
ಬೆಂಗಳೂರು, ಡಿಸೆಂಬರ್ 05: ಆ ಏರಿಯಾದ ಜನರು ಕಳೆದ ಎರಡು ವಾರಗಳಿಂದ ದುರ್ವಾಸನೆಗೆ ಬೇಸತ್ತಿದ್ದರು. ಹೆಗ್ಗಣ್ಣ ಸತ್ತಿರಬಹುದೆಂದು ಹಾದಿ ಬದಿಯ ಚರಂಡಿಗೆ ನೀರು ಸುರಿಯುತ್ತಿದ್ದರು. ಆದರೆ ಇಂದು ಪೊಲೀಸರು (police) ಎಂಟ್ರಿಕೊಟ್ಟಾಗ ಬೆಚ್ಚಿಬಿದ್ದಿದ್ದರು. ದುರ್ವಾಸನೆ ಜಾಡು ಹಿಡಿದ ಪೊಲೀಸರಿಗೆ ಕೊಳೆತ ಶವ (deadbody) ಸಿಕ್ಕಿತ್ತು. ಇಂದು ಬಸವೇಶ್ವರ ನಗರ ಪೊಲೀಸರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಂಜುನಾಥ್ ನಗರದ 3ನೇ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಕಳೆದ ಹದಿನೈದು ದಿನಗಳಿಂದ ಶವ ಕೊಳೆತು ನಾರುತ್ತಿತ್ತು. ಮುಖಕ್ಕೆ ಮಾಸ್ಕ್ ಹಾಕಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಏರಿಯಾದ ಜನರು ಮಾತ್ರ ಅಟ್ಟದ ಮೇಲೆಲ್ಲೋ, ಮೋರಿಯಲ್ಲೋ, ಹೆಗ್ಗಣ ಸತ್ತು ಬಿದ್ದಿರಬೇಕೆಂದು ದಿನವೂ ಮೋರಿಗೆ ನೀರು ಸುರಿಯುತ್ತಿದ್ದರಂತೆ.
ಇದನ್ನೂ ಓದಿ: ಮದ್ವೆಯಾಗಿದ್ರೂ ಅತ್ತೆ ಮಗಳ ಮೇಲಾಸೆ: ಆಕೆ ದೂರವಾದ ಸಿಟ್ಟಿಗೆ ಮಾವ ಮಾಡಿದ್ದೇನು ಗೊತ್ತಾ?
ಬಳಿಕ ಮನೆಯೊಂದರಿಂದ ದುರ್ವಾಸನೆ ಬರ್ತಿದೆ ಎಂದು ಗಮನಿಸಿದ ಸ್ಥಳೀಯರು, ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಾಯ ಪಡೆದು ಬಂದು ನೋಡಿದ ಪೊಲೀಸರಿಗೆ ಕೋಣೆಯಲ್ಲಿ ಹಾಸಿಗೆ ಮೇಲೆ ಟೆಕ್ಕಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಡೆತ್ನೋಟ್ ಬರೆದಿಟ್ಟು ತಾಯಿ ಆತ್ಮಹತ್ಯೆ: 6 ತಿಂಗಳ ಹಿಂದಷ್ಟೇ 2ನೇ ಮದ್ವೆಯಾಗಿದ್ದ ಮಗ ಸಹ ಸಾವು
ಭಾಗಶಃ ಕೊಳೆತು ದಯರ್ವಾಸನೆ ಬರುತ್ತಿದ್ದ ವ್ಯಕ್ತಿ ಹೆಸರು ಯುವರಾಜ್ (48). ಮೃತ ಯುವರಾಜ್ ಎಂಎನ್ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರಂತೆ. ತಾಯಿಯೊಂದಿಗೆ ಕಳೆದ ಹದಿನೈದು ವರ್ಷಗಳಿಂದ ಇದೇ ಏರಿಯಾದಲ್ಲಿ ವಾಸವಾಗಿದ್ದರಂತೆ. ನೆರೆಹೊರೆಯವ ಜೊತೆಗಾಗಲಿ, ಸ್ನೇಹಿತರ ಜೊತೆಗಾಗಲಿ ಹೆಚ್ಚಿಗೆ ಮಾತನಾಡಿದ್ದೇ ನೋಡಿಲ್ಲವಂತೆ.
ಅವಿವಾಹಿತರಾಗಿದ್ದ ಟೆಕ್ಕಿ, ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅನುಮಾನಾಸ್ಪದ ಸಾವಿನ ಹಿನ್ನಲೆ ಕೇಸ್ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಮೃತ ಯುವರಾಜ್ ಸೋದರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.