ಜನಸ್ಪಂದನಕ್ಕೆ ಚಾಲನೆ; ಏನೇ ಸಮಸ್ಯೆ ಇದ್ರೂ ಹೇಳಿ, ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್

| Updated By: ಆಯೇಷಾ ಬಾನು

Updated on: Jan 03, 2024 | 1:43 PM

ಇಂದು ಕೆ.ಆರ್​.ಪುರಂನ ಐಟಿಐ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಏನೇ ಸಮಸ್ಯೆ ಇದ್ರೂ ಹೇಳಿ. ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಎಂದಿದ್ದಾರೆ. ಜೊತೆಗೆ ರಾಮ ಮಂದಿರ ಉದ್ಘಾಟನೆಗೆ ಮಂತ್ರಾಕ್ಷತೆ ಹಂಚುತ್ತಿರುವ ಬಿಜೆಪಿ ನಾಯಕರಿಗೆ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಜನಸ್ಪಂದನಕ್ಕೆ ಚಾಲನೆ; ಏನೇ ಸಮಸ್ಯೆ ಇದ್ರೂ ಹೇಳಿ, ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಎಂದ ಡಿಸಿಎಂ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಜ.03: ಇಂದಿನಿಂದ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ (Janaspandana Program) ನಡೆಯುತ್ತಿದ್ದು, ಇಂದು ಕೆ.ಆರ್​.ಪುರಂನ ಐಟಿಐ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಶಾಸಕರಾದ ಭೈರತಿ ಬಸವರಾಜ್ ಹಾಗೂ ಮಂಜುಳಾ ಲಿಂಬಾವಳಿ, ಮಾಜಿ ಶಾಸಕರಾದ ನಾಗೇಶ್, ಪೂರ್ಣಿಮಾ, BBMP ಕಮಿಷನರ್ ತುಷಾರ್ ಗಿರಿನಾಥ್, ವಿವಿಧ ಪ್ರಾಧಿಕಾರಿಗಳ ಅಧ್ಯಕ್ಷ ರಾಕೇಶ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಏನೇ ಸಮಸ್ಯೆ ಇದ್ರೂ ಹೇಳಿ. ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಎಂದಿದ್ದಾರೆ.

ನೀವು ನಮ್ಮನ್ನು ಭೇಟಿ ಮಾಡಲು ಬಹಳ ಕಷ್ಟ ಆಗುತ್ತೆ. ಶಾಸಕರಿಗೆ ಬಹಳಷ್ಟು ಒತ್ತಡ ಇರುತ್ತೆ. ಹೀಗಾಗಿ ಎಲ್ಲಾ ಅಧಿಕಾರಿಗಳನ್ನು ಕರೆದುಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಇವತ್ತು ಸಾಯಂಕಾಲದವರೆಗೂ ನಾನು ಇಲ್ಲೇ ಇರ್ತಿನಿ. ನಿಮ್ಮ‌ ಸಮಸ್ಯೆ ಕೇಳಿಯೇ ಹೋಗ್ತಿನಿ. ಮೊದಲು ಕೌಂಟರ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ನಿಮ್ಮ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜ್ ಹಾಗೂ ಮಂಜುಳಾ ಲಿಂಬಾವಳಿ ಸಾಕಷ್ಟು ಬೇಡಿಕೆ ಇಟ್ಟಿದ್ದಾರೆ. ನನಗೆ ರಾಜಕಾರಣ ಮುಖ್ಯ ಅಲ್ಲ. ನಿಮ್ಮ ಬದುಕಿನ ಮೇಲೆ ರಾಜಕಾರಣ ಮಾಡಲ್ಲ. ನಾನು ನಿಮ್ಮ ಕಷ್ಟ ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಬಳಿಕ ಡಿಕೆ ಶಿವಕುಮಾರ್ ಅವರು ಜನರನ್ನುದ್ಧೇಶಿಸಿ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಜನಸ್ಪಂದನ ಕಾರ್ಯಕ್ರಮ; ಐಟಿಐ ಕ್ರೀಡಾಂಗಣದಲ್ಲಿ ನಡೆದಿದೆ ವಿಶೇಷ ಸಿದ್ಧತೆ, ಮಾಹಿತಿ ಇಲ್ಲಿದೆ

ಗ್ಯಾರಂಟಿ ಸಮಸ್ಯೆ ಇದ್ದರೂ ತೆಗೆದುಕೊಂಡು ಬನ್ನಿ. ಬೆಂಗಳೂರು ನಗರದಲ್ಲಿ ನಾನೇ 10 ಕಡೆ ಹೋಗಿ ಸಮಸ್ಯೆ ಆಲಿಸುತ್ತೇನೆ. ಮುಖ್ಯವಾಗಿ ಕುಡಿಯುವ ನೀರು, ಫ್ಲೈ ಓವರ್, ಕಾಮಗಾರಿ ನಿಲ್ಲಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಸ ದೊಡ್ಡ ಸಮಸ್ಯೆ ಆಗಿದೆ. ಕಸವನ್ನು ತುಂಬಿಕೊಂಡು ಹೋದರೆ ಮತ್ತೆ ಸಮಸ್ಯೆ ಆಗುತ್ತೆ. ಕಸವನ್ನು ಸುಡುವ ಕೆಲಸ ಮಾಡಬೇಕಾಗಿದೆ. ಅದಕ್ಕೆ ಟೆಂಡರ್ ಕರೆಯುತ್ತಿದ್ದೇನೆ. ಕೆರೆ ಹೂಳು ತೆಗೆಯುವ ಬಗ್ಗೆ ಮಂಜುಳಾ ಲಿಂಬಾವಳಿ ಹೇಳಿದ್ರು. ಬೃಹತ್ ರಾಜ ಕಾಲುವೆಯ ಮಧ್ಯದಿಂದ 50 ಮೀಟರ್ ಏನು ಕಟ್ಟುವಂತಿಲ್ಲ. ಬಫರ್ ಜೋನ್ ಬಿಟ್ಟು ಮನೆಗಳ ನಿರ್ಮಾಣವಾಗಬೇಕು. 30*40 ನಿವೇಶನದಲ್ಲಿ ಐದಾರು ಮಹಡಿ ಕಟ್ಟುತ್ತೀರ. ಆದರೆ ಟ್ಯಾಕ್ಸ್ ಸರಿಯಾಗಿ ಕಟ್ಟುತ್ತಿಲ್ಲ. ಹೆಚ್ಚಿನ ಟ್ಯಾಕ್ಸ್ ಕಟ್ಟಿಲ್ಲ ಅಂದರೆ ನಾವು ಅಭಿವೃದ್ಧಿ ಮಾಡೋಕೆ ಆಗಲ್ಲ. ಒಂದು ವರ್ಷದ ಒಳಗಡೆ ಉಚಿತವಾಗಿ ಖಾತೆ ಮಾಡಿ ಮನೆ ಬಾಗಿಲಿಗೆ ತಂದು ಕೊಡುತ್ತೇವೆ. ಅನೇಕ ಭಾಗ್ಯಗಳು ಜನರಿಗೆ ಸಿಕ್ಕಿದೆ. 1 ಕೋಟಿ ಜನರಿಗೆ ಗೃಹ ಲಕ್ಷ್ಮಿ ಯೋಜನೆ ತಲುಪಿದೆ ಎಂದರು.

ರಾಮ ಮಂದಿರ ಉದ್ಘಾಟನೆಗೆ ಮಂತ್ರಾಕ್ಷತೆ ಹಂಚುತ್ತಿರುವವರಿಗೆ ಡಿಕೆಶಿ ಟಾಂಗ್

ಇನ್ನು ಇದೇ ವೇಳೆ ರಾಮ ಮಂದಿರ ಉದ್ಘಾಟನೆಗೆ ಮಂತ್ರಾಕ್ಷತೆ ಹಂಚುತ್ತಿರುವ ಬಿಜೆಪಿ ನಾಯಕರಿಗೆ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಈಗಾಗಲೇ ದೇವಸ್ಥಾನದ ಮಂತ್ರಾಕ್ಷತೆ ಹಲವು ಕಡೆ ತಲುಪುತ್ತಿದೆ. ಆದರೆ ನಾವು ನಮ್ಮ ಅನ್ನಭಾಗ್ಯದಲ್ಲಿ ನೀಡುವ ಅಕ್ಕಿಯೇ ಅಕ್ಷತೆ. ನಿಮಗೆ ನಾವು ಕೊಡುವ ಅನ್ನಭಾಗ್ಯದ ಅಕ್ಕಿಯೇ ನಿಮಗೆ ಕೊಡುವ ಅಕ್ಷತೆ. ನಾವು ರಾಜಕಾರಣದ ಬಗ್ಗೆ ಇಲ್ಲಿ ಮಾತಾಡಲ್ಲ ಎಂದು ಭಾಷಣ ಮುಗಿಸಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಜನರಿಗೆ ಆಸನ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಹಾಗೂ ಮಧ್ಯಾಹ್ನದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು ಬಗೆಹರಿಸಲು ಸಾಫ್ಟ್ ವೇರ್ ವ್ಯವಸ್ಥೆ ಮಾಡಲಾಗಿದೆ. ಟೋಕನ್ ಗಳನ್ನು ಪಡೆಯಲು 10 ಕೌಂಟರ್​ಗಳಿದ್ದು, ನೇರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್​ರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಇದೆ. BBMP, ಬಿಡಿಎ, ಬೆಸ್ಕಾಂ, ಜಲಮಂಡಳಿ, BMRCL, ಕೊಳಗೇರಿ ಅಭಿವೃದ್ಧಿ ಮಂಡಳಿ, ಪೊಲೀಸ್ ಇಲಾಖೆ, BMTC, ಕಂದಾಯ ಇಲಾಖೆ ಸೇರಿ ಬಹುತೇಕ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

ಜನವರಿ 5 ರಂದು ಯಲಹಂಕ ನ್ಯೂ ಟೌನ್​ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜನಸ್ಪಂದನ ನಡೆಯಲಿದೆ. ಇದ್ರಲ್ಲಿ ಯಲಹಂಕ, ಬ್ಯಾಟರಾಯನಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆ ಆಲಿಸಲಿದ್ದಾರೆ. ಅದರಂತೆ ಜನವರಿ 7 ರಂದು R.B.N.N.M.S ಹೈಸ್ಕೂಲ್ ಮೈದಾನ, ಸೆಂಟ್ ಜಾನ್ಸ್ ರಸ್ತೆ, ಶಿವನ್ ಚೆಟ್ಟಿ ಗಾರ್ಡನ್ ನಲ್ಲಿ ಜನಸ್ಪಂದನ ನಡೆಯಲಿದ್ದು, ಹೆಬ್ಬಾಳ, ಶಿವಾಜಿನಗರ ಮತ್ತು ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ