ಟೋಲ್​ನಲ್ಲಿ ಹೆಚ್ಚುವರಿ ಹಣ ಸಂಗ್ರಹ: ಎನ್​ಹೆಚ್ಎ​ಐ, ಟೋಲ್​​ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರ ಆಯೋಗ

|

Updated on: Apr 28, 2023 | 3:57 PM

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ರಾಯಪುರ್​​ ಟೋಲ್​​ನಲ್ಲಿ ನಿಗದಿಪಡಿಸಿದಕ್ಕಿಂತ 5 ರೂ. ಹೆಚ್ಚಿಗೆ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ದೂರು ದಾಖಲಾಗಿದೆ.

ಟೋಲ್​ನಲ್ಲಿ ಹೆಚ್ಚುವರಿ ಹಣ ಸಂಗ್ರಹ: ಎನ್​ಹೆಚ್ಎ​ಐ, ಟೋಲ್​​ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರ ಆಯೋಗ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ (Bengaluru-Tumakuru National Highway) 4 ರಲ್ಲಿರುವ ​​ಟೋಲ್​​ನಲ್ಲಿ (Toll) ನಿಗದಿಪಡಿಸಿದಕ್ಕಿಂತ 5 ರೂ. ಹೆಚ್ಚಿಗೆ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ದೂರು ದಾಖಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವೂ (Karnataka State Consumer Disputes Redressal Commission), ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಟೋಲ್​ ರೋಡ್​ ಲಿಮಿಟೆಡ್​​ (JAS) ಕಂಪನಿಗೆ ಖಡಕ್​​ ಸೂಚನೆ ರವಾನಿಸಿದೆ. ಪ್ರಧಿಕಾರವು ದೂರುದಾರರಿಗೆ 10ರೂ. ಹಣವನ್ನು ಮರಳಿ ನೀಡಬೇಕು. ಪರಿಹಾರ ರೂಪದಲ್ಲಿ 5 ಸಾವಿರ ರೂ. ಹಾಗೂ ದಾವೆ ವೆಚ್ಚ ರೂಪದಲ್ಲಿ 3 ಸಾವಿರ ರೂ. ನೀಡುವಂತೆ ಆದೇಶ ಹೊರಡಿಸಿದೆ.

ಹೆಚ್ಚುವರಿ ಟೋಲ್​ ಸಂಗ್ರಹ ಪ್ರಕರಣ

ಎಂಬಿ ಸಂತೋಷ್​ ಕುಮಾರ್​ ಎಂಬುವರು 2020ರ ಫೆಬ್ರವರಿ 20 ಮತ್ತು ಮೇ 16 ರಂದು ಎರಡು ಬಾರಿ ಎನ್​ಹೆಚ್​ 4ನಲ್ಲಿ ಸಂಚರಿಸಿದ್ದಾರೆ. 2 ಸಲವೂ ರಾಯಪುರ್ ಬಳಿ ಇರುವ ಎರಡು​ ಟೋಲ್​​ಗಳಲ್ಲಿ 40ರೂ. ಹಣವನ್ನು ನೀಡಿದ್ದರು. ಆದರೆ ಎನ್​ಹೆಚ್​​ಎಐ ಮತ್ತು ಟೋಲ್ ಕಂಪನಿಯು, ಎರಡೂ ಟೋಲ್ ಪ್ಲಾಜಾಗಳನ್ನು ದಾಟಲು 35 ರೂ. ಅನ್ನು ಮಾತ್ರ ನಿಗದಿಪಡಿಸಿವೆ. ಆದರೆ ಟೋಲ್​ನಲ್ಲಿ ಪ್ರತಿ ಪ್ರಯಾಣಕ್ಕೆ ಪ್ರಯಾಣಿಕರಿಂದ ಹೆಚ್ಚುವರಿಯಾಗಿ 5 ರೂ. ಅನ್ನು ಪಡೆಯುತ್ತಿದ್ದಾರೆ ಎಂದು ಸಂತೋಷ್​ ಕುಮಾರ್ ಅವರು ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಆಯೋಗವೂ ಎನ್​ಹೆಚ್​​​ಎಐ ಮತ್ತು ಟೋಲ್​ ಕಂಪನಿಗೆ ಸೂಚನೆ ರವಾನಿಸಿದೆ.

ಅಲ್ಲದೇ ಆಯೋಗವೂ ಫಾಸ್ಟ್‌ಟ್ಯಾಗ್ ಬಗ್ಗೆ ಕೂಡ ಕಳವಳ ವ್ಯಕ್ತಪಡಿಸಿದೆ. ಟೋಲ್​​ನಲ್ಲಿ ಅಳವಡಿಸಲಾಗಿರುವ ಫಾಸ್ಟ್‌ಟ್ಯಾಗ್​ನಲ್ಲಿ ಸಮಸ್ಯೆ ಇದೆ. ಇದರಿಂದ ಪ್ರಯಾಣಿಕರ ಖಾತೆಯಿಂದ ಹೆಚ್ಚಿನ ಹಣ ಕಟ್​ ಆಗುವು ಸಾಧ್ಯತೆ ಇದೆ. ಅಲ್ಲದೇ ಹಣ ಕಟ್​ ಆದ ಬಗ್ಗೆ ಎಸ್​ಎಮ್​ಎಸ್​ ತಡವಾಗಿ ಬರುವುದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಬೇಗನೆ ಬಗೆಹರಿಸಿ ಎಂದು ಸೂಚನೆ ನೀಡಿದೆ.

ಇದನ್ನೂ ಓದಿ: Bengaluru-Tumkuru Highway: ಬೆಂಗಳೂರು-ತುಮಕೂರು ಚತುಷ್ಪಥ ರಸ್ತೆ 2025ಕ್ಕೆ ದಶಪಥ ಹೆದ್ದಾರಿ

ಫಾಸ್ಟ್‌ಟ್ಯಾಗ್​ನಂತಹ ತಂತ್ರಜ್ಞಾನಗಳು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಮತ್ತು ವಾಹನ ಚಾಲಕರಿಗೆ ಸುಲಭ ಮತ್ತು ವೇಗದ ಸೇವೆಯನ್ನು ನೀಡಲು ಅಳವಡಿಸಲಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳನ್ನು ಅರಿತು ಶೀಘ್ರವೇ ಪರಿಹರಿಸುತ್ತಾರೆ ಎಂದು ವಾಹನ ಸವಾರರು ನಿರೀಕ್ಷಿಸಿದ್ದಾರೆ. ಆದ್ದರಿಂದ, ಸಮಸ್ಯೆಗಳನ್ನು ಸರಿಪಡಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಬಂಧಿಸಿದ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಪಡಿಸಬೇಕು ಎಂದು ಆಯೋಗ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ