ಆದಾಯಕ್ಕಿಂತಲೂ ಅಧಿಕ ಸಂಪತ್ತು ಬೆಳೆದಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ಮತ್ತು ಆತನ ಪತ್ನಿಗೂ ಶಿಕ್ಷೆ- ಅಪರೂಪದ ಪ್ರಕರಣ!

ತನಿಖೆಯ ಬಳಿಕ ಅಧಿಕಾರಿ ತಂಗಳ್​ ಮತ್ತು ಆತನ ಪತ್ನಿಯ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಇದೀಗ, ಟ್ರಯಲ್ ಕೋರ್ಟ್ ಇಬ್ಬರೂ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಶಿಕ್ಷೆ ವಿಧಿಸಿದೆ.

ಆದಾಯಕ್ಕಿಂತಲೂ ಅಧಿಕ ಸಂಪತ್ತು ಬೆಳೆದಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ಮತ್ತು ಆತನ ಪತ್ನಿಗೂ ಶಿಕ್ಷೆ- ಅಪರೂಪದ ಪ್ರಕರಣ!
ಆದಾಯಕ್ಕಿಂತ ಅಧಿಕ ಸಂಪತ್ತು ’ಬೆಳೆದಿದ್ದ’ ತೋಟಕಗಾರಿಕೆ ಇಲಾಖೆ ಅಧಿಕಾರಿ- ಪತ್ನಿ ಇಬ್ಬರಿಗೂ ಶಿಕ್ಷೆ
Updated By: Digi Tech Desk

Updated on: Apr 26, 2023 | 6:01 PM

ಬೆಂಗಳೂರು/ಮೈಸೂರು: ಭ್ರಷ್ಟ ಅಧಿಕಾರಿಗಳ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಾನಾ ಭ್ರಷ್ಟಾಚಾರ (Corruption) ನಿಯಂತ್ರಣ ಸಂಸ್ಥೆಗಳು ದಾಳಿ ಮಾಡಿ, ತಕ್ಷಣಕ್ಕೆ ಹೆಡೆಮುರಿಗೆ ಕಟ್ಟುತ್ತಿರುತ್ತವೆ. ಸರಿಯಾಗಿ ಆ ಘಳಿಗೆಯಲ್ಲೇ… ದಾಳಿಗೆ ತುತ್ತಾದ ಅಧಿಕಾರಿ ತನ್ನ ಮನೆ ಮುಂದೆಯೇ ಮನೆಯಲ್ಲಿ ಯಾರೋ ಸತ್ತೇ ಹೋಗಿದ್ದಾರೆ ಎಂಬಂತೆ, ದಾಳಿಯಿಂದ ವಿಚಲಿತಗೊಂಡು ಉದ್ದೋ ಉದ್ದ ನೆಲದ ಮೇಲೆ ಬಿದ್ದು ಹೊರಳಾಡುವ ಪ್ರಸಂಗವೂ ತಾಜಾ ಆಗಿ ರಾಜಧಾನಿಯ ಪಕ್ಕದ ಜಿಲ್ಲೆಯಲ್ಲೇ ನೋಡಿದ್ದೂ ಆಗಿದೆ. ಅದಾದ ಮೇಲೆ ಹಾಗೆ ದಾಳಿಗೆ ತುತ್ತಾದ ಅಧಿಕಾರಿಗಳು ಮುಂದೇನಾದರೂ, ಅವರಿಗೆ ಶಿಕ್ಷೆ ಆಯಿತಾ? ಅವರು ಸಂಪಾದಿಸಿದ ಅಕ್ರಮ ಆಸ್ತಿ ಯಾರ ಪಾಲಾಯಿತು ಎಂದು ಜನಸಾಮನ್ಯರು ತಮಗೆ ತಾವೇ ಕೇಳಿಕೊಳ್ಳುತ್ತಿರುತ್ತಾರೆ. ಆದರೆ ಅದ ಬಗ್ಗೆ ತಕ್ಷಣಕ್ಕೆ ಲೆಕ್ಕ ಸಿಗುವುದಿಲ್ಲ. ಜನಸಾಮಾನ್ಯ ಭ್ರಷ್ಟ ವ್ಯವಸ್ಥೆ ಬಗ್ಗೆ ಭ್ರಮನಿರಸಗೊಂಡು, ಬೇಸರಗೊಂಡಿರುವಾಗ ಉದಾಹರಣೆಗೆ ಎಂಬಂತೆ ಇಲ್ಲೊಬ್ಬ ಅಧಿಕಾರಿಗೆ ಸರಿಯಾದ ಶಿಕ್ಷೆಯಾಗಿರುವ ಬಗ್ಗೆ ವರದಿಯಾಗಿದೆ.

ಹೌದು ಆದಾಯಕ್ಕಿಂತ ಹೆಚ್ಚು ಸಂಪತ್ತಿನ ಫಸಲು ಗುಡ್ಡೆಹಾಕಿದ್ದ ತೋಟಕಗಾರಿಕೆ (Horticulture) ಇಲಾಖೆಯ ಉಪ ಸೂಪರಿಂಟೆಂಡೆಂಟ್​ ಅಧಿಕಾರಿಗೆ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿದ್ದ ಕೇಸಿನಲ್ಲಿ ಬೆಂಗಳೂರು ಸಿಬಿಐ (Bangalore CBI) ನ್ಯಾಯಾಲಯ 3.5 ಕೋಟಿ ದಂಡ ವಿಧಿಸಿದ್ದು, 5 ವರ್ಷ ಕಠಿಣ ಜೈಲು ಶಿಕ್ಷೆಗೆ (Rigorous Imprisonment) ತಳ್ಳಿದೆ.

ಪತ್ನಿಯನ್ನೂ ಜೈಲಿಗಟ್ಟಿದ ಪ್ರಕರಣ ಏನಿದು?

ಬೆಂಗಳೂರಿನಲ್ಲಿರುವ ಸಿಬಿಐ ವಿಶೇಷ ಜಡ್ಜ್​​, ಮೈಸೂರಿನಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಡೆಪ್ಯುಟಿ ಸೂಪರಿಂಟೆಂಡಿಂಗ್ ಹಾರ್ಟಿಕಲ್ಚರಿಸ್ಟ್​ ಆಗಿದ್ದ ಎಂ.ಹೆಚ್. ತಂಗಳ್ ಎಂಬ ಭ್ರಷ್ಟ ಅಧಿಕಾರಿಗೆ ಶಿಕ್ಷೆ ವಿಧಿಸಿದೆ. ಇಲ್ಲೊಂದು ವಿಶೇಷವಿದೆ. ಇದೇ ಪ್ರಕರಣದಲ್ಲಿ ಭ್ರಷ್ಟ ಅಧಿಕಾರಿ ತಂಗಳ್ ಅವರ ಶ್ರೀಮತಿಗೂ ಶಿಕ್ಷೆ ವಿಧಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಗಂಡ ಹೆಂಡತಿಗೆ ಶಿಕ್ಷೆ ವಿಧಿಸಿದ ಅಪರೂಪದ ಪ್ರಕರಣ ಇದಾಗಿದೆ. ಒಂದು ಲಕ್ಷ ರೂಪಾಯಿ ದಂಡ ಮತ್ತು ಮೂರು ವರ್ಷಗಳ ಸರಳ ಸೆರೆವಾಸ ಶಿಕ್ಷೆ ವಿಧಿಸಿದೆ.

2019ರ ಆಗಸ್ಟ್​​ ತಿಂಗಳಲ್ಲಿ ಬೆಂಗಳೂರಿನ ಸಿಬಿಐ ಸಂಸ್ಥೆಯು ಸದರಿ ಎಂ.ಹೆಚ್. ತಂಗಳ್ ಎಂಬ ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿತ್ತು. ಆಗ್ಗೆ ಭ್ರಷ್ಟ ತಂಗಳ್ ಬಳಿ 3,11,94,005 ರೂ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಅಕ್ರಮ ಆದಾಯ ಮೂಲಗಳಿಂದ ಸಂಪಾದಿಸಿದ್ದ ಆ ಹಣ ಆತನ ಸಂಬಳದ ಸಕ್ರಮ ಆದಾಯಕ್ಕಿಂತ 103 % ಪಟ್ಟು ಹೆಚ್ಚಾಗಿತ್ತು ಎಂದು ಅಂದು ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ಆರೋಪಪಟ್ಟಿ ದಾಖಲಿಸಿದ್ದರು. ತನಿಖೆಯ ಬಳಿಕ ಅಧಿಕಾರಿ ತಂಗಳ್​ ಮತ್ತು ಆತನ ಪತ್ನಿಯ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಇದೀಗ, ಟ್ರಯಲ್ ಕೋರ್ಟ್ ಇಬ್ಬರೂ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ, ಶಿಕ್ಷೆ ವಿಧಿಸಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Wed, 26 April 23