AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಸುರಕ್ಷತಾ ಇಲಾಖೆ ಮೇಲೆಯೇ ನಂಬಿಕೆ ಕಳಕೊಂಡ ಬೆಂಗಳೂರಿಗರು! ಸಮೀಕ್ಷೆಯಲ್ಲಿ ಅಚ್ಚರಿಯ ಅಂಶ ಬಯಲು

ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಕಳಪೆ ಆಹಾರದ ಬಗ್ಗೆ ನಿರಂತರ ಶೋಧ ನಡೆಸುತ್ತಿದ್ದಾರೆ. ಇಷ್ಟಾದರೂ ಬೆಂಗಳೂರಿಂದ ಹೆಚ್ಚಿನ ಜನರಿಗೆ ಇಲಾಖೆಯ ಕಾರ್ಯ ವೈಖರಿ ಮೇಲೆ ವಿಶ್ವಾಸ ಕಡಿಮೆಯಾಗಿದೆ ಎಂಬ ಅಚ್ಚರಿಯ ಅಂಶ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದಿದೆ.

ಆಹಾರ ಸುರಕ್ಷತಾ ಇಲಾಖೆ ಮೇಲೆಯೇ ನಂಬಿಕೆ ಕಳಕೊಂಡ ಬೆಂಗಳೂರಿಗರು! ಸಮೀಕ್ಷೆಯಲ್ಲಿ ಅಚ್ಚರಿಯ ಅಂಶ ಬಯಲು
ಹೋಟೆಲ್​ಗಳ ಮೇಲೆ ಅಧಿಕಾರಿಗಳ ದಾಳಿ (ಸಂಗ್ರಹ ಚಿತ್ರ)Image Credit source: tv9
ಗಣಪತಿ ಶರ್ಮಾ
|

Updated on: Aug 22, 2026 | 7:49 AM

Share

ಮುಖ್ಯಾಂಶಗಳು

  • ಶೇ 43 ಮಂದಿಗೆ ಆಹಾರ ಸುರಕ್ಷತೆ ಮೇಲೆ ವಿಶ್ವಾಸವಿಲ್ಲ
  • ನಿರಂತರ ತಪಾಸಣೆಗೆ ಬೆಂಗಳೂರಿಗರ ಒತ್ತಾಯ
  • ನಾಗರಿಕರ ಆಹಾರ ಸುರಕ್ಷತಾ ತಂಡ ರಚನೆ

ಬೆಂಗಳೂರು, ಆಗಸ್ಟ್ 22: ಬೆಂಗಳೂರಿನಲ್ಲಿ (Bengaluru) ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳ ವಿರುದ್ಧ ಅಧಿಕಾರಿಗಳು ಇತ್ತೀಚೆಗೆ ತಪಾಸಣೆ ಹಾಗೂ ದಾಳಿ ಹೆಚ್ಚಿಸಿದ್ದರೂ, ನಿಯಂತ್ರಣ ವ್ಯವಸ್ಥೆಯ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರ ವಿಶ್ವಾಸ ಇನ್ನೂ ಕಡಿಮೆಯೇ ಇದೆ ಎಂಬುದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ಲೋಕಲ್ ಸರ್ಕಲ್ಸ್ (LocalCircles) ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿನ 2,762 ನಿವಾಸಿಗಳು ಭಾಗವಹಿಸಿದ್ದು, ಶೇ 43 ಮಂದಿ ಜಿಲ್ಲಾ ಹಾಗೂ ರಾಜ್ಯ ಆಹಾರ ಮತ್ತು ಔಷಧ ಆಡಳಿತ (FDA)ದ ಮೇಲೆ ಅತ್ಯಂತ ಕಡಿಮೆ ಅಥವಾ ಯಾವುದೇ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಶೇ 31 ಮಂದಿ ಸಂಸ್ಥೆಯ ಮೇಲೆ ಕಡಿಮೆ ವಿಶ್ವಾಸವಿದೆ ಎಂದಿದ್ದಾರೆ. ಕೇವಲ ಶೇ 23 ಮಂದಿ ಮಾತ್ರ ಆಹಾರ ಸುರಕ್ಷತಾ ನಿಯಂತ್ರಣ ವ್ಯವಸ್ಥೆಯ ಮೇಲೆ ಹೆಚ್ಚಿನ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಶೇ 3 ಮಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಾಗರಿಕರ ಬೇಡಿಕೆ, ಅಭಿಪ್ರಾಯ ಏನು?

ನಗರದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ಮತ್ತು ದಾಳಿಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಆದರೆ, ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದ ಬಳಿಕ ಮಾತ್ರ ದಾಳಿ ನಡೆಸುವ ಬದಲು ವರ್ಷಪೂರ್ತಿ ನಿರಂತರವಾಗಿ ತಪಾಸಣೆ ನಡೆಸಬೇಕು ಎಂಬುದು ನಾಗರಿಕರ ಪ್ರಮುಖ ಬೇಡಿಕೆಯಾಗಿದೆ.

‘ಆಹಾರ ಮಳಿಗೆಗಳ ಮೇಲೆ ಆಗಾಗ್ಗೆ ದಾಳಿ ನಡೆಯುತ್ತಿದ್ದರೂ ವರ್ಷದ ಉಳಿದ ಅವಧಿಯಲ್ಲಿ ಏನಾಗುತ್ತಿದೆ ಎಂಬುದು ಸಾರ್ವಜನಿಕರಿಗೆ ತಿಳಿಯುವುದಿಲ್ಲ’ ಎಂದು ಹೆಬ್ಬಾಳದ ನಿವಾಸಿ ರಂಜಿತಾ ಅಯ್ಯರ್ ಎಂಬವರು ಆತಂಕ ವ್ಯಕ್ತಪಡಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ನಿಯಮಿತ ತಪಾಸಣೆ ನಡೆಯುತ್ತಿದೆಯೇ ಎಂಬ ಮಾಹಿತಿ ಗ್ರಾಹಕರಿಗೆ ಲಭ್ಯವಾಗಬೇಕು ಎಂದು ಅವರು ಹೇಳಿದ್ದಾರೆ.

ರೆಸ್ಟೋರೆಂಟ್‌ಗಳ ತಪಾಸಣೆ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಯಾವ ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ಕೊನೆಯ ಬಾರಿ ತಪಾಸಣೆ ನಡೆಸಲಾಗಿತ್ತು, ಆಗ ಯಾವ ಅಂಶಗಳು ಪತ್ತೆಯಾಗಿದ್ದವು ಎಂಬ ಮಾಹಿತಿ ಗ್ರಾಹಕರಿಗೆ ಗೋಚರಿಸುವಂತೆ ಮಾಡಬೇಕು. ಇದರಿಂದ ಆಹಾರ ಸುರಕ್ಷತಾ ವ್ಯವಸ್ಥೆಯ ಮೇಲಿನ ವಿಶ್ವಾಸ ಹೆಚ್ಚಬಹುದು ಎಂದು ನಾಗರಿಕರು ಹೇಳಿದ್ದಾರೆ.

ರಾಷ್ಟ್ರಮಟ್ಟದಲ್ಲಿಯೂ ಪರಿಸ್ಥಿತಿ ಹೆಚ್ಚು ಭಿನ್ನವಾಗಿಲ್ಲ. ದೇಶಾದ್ಯಂತ ನಡೆಸಲಾದ ಸಮೀಕ್ಷೆಯಲ್ಲಿ ಶೇ 79ರಷ್ಟು ಗ್ರಾಹಕರು ತಮ್ಮ ಸ್ಥಳೀಯ ಆಹಾರ ಸುರಕ್ಷತಾ ನಿಯಂತ್ರಣ ಸಂಸ್ಥೆಯ ಮೇಲೆ ಕಡಿಮೆ, ಅತ್ಯಂತ ಕಡಿಮೆ ಅಥವಾ ಯಾವುದೇ ವಿಶ್ವಾಸವಿಲ್ಲ ಎಂದು ತಿಳಿಸಿದ್ದಾರೆ.

ನಕಲಿ ಔಷಧಿಗಳ ಬಗ್ಗೆಯೂ ಆತಂಕ

ಆಹಾರ ಮಳಿಗೆಗಳಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಕಲಿ ಔಷಧಿಗಳ ಮಾರಾಟದ ಬಗ್ಗೆಯೂ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ಔಷಧಿ ಜಾಲ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕಳವಳ ಮತ್ತಷ್ಟು ಹೆಚ್ಚಾಗಿದೆ.

ಏತನ್ಮಧ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಅಕ್ರಮ ಅಥವಾ ಅನೈರ್ಮಲ್ಯದ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ಮೌನವಾಗಿರದೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅನುಮಾನಾಸ್ಪದ ವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳಲು ನಾಗರಿಕರ ಸಹಕಾರ ಅತ್ಯಂತ ಅಗತ್ಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಕಲಿ ಔಷಧ ದಂಧೆ ಪ್ರಕರಣ: ಪೊಲೀಸರ ಜೊತೆಗೇ ಕಿಂಗ್​ಪಿನ್​​ ಕಣ್ಣಾಮುಚ್ಚಾಲೆ?, ಲುಕ್‌ಔಟ್‌ ನೋಟಿಸ್ ಜಾರಿ

ಇದಲ್ಲದೆ, ತಾಲೂಕು ಮಟ್ಟದಲ್ಲಿ ನಾಗರಿಕರ ನೇತೃತ್ವದ ಆಹಾರ ಸುರಕ್ಷತಾ ಕಣ್ಗಾವಲು ತಂಡಗಳನ್ನು ರಚಿಸುವ ಯೋಜನೆಯನ್ನೂ ಸಚಿವರು ತಿಳಿಸಿದ್ದಾರೆ. ಆರೋಗ್ಯ ಮತ್ತು ಪೌಷ್ಟಿಕಾಂಶ ಕ್ಷೇತ್ರದ ಹಿರಿಯರು ಹಾಗೂ ನಿವೃತ್ತ ತಜ್ಞರನ್ನು ಈ ತಂಡಗಳಲ್ಲಿ ನೇಮಿಸಿ, ಆಹಾರ ಸುರಕ್ಷತಾ ಜಾರಿ ಕಾರ್ಯಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us