ಲಂಚ ಪ್ರಕರಣ: ಲೋಕಾಯುಕ್ತ ವಿಚಾರಣೆ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಿಷ್ಟು

ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಲೋಕಾಯುಕ್ತ ಅಧಿಕಾರಿಗಳ ವಿಚಾರಣೆ ಮುಕ್ತಾಯಗೊಂಡಿದೆ.

ಲಂಚ ಪ್ರಕರಣ: ಲೋಕಾಯುಕ್ತ ವಿಚಾರಣೆ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಿಷ್ಟು
ಮಾಡಾಳ್ ವಿರೂಪಾಕ್ಷಪ್ಪImage Credit source: indiatoday.in
Follow us
|

Updated on:Mar 09, 2023 | 10:36 PM

ಬೆಂಗಳೂರು: ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madalu Veerupakshappa) ಅವರು ಗುರುವಾರ ಸಂಜೆ ಲೋಕಾಯುಕ್ತ ಕಚೇರಿಗೆ ಹಾಜರಾಗಿ ಸುದೀರ್ಘ ವಿಚಾರಣೆ ಎದುರಿಸಿದರು. ವಕೀಲರು, ಪೊಲೀಸರೊಂದಿಗೆ ಕಚೇರಿಗೆ ಹಾಜರಾದ ಮಾಡಾಳ್ ಅವರನ್ನು ಲೋಕಾಯುಕ್ತ ತನಿಖಾಧಿಕಾರಿ ಆಂಥೋನಿ ಜಾನ್​ ಲೋಕಾಯುಕ್ತ ಕಚೇರಿಯ 3ನೇ ಮಹಡಿಯಲ್ಲಿ ವಿಚಾರಣೆಗೆ ಒಳಪಡಿಸಿದರು. ರಾತ್ರಿ 9.30ರ ಸುಮಾರಿಗೆ ವಿಚಾರಣೆ ಮುಕ್ತಾಯಗೊಂಡಿದ್ದು, ಲೋಕಾಯುಕ್ತ ಕಚೇರಿಯಿಂದ ಮಾಡಾಳ್ ನಿರ್ಗಮಿಸಿದ್ದಾರೆ.

ನನ್ನನ್ನು ಸಿಲುಕಿಸಲಾಗಿದೆ; ಮಾಡಾಳ್

ಭ್ರಷ್ಟಾಚಾರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ ಮಾಡಾಳ್, ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪರಾದರ್ಶಕವಾಗಿದೆ ನಡೆದಿದೆ. ಯಾವ ಸಿಬ್ಬಂದಿಗೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಲೋಕಾಯುಕ್ತ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ತನಿಖಾ ಹಂತದಲ್ಲಿ ಯಾವುದನ್ನು ಪ್ರಸ್ತಾಪಿಸಲ್ಲ. ಸದ್ಯ ಲೋಕಾಯುಕ್ತ ಪೊಲೀಸರು ಮತ್ತೆ ಬರಲು ಹೇಳಿಲ್ಲ. ಮತ್ತೆ ಕರೆದಾಗ ವಿಚಾರಣೆ ಹಾಜರಾಗುತ್ತೇನೆ. ಮಾಧ್ಯಮಗಳು ಪ್ರಶ್ನಿಸಿದ್ದರಿಂದ ಒತ್ತಡದಲ್ಲಿ ಮಾತನಾಡಿದ್ದೇನೆ ಎಂದರು.

ಇದನ್ನೂ ಓದಿ: ಯಾರೋ ಬಂದು ಮಗನ ಕೈಯಲ್ಲಿ ಹಣ ಇಟ್ಟು ಹೋದರು; ಮಾಡಾಳ್ ವಿರೂಪಾಕ್ಷಪ್ಪ

ಸತತ 2 ಗಂಟೆಗಳು ಶಾಸಕ ಮಾಡಾಳು ವಿರುಪಾಕ್ಷಪ್ಪ ವಿಚಾರಣೆ ಮಾಡಿರುವ ತನಿಖಾಧಿಕಾರಿ ಆಂಥೋಣಿ ಜಾನ್​ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಭ್ರಷ್ಟಾಚಾರ ಆರೋಪದ ಕುರಿತ ಪ್ರಶ್ನೆಗಳಿಗೆ ಮಾಡಳು ವಿರೂಪಾಕ್ಷಪ್ಪ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ. ಯಾವ ಕೆಮಿಕಲ್ ಕಂಪೆನಿ ಸಿಬ್ಬಂದಿಗೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ ಮಾಡಳ್ ವಿರೂಪಾಕ್ಷಪ್ಪ ಹೇಳಿದ್ದಾರೆನ್ನಲಾಗುತ್ತಿದೆ.

ಮಾಡಾಳ್, ಪುತ್ರನ ಫೋಟೋಗೆ ಮಸಿ ಬಳಿದು ಆಕ್ರೋಶ

ಇನ್ನು ಮಾಡಾಳ್​ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಹಿನ್ನೆಲೆ ಮಾಡಾಳ್ ಹಾಗೂ ಪುತ್ರ ಮಲ್ಲಿಕಾರ್ಜುನ ಪೋಸ್ಟರ್​ಗಳಿಗೆ ಮಸಿ ಬಳೆಯಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಬಹುತೇಕ ಕಡೆ ಅಂಟಿಸಿದ್ದ ಪೋಸ್ಟರ್​ಗಳಿಗೆ ಕಿಡಿಗೇಡಿಗಳಿಂದ ಮಸಿ ಬಳಿದು ಕೃತ್ಯವೆಸಗಲಾಗಿದೆ.

ಇದನ್ನೂ ಓದಿ: Madal Virupakshappa: ಪಕ್ಷದಿಂದ ಉಚ್ಚಾಟಿಸುವುದಾಗಿ ಸಿಎಂ ಹೇಳಿದ್ದರು; ಮಾಡಾಳ್ ವಿರೂಪಾಕ್ಷಪ್ಪ

ಭಾರೀ ಅವ್ಯವಹಾರ

ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿದ್ದು, ಕಳೆದ ವಾರ ಬೆಂಗಳೂರು ಜಲ ಮಂಡಳಿ ಮತ್ತು ಒಳಚರಂಡಿ (BWSSB) ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳ್ ಪ್ರಶಾಂತ್‌ ಅವರ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು 40 ಲಕ್ಷ ರೂ.ಗೂ ಹೆಚ್ಚು ಮೊತ್ತದ ಲಂಚ ಪಡೆಯುತ್ತಿರುವುದು ಬಯಲಾಗಿತ್ತು. ನಂತರದಲ್ಲಿ ಶಾಸಕರ ಮನೆ ಮೇಲೂ ದಾಳಿ ನಡೆದಿದ್ದು, ಕೋಟ್ಯಂತರ ರೂ. ನಗದು, ಚಿನ್ನಾಭರಣ ದೊರೆತಿತ್ತು.

ಈ ಮಧ್ಯೆ ಮಾಡಾಳ್ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದರು. ಬಳಿಕ ವಕೀಲರ ಮೂಲಕ ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜತೆಗೆ, ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್​ಐಆರ್ ರದ್ದು ಮಾಡಬೇಕು ಎಂದೂ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಪರ ಹಿರಿಯ ವಕೀಲ ಕೆ.ಸುಮನ್ ವಾದ ಮಂಡಿಸಿದ್ದು, ಜಾಮೀನು ನೀಡುವಂತೆ ಕೋರಿದ್ದರು. ಅವರ ವಾದವನ್ನು ಆಲಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಮಧ್ಯಂತರ ಜಾಮೀನು ನೀಡಿತ್ತು. 5 ಲಕ್ಷ ರೂ. ಮೌಲ್ಯದ ಬಾಂಡ್​, ಇಬ್ಬರು ಶ್ಯೂರಿಟಿ ನೀಡುವಂತೆ ಸೂಚಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:14 pm, Thu, 9 March 23