ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣದ ಬಗ್ಗೆ ಡಿಕೆ ಶಿವಕುಮಾರ್​ ಹೇಳಿಕೆ ವಿಚಾರ: ಸರಣಿ ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ ಬಿಜೆಪಿ

ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಮಾಡಿಸಿದೆ ಎಂದು ಡಿ.ಕೆ. ಶಿವಕುಮಾರ್​ ಆರೋಪಕ್ಕೆ ಬಿಜೆಪಿ ಟ್ವೀಟ್​ ಮೂಲಕ ಕಿಡಿಕಾರಿದೆ.

ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣದ ಬಗ್ಗೆ ಡಿಕೆ ಶಿವಕುಮಾರ್​ ಹೇಳಿಕೆ ವಿಚಾರ: ಸರಣಿ ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ ಬಿಜೆಪಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
Edited By:

Updated on: Dec 15, 2022 | 5:09 PM

ಬೆಂಗಳೂರು: ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್​ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಮಾಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಗಂಭೀರ ಆರೋಪ ಮಾಡಿದ್ದರು. ಸದ್ಯ ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಯೊಬ್ಬ ಬಿಜೆಪಿ ನಾಯಕರು ಡಿ.ಕೆ. ಶಿವಕುಮಾರ್​ಗೆ ತಿರುಗೇಟು ನೀಡುತ್ತಿದ್ದಾರೆ. ಇದೇ ವಿಚಾರಕ್ಕೆ ಸರಣಿ ಟ್ವೀಟ್​ ಮಾಡುವ ಮೂಲಕ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಕುಕ್ಕರ್ ಸ್ಫೋಟದ ಭಯೋತ್ಪಾದಕ ಪ್ರಕರಣವನ್ನು “ಭಯೋತ್ಪಾದಕ ಕೃತ್ಯ” ಎಂದು ಡಿಜಿಪಿಯವರು ತನಿಖೆಯ ಆಧಾರದಲ್ಲಿ ಘೋಷಿಸಿದರೆ. ಆದರೆ ಡಿ.ಕೆ. ಶಿವಕುಮಾರ್​ ಕೆಂಡಾಮಂಡಲವಾಗಿದ್ದಾರೆ. ಉಗ್ರನನ್ನು ಉಗ್ರ ಎನ್ನದೇ ಡಿಕೆಶಿಯವರ ಹಾಗೆ “ನಮ್ಮ ಬ್ರದರ್ಸ್” ಎನ್ನಬೇಕಿತ್ತೇನು? ದೇಶದ ಭದ್ರತೆಯ ವಿಚಾರದಲ್ಲಿ ಕಾಂಗ್ರೆಸ್ ಉಗ್ರರ ಪರ ನಿಲ್ಲುತ್ತಿದೆ ಎಂದು ವಾಗ್ದಾಳಿ ಮಾಡಿದೆ.

ಸ್ಫೋಟದ ಬಳಿಕ ಎನ್​ಐಎ ಇಂಡಿಯಾ ಪ್ರಕರಣವನ್ನು ತೀವ್ರಗತಿಯಲ್ಲಿ ಪರಿಗಣಿಸಿ ಡಿಕೆಶಿ ‘ಬ್ರದರ್’‌ನನ್ನು ಬಂಧಿಸಿದ ನಂತರ ಉಗ್ರಗಾಮಿ ಸಂಘಟನೆಗಳು ನೇರವಾಗಿ ಬೆಂಬಲ ಘೋಷಿಸಿದ್ದೂ ಅಲ್ಲದೇ ‘ನಮ್ಮ ಹುಡುಗ ಯಶಸ್ವಿಯಾಗಿದ್ದಾನೆ’ ಎಂದು ಹೇಳಿಕೆ‌ ನೀಡಿತ್ತು. ಹಾಗಾದರದೂ ಉಗ್ರವಾದವಲ್ಲವೇ ಎಂದು ಪ್ರಶ್ನಿಸಿದೆ. ಉಗ್ರಗಾಮಿಗಳೇ‌ “ಉಗ್ರ ನಮ್ಮವನು” ಎಂದು ಅಬ್ಬರಿಸಿದರು ಡಿ.ಕೆ. ಶಿವಕುಮಾರ್​ ಒಪ್ಪಿಕೊಳ್ಳದಿರುವುದು ಯಾಕಾಗಿ? ಒಂದು ಸಮುದಾಯದಿಂದ ಸಿಗೋ ನಾಲ್ಕು ಮತಗಳಿಗಾಗಿ ಉಗ್ರನನ್ನೇ‌ ಉಗ್ರನಲ್ಲ ಎನ್ನುವ ಹಂತದಲ್ಲಿ ಕಾಂಗ್ರೆಸ್ ‌ಇದೆ ಎಂದರೆ,‌ ಇವರಿಗೆ ಅಧಿಕಾರ ಕೊಟ್ಟರೆ ಉಗ್ರರ ಟೆಕ್ ಪಾರ್ಕ್‌ನ್ನೇ ನಿರ್ಮಿಸಿದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಹರಿಹಾಯ್ದಿದೆ.

ಇದನ್ನೂ ಓದಿ: ಮಾಗಿದ ಆರ್​ವಿ ದೇಶಪಾಂಡೆಗೆ ಮರೆವು, ಡಿಕೆ ಶಿವಕುಮಾರ್ ಎದುರು ಮುಜುಗರಕ್ಕೀಡಾದ ಹಿರಿಯ ನಾಯಕ!

ಕಾಂಗ್ರೆಸ್ ಇಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ್ದೆಲ್ಲವೂ ಇಂಥದ್ದೇ. ನಿಜವಾದ ಉಗ್ರರನ್ನು ಬಚ್ಚಿಟ್ಟು, ಹಿಂದೂಗಳ ಮೇಲೆಯೇ ಉಗ್ರರು ಎಂದು ಸುಳ್ಳು ಕೇಸ್ ಹಾಕುತ್ತಾ ಕುಳಿತಿದ್ದಕ್ಕೇ ಅಲ್ಲವೇ ಮುಂಬೈ ತಾಜ್ ಮೇಲೆ‌ ಉಗ್ರರ ದಾಳಿಯಾಗಿದ್ದು? ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸವಿದ್ದಿದ್ದು? ಮಂಗಳೂರು ಕುಕ್ಕರ್ ಸ್ಪೋಟವನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷರು ತಮ್ಮದು ಭಯೋತ್ಪಾದನಾ ಸಮರ್ಥಕರ ಪಕ್ಷ ಎಂದು ಘೋಷಿಸಿಕೊಂಡಿದೆ. ಚುನಾವಣೆ ಸಮೀಪಿಸಿದಾಗ ಭಾವನಾತ್ಮಕ ಸಂಗತಿಗಳ ಹರಡುವಿಕೆ ಎನ್ನುವ ಡಿಕೆಶಿಯವರು, ದೇಶದ ಭದ್ರತೆಗೆ ಕಂಟಕ ತರುವ ಹೇಳಿಕೆ ನೀಡಿದ್ದಾರೆ.


ಮಂಗಳೂರು ಕುಕ್ಕರ್ ಸ್ಫೋಟವನ್ನು ಇಡೀ ಸಮಾಜ ಖಂಡಿಸಿದೆ. ಮುಸಲ್ಮಾನ ಸಮಾಜವೂ ಅದನ್ನು ಖಂಡಿಸಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಅದನ್ನು ಸಮರ್ಥಿಸಿಕೊಳ್ಳುತ್ತಾರೆ! ಆ ಮೂಲಕ ತಾವು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದರ ಮುನ್ಸೂಚನೆಯನ್ನು ನೀಡಿದ್ದಾರೆ. ಸರ್ಜಿಕಲ್ ಸ್ಟ್ರೈಕನ್ನು ಅಲ್ಲಗೆಳೆದರು, ಏರ್ ಸ್ಟ್ರೈಕನ್ನು ಅಲ್ಲಗೆಳೆದರು, ಪುಲ್ವಾಮಾ ದಾಳಿಯನ್ನು ಪಾಕಿಸ್ಥಾನದಲ್ಲ ಎಂದು ಸಮರ್ಥಿಸಿಕೊಂಡರು. ದೇಶದಲ್ಲಿ ನಡೆದ ಬಹುತೇಕ ಭಯೋತ್ಪಾದನಾ ಘಟನೆಗಳನ್ನೂ ಸಮರ್ಥಿಸಿಕೊಂಡರು. ಕಾಂಗ್ರೆಸ್ ಏನನ್ನು ಹೇಳಲು ಹೊರಟಿದೆ? ಭಯೋತ್ಪಾದಕರನ್ನು ಭಯೋತ್ಪಾದಕೆನ್ನಲು ಕಾಂಗ್ರೇಸಿಗೇಕೆ ಭಯ?

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಉಗ್ರ ಯಾಸಿನ್ ಮಲಿಕ್‌ಗೆ ಪ್ರಧಾನಿಗಳ ಕಚೇರಿಯವರೆಗೂ ಸಂಪರ್ಕ-ಸಂಬಂಧ-ಬಾಂಧವ್ಯವಿತ್ತು‌. ಕಾಂಗ್ರೆಸ್ ಸರ್ಕಾರವಿಲ್ಲದಿರುವ ಈಗ ಪೊಲೀಸರು ಉಗ್ರರು ಯಾರು ಎಂದು ಡಿಕೆಶಿಯವರನ್ನು ಕೇಳಿ ನಿರ್ಧರಿಸಬೇಕೆಂದರೆ, ಅಧಿಕಾರವಿದ್ದಾಗ ಎಷ್ಟು ಉಗ್ರರನ್ನು ಧರ್ಮ ಪ್ರಚಾರಕರನ್ನಾಗಿಸಿರಬಹುದು? ಓಲೈಕೆ ರಾಜಕಾರಣದ ಕುಳಿಗೆ ಬಿದ್ದ ಕಾಂಗ್ರೆಸಿಗೆ ಸ್ವತಃ ತಾನೇ ಕುಳಿಗೆ ಬಿದ್ದಿದೆ ಕುಕ್ಕರ್ ಬಾಂಬ್ ಸ್ಪೋಟವನ್ನು ಸಮರ್ಥಿಸುವ ಮೂಲಕ ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗ ಮಾಡಲುಹೊರಟಿದೆ. ಮುಂದಿನ ಚುನಾವಣೆಯಲ್ಲಿ “ಸ್ಪೋಟಕ್ಕೆ ಬೆಂಬಲ”, “ಸ್ಪೋಟಕ್ಕೆ ಸಮರ್ಥನೆ” ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದರೂ ಆಶ್ಚರ್ಯವಿಲ್ಲ ಎಂದಿದೆ.

'How Did They Declare Him Terrorist?': DK Shivakumar Backs Mangaluru Blast Accused, Sparks Row

ಉಗ್ರರನ್ನು ಉಗ್ರ ಎಂದು ಕರೆದರೆ ಬೇಸರವಾಗುವುದು ಉಗ್ರನ ತಂದೆ ತಾಯಿಗೆ ಅಥವಾ ಡಿಕೆಶಿಗೆ ಮಾತ್ರ. ಈಗ ಜನರು ನಿರ್ಧರಿಸಬೇಕಿದೆ. ಉಗ್ರರನ್ನು ಮಟ್ಟಹಾಕುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಬೇಕೋ, ಉಗ್ರರು-ರೌಡಿಗಳ ಪಾಲನೆ ಪೋಷಣೆ ಮಾಡಿ ಉಗ್ರರನ್ನು ಬ್ರದರ್ಸ್ ಎನ್ನುವ ಕಾಂಗ್ರೆಸ್ ಬೇಕೋ ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:08 pm, Thu, 15 December 22

Follow Us