಔಟ್ ಸೇರಿದಂತೆ ನಗರದ ಹಲವೆಡೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಇದನ್ನೂ ಓದಿ: Karnataka Rain: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಐದಾರು ಜಿಲ್ಲೆಗಳಲ್ಲಿ ಮುಂದಿನ 3 ದಿನ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಜನರು ತತ್ತರಿಸಿದ್ದಾರೆ. ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ, ರೈಲ್ವೆ ಅಂಡರ್​ಪಾಸ್, ವಿಜಯನಗರದ ಧನಂಜಯ ಪ್ಯಾಲೇಸ್ ಬಳಿ, ಬನ್ನೇರುಘಟ್ಟ ರಸ್ತೆ, ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ಕಲ್ಯಾಣನಗರ ಬ್ರಿಡ್ಜ್, ಹೆಸರಘಟ್ಟದಲ್ಲಿ ರಸ್ತೆಗಳು ಜಲಾವೃತವಾಗಿದೆ.

ಸುರಿದ ಭಾರೀ ಮಳೆಗೆ ಬೊಮ್ಮನಹಳ್ಳಿ ಹಾಗೂ ಮಡಿವಾಳ ಮುಖ್ಯ ರಸ್ತೆ ಜಲಾವೃತಗೊಂಡಿದೆ. ವಾಹನ ಸವಾರರು ನೀರು ತುಂಬಿದ ರಸ್ತೆಯಲ್ಲಿ ಸಂಚಾರ ಮಾಡಲು ಪರದಾಟ ನಡೆಸುತ್ತಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಪ್ರತೀ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಉಂಟಾಗುತ್ತದೆ. ಮಳೆನೀರು ಹರಿದು ಹೋಗಲು ಜಾಗವಿಲ್ಲದೆ ಈ ಅವಾಂತರ ಸೃಷ್ಟಿಯಾಗುತ್ತದೆ.

ಕೆರೆಯಂತಾದ 8ನೇ ಮೈಲಿ ತುಮಕೂರು ರಸ್ತೆ

ಸುರಿದ ಧಾರಾಕಾರ ಮಳೆಗೆ 8ನೇ ಮೈಲಿ ತುಮಕೂರು ರಸ್ತೆ ಕೆರೆಯಂತಾಗಿದೆ. ಕಾಲುವೆ ಬ್ಲಾಕ್​ನಿಂದಾಗಿ ಕಿಲೋಮೀಟರ್ ವರೆಗೆ ರಸ್ತೆ ತುಂಬೆಲ್ಲ ನೀರು ತುಂಬಿದ್ದು, ಪೀಣ್ಯಾ ಸಂಚಾರಿ ಪೊಲೀಸರು ಕಸ ಕಡ್ಡಿ ತೆರವುಗೊಳಿಸಿ ನೀರು ಹರಿಯಲು ಸುಗಮಗೊಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Mon, 9 October 23