Karnataka Dam Water Level: 100 ಅಡಿ ಭರ್ತಿಯಾದ ಕೆ.ಆರ್.ಎಸ್ ಜಲಾಶಯ!
ಕರ್ನಾಟಕದ ಜಲಾಶಯಗಳ (ಆ.03) ನೀರಿನ ಮಟ್ಟ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಡ್ಯದ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿದೆ. ಪ್ರಸ್ತುತ ಡ್ಯಾಂಗೆ 32,048 ಕ್ಯೂಸೆಕ್ ಒಳಹರಿವು ಹರಿದುಬರುತ್ತಿದ್ದು, ಸಂಗ್ರಹ 23 ಟಿಎಂಸಿ ತಲುಪಿದೆ. ಮುಂದಿನ 10-15 ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಯಿದ್ದು, ಕಾವೇರಿ ಕೊಳ್ಳದ ರೈತರು ಹಾಗೂ ಮೈಸೂರು-ಬೆಂಗಳೂರು ಜನರಲ್ಲಿ ಸಂತಸ ಮೂಡಿದೆ.

ಮುಖ್ಯಾಂಶಗಳು
- ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಬಲ ಮಳೆ, 100 ಅಡಿ ತಲುಪಿದ ಕೆಆರ್ಎಸ್.
- ಮೂರು ದಿನದಲ್ಲಿ 8 ಅಡಿ ಏರಿಕೆ, ಜಲಾಶಯದಲ್ಲಿ 23 ಟಿಎಂಸಿ ನೀರು ಸಂಗ್ರಹ.
- ಜಲಾಶಯಕ್ಕೆ ಭಾರಿ ಒಳಹರಿವು, ಇನ್ನು ಹದಿನೈದು ದಿನಗಳಲ್ಲಿ ಕೆಆರ್ಎಸ್ ಸಂಪೂರ್ಣ ಭರ್ತಿ.
ಬೆಂಗಳೂರು, ಆಗಸ್ಟ್ 03: ಕಾವೇರಿ ಹಾಗೂ ಮಲೆನಾಡು ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಪ್ರಬಲ ಮುಂಗಾರು ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕಾವೇರಿ ನಾಡಿನ ಜೀವನಾಡಿ ಕೃಷ್ಣರಾಜಸಾಗರ (ಕೆ.ಆರ್.ಎಸ್) ಜಲಾಶಯದ ನೀರಿನ ಮಟ್ಟ 100 ಅಡಿಯ ಗಡಿ ದಾಟುವ ಮೂಲಕ ಶತಕದ ಸನಿಹಕ್ಕೆ ತಲುಪಿ ಭರ್ತಿಯಾಗುವತ್ತ ಸಾಗಿದೆ.
1. ಕೆ.ಆರ್.ಎಸ್. ಜಲಾಶಯ (ಮಂಡ್ಯ)
- ಗರಿಷ್ಠ ಮಟ್ಟ: 124.80 ಅಡಿ
- ಇಂದಿನ ಮಟ್ಟ: 100.34 ಅಡಿ
- ಒಳಹರಿವು: 32,048 ಕ್ಯೂಸೆಕ್
- ಹೊರಹರಿವು: 1,821 ಕ್ಯೂಸೆಕ್
- ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
- ಇಂದಿನ ಸಂಗ್ರಹ: 23.079 ಟಿಎಂಸಿ
ಕೇವಲ ಮೂರು ದಿನಗಳ ಅಂತರದಲ್ಲೇ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 8 ಅಡಿ ಏರಿಕೆ ಕಂಡುಬಂದಿದ್ದು, ಪ್ರಸ್ತುತ 23 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ಮುಂದುವರಿದಿದ್ದು, ಇದೇ ವೇಗದಲ್ಲಿ ಇನ್ನು 10 ರಿಂದ 15 ದಿನಗಳ ಕಾಲ ನೀರು ಹರಿದುಬಂದರೆ ಕೆ.ಆರ್.ಎಸ್ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದೆ.
2. ಹೇಮಾವತಿ ಜಲಾಶಯ (ಗೊರೂರು, ಹಾಸನ)
- ಗರಿಷ್ಠ ಮಟ್ಟ: 2922.00 ಅಡಿ (37 ಟಿಎಂಸಿ)
- ಇಂದಿನ ಮಟ್ಟ: 2911.75 ಅಡಿ (28.022 ಟಿಎಂಸಿ)
- ಒಳಹರಿವು: 12,859 ಕ್ಯೂಸೆಕ್
- ಹೊರಹರಿವು: 500 ಕ್ಯೂಸೆಕ್ (ಕಾಲುವೆಗೆ: 000 ಕ್ಯೂಸೆಕ್)
ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಇದೇ ದಿನ 2921.40 ಅಡಿ (36.523 ಟಿಎಂಸಿ) ನೀರಿತ್ತು. ಆಗ 5,252 ಕ್ಯೂಸೆಕ್ ಒಳಹರಿವು, ನದಿಗೆ 2,400 ಕ್ಯೂಸೆಕ್ ಹಾಗೂ ಕಾಲುವೆಗೆ 4,300 ಕ್ಯೂಸೆಕ್ ಹೊರಹರಿವು ಇತ್ತು.
3. ತುಂಗಭದ್ರಾ ಜಲಾಶಯ (ಮುನಿರಾಬಾದ್, ಕೊಪ್ಪಳ)
- ಗರಿಷ್ಠ ಸಂಗ್ರಹ ಸಾಮರ್ಥ್ಯ: 105 ಟಿಎಂಸಿ
- ಇಂದಿನ ಸಂಗ್ರಹ: 44 ಟಿಎಂಸಿ (ನಿನ್ನೆ 40 ಟಿಎಂಸಿ ಇತ್ತು – ಒಂದೇ ದಿನದಲ್ಲಿ 4 ಟಿಎಂಸಿ ನೀರು ಸಂಗ್ರಹ)
- ಒಳಹರಿವು: 30,000ಕ್ಕೂ ಹೆಚ್ಚು ಕ್ಯೂಸೆಕ್
ಮಲೆನಾಡು ಭಾಗದಲ್ಲಿ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಹರಿದುಬರುವ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ಒಂದೇ ದಿನದಲ್ಲಿ ಜಲಾಶಯದಲ್ಲಿ 4 ಟಿಎಂಸಿ ನೀರು ಸಂಗ್ರಹಗೊಂಡಿದ್ದು, ಕೊಪ್ಪಳ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 am, Mon, 3 August 26




