AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madal Virupakshappa: ಪಕ್ಷದಿಂದ ಉಚ್ಚಾಟಿಸುವುದಾಗಿ ಸಿಎಂ ಹೇಳಿದ್ದರು; ಮಾಡಾಳ್ ವಿರೂಪಾಕ್ಷಪ್ಪ

ವಿರೂಪಾಕ್ಷಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರವಾಣಿ ಕರೆ ಮಾಡಿದ್ದು, ಯಾವುದೇ ಮೆರವಣಿಗೆ ನಡೆಸದಂತೆ ಸೂಚಿಸಿದ್ದಾರೆ. ಈ ವೇಳೆ, ಪ್ರತಿಕ್ರಿಯೆ ನೀಡಿದ ಮಾಡಾಳ್, ಮೆರವಣಿಗೆ ನಾನು ನಡೆಸಿದ್ದಲ್ಲ, ಅಭಿಮಾನಿಗಳು ನಡೆಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

Madal Virupakshappa: ಪಕ್ಷದಿಂದ ಉಚ್ಚಾಟಿಸುವುದಾಗಿ ಸಿಎಂ ಹೇಳಿದ್ದರು; ಮಾಡಾಳ್ ವಿರೂಪಾಕ್ಷಪ್ಪ
ಮಾಡಾಳ್ ವಿರೂಪಾಕ್ಷಪ್ಪ
Ganapathi Sharma
|

Updated on: Mar 07, 2023 | 6:55 PM

Share

ದಾವಣಗೆರೆ: ‘ನನ್ನನ್ನು ಪಕ್ಷದಿಂದ ಉಚ್ಚಾಟಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅವರ ಹೇಳಿಕೆಯನ್ನು ನಾನು ಸ್ವಾಗತಿಸಿದೆ’ ಎಂದು ಶಾಸಕ ಮಾಡಾಳ್​ ವಿರೂಪಾಕ್ಷಪ್ಪ (Madal Virupakshappa) ಮಂಗಳವಾರ ಸಂಜೆ ಹೇಳಿದರು. ಲಂಚ ಪ್ರಕರಣದಲ್ಲಿ ಲೋಕಾಯುಕ್ತ (Lokayukta) ದಾಖಲಿಸಿರುವ ಎಫ್​ಐಆರ್​​ನಲ್ಲಿ ಪ್ರಮುಖ ಆರೋಪಿಯಾಗಿರುವ ಅವರು, ಬಂಧನ ಭೀತಿಯಿಂದಾಗಿ ಕಳೆದ ಆರು ದಿನಗಳಿಂದ ನಾಪಗತ್ತೆಯಾಗಿದ್ದರು. ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಿಂದ ನನ್ನನ್ನು ಉಚ್ಚಾಟಿಸಿದರೆ ಬೇಸರವಿಲ್ಲ. ಆದರೆ, ನನ್ನನ್ನು ಪಕ್ಷದಿಂದ ಉಚ್ಚಾಟಿಸಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನನ್ನ ಮಗ ಲೋಕಾಯುಕ್ತ ಬಲೆಗೆಬಿದ್ದ ನಂತರ ಮುಖ್ಯಮಂತ್ರಿಗಳು ಕರೆ ಮಾಡಿದ್ದರು. ಕೆಎಸ್​ಡಿಎಲ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಿದ್ದರು. ಅವರ ಸೂಚನೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಪಕ್ಷ ತಾಯಿ ಇದ್ದಂತೆ, ಯಾವುದೇ ಕ್ರಮಕೈಗೊಂಡರೂ ಸ್ವಾಗತಿಸುವೆ ಎಂದು ಹೇಳಿದ್ದಾರೆ.

ಮೆರವಣಿಗೆ ನಡೆಸದಂತೆ ಮಾಡಾಳ್‌ಗೆ ಕಟೀಲ್ ಸೂಚನೆ

ಹೈಕೋರ್ಟ್​​ನಿಂದ ಜಾಮೀನು ದೊರೆತ ಬಳಿಕ ವಿರೂಪಾಕ್ಷಪ್ಪ ಅವರು ಹುಟ್ಟೂರು, ಚನ್ನೇಶಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರನ್ನು ಬೆಂಬಲಿಗರು ತಮಟೆ ಬಾರಿಸಿ, ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮಾಡಿ ಕರೆದುಕೊಂಡು ಬಂದಿದ್ದಾರೆ. ನಂತರ ವಿರೂಪಾಕ್ಷಪ್ಪ ಅವರು ಮಹದೇವಮ್ಮ ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಬೆಂಬಲಿಗರು ಮಾಡಾಳ್ ವಿರೂಪಾಕ್ಷಪ್ಪ ಪರ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ವಿರೂಪಾಕ್ಷಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರವಾಣಿ ಕರೆ ಮಾಡಿದ್ದು, ಯಾವುದೇ ಮೆರವಣಿಗೆ ನಡೆಸದಂತೆ ಸೂಚಿಸಿದ್ದಾರೆ. ಈ ವೇಳೆ, ಪ್ರತಿಕ್ರಿಯೆ ನೀಡಿದ ಮಾಡಾಳ್, ಮೆರವಣಿಗೆ ನಾನು ನಡೆಸಿದ್ದಲ್ಲ, ಅಭಿಮಾನಿಗಳು ನಡೆಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಯಾವುದೇ ಮೆರವಣಿಗೆ ನಡೆಸುವುದಿಲ್ಲ, ಎಲ್ಲವನ್ನೂ ನಿಲ್ಲಿಸುತ್ತೇನೆ ಎಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಮಾಡಾಳ್ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಹಣ ನಾವು ಸಂಪಾದಿಸಿದ್ದು, ದಾಖಲೆ ಒದಗಿಸುವೆ; ಮಾಡಾಳ್ ವಿರೂಪಾಕ್ಷಪ್ಪ

ಈ ಮಧ್ಯೆ, ಮನೆಯಲ್ಲಿ ದೊರೆತ ಹಣದ ಬಗ್ಗೆ ಸಚಿವರು ನೀಡಿರುವ ಸ್ಪಷ್ಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿದೆ. ಅನೇಕರು ಸಚಿವರ ಹೇಳಿಕೆಗೆ ವ್ಯಂಗ್ಯಭರಿತ ಸಂದೇಶಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಲೋಕಾಯುಕ್ತ ದಾಳಿ ನಡೆಸಿದ ವೇಳೆ ಮನೆಯಲ್ಲಿ ಸಿಕ್ಕಿರುವ ನಗದು ನಾವು ಸಂಪಾದಿಸಿದ ಹಣ. ಅದಕ್ಕೆ ದಾಖಲೆ ಒದಗಿಸುವೆ ಎಂದು ವಿರೂಪಾಕ್ಷಪ್ಪ ಹೇಳಿದ್ದರು. ಮುಂದುವರಿದು, ಅಡಕೆ ತೋಟ, ಕ್ರಷರ್​​ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ಲೋಕಾಯುಕ್ತ ದಾಳಿ ವೇಳೆ ಈ ಹಣ ಅವರಿಗೆ ಸಿಕ್ಕಿದೆ. ಅದನ್ನು ಅವರು ವಶಕ್ಕೆ ಪಡೆದಿದ್ದಾರೆ. ಆ ಹಣಕ್ಕೆ ನಮ್ಮ ಬಳಿ ದಾಖಲೆಯಿದೆ. ಸೂಕ್ತ ದಾಖಲೆಗಳನ್ನು ನೀಡಿ ಮತ್ತೆ ಪಡೆದುಕೊಳ್ಳುತ್ತೇವೆ. ಚನ್ನಗಿರಿ ತಾಲೂಕು ಅಡಕೆ ನಾಡು, ಎಲ್ಲರ ಮನೆಯಲ್ಲೂ ಹಣವಿರುತ್ತದೆ. ಅಡಕೆ ಬೆಳೆಗಾರರ ಮನೆಯಲ್ಲಿ ಕನಿಷ್ಠ 5-6 ಕೋಟಿ ರೂ. ಹಣ ಇರುತ್ತದೆ. ನಮ್ಮ ಕುಟುಂಬಕ್ಕೆ ಸೇರಿದ 125 ಎಕರೆ ಅಡಕೆ ತೋಟವಿದೆ. 2 ಕ್ರಷರ್ ಇದೆ, ಅಡಕೆ ಮಂಡಿಯಿದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ