ಬೆಂಗಳೂರು: ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ಹಿಟಾಚಿ‌ ಕಳವು, ಇಬ್ಬರ ಬಂಧನ

ಕೋರ್ಟ್​ ಆವರಣದಲ್ಲಿ ಕಾಮಗಾರಿಗಾಗಿ ನಿಲ್ಲಿಸಿದ್ದ ಹಿಟಾಚಿಯನ್ನು ಕಳವು ಮಾಡಲಾಗಿದೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​​ ಆವರಣದಲ್ಲಿದ್ದ ಹಿಟಾಚಿಯನ್ನು ಕದಿದ್ದ ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ಹಿಟಾಚಿ‌ ಕಳವು, ಇಬ್ಬರ ಬಂಧನ
ಸಿಟಿ ಸಿವಿಲ್ ಕೋರ್ಟ್
Follow us
| Updated By: ವಿವೇಕ ಬಿರಾದಾರ

Updated on: Jul 20, 2024 | 11:24 AM

ಬೆಂಗಳೂರು, ಜುಲೈ 20: ಸಿಟಿ ಸಿವಿಲ್ ಕೋರ್ಟ್​​ (City Civil Court) ಆವರಣದಲ್ಲಿದ್ದ ಹಿಟಾಚಿಯನ್ನು ಕದ್ದಿದ್ದ ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು (Halasuru Gate Police Station) ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಜಿಗಣಿಯಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಟಿ ಸಿವಿಲ್ ಕೋರ್ಟ್​​ ಆವರಣದಲ್ಲಿ ಕಾಮಗಾರಿಗೆಂದು ಹಿಟಾಚಿ‌ ತರಿಸಲಾಗಿತ್ತು. ಕಾಮಗಾರಿ‌ ಬಳಿಕ ಕೋರ್ಟ್​ ಆವರಣದಲ್ಲೇ ಹಿಟಾಚಿ‌ ನಿಲ್ಲಿಸಲಾಗಿತ್ತು.

ಜು.17ರ ರಾತ್ರಿ 1 ಗಂಟೆ ಸುಮಾರಿಗೆ ನಾಲ್ವರು ಕಳ್ಳರು ಲಾರಿ ಸಮೇತ ಕೋರ್ಟ್​ ಬಳಿ ಬಂದಿದ್ದರು. ಸೆಕ್ಯೂರಿಟಿ ಬಳಿ ಆವರಣದಲ್ಲಿರುವ ಹಿಟಾಚಿ ನಮ್ಮದೆ, ಕೆಲಸ ಮುಗಿದಿದೆ ತೆಗೆದುಕೊಂಡು ಹೋಗ್ತೀವಿ ಅಂತ ಕಥೆ ಕಟ್ಟಿದ್ದರು. ಇದನ್ನು ನಂಬಿದ ಸೆಕ್ಯೂರಿಟಿ ಆರೋಪಿಗಳನ್ನು ಒಳಗೆ ಬಿಟ್ಟಿದ್ದಾರೆ. ಬಳಿಕ ಕಳ್ಳರು ಲಾರಿಯಲ್ಲಿ ಹಿಟಾಚಿ ಹೇರಿಕೊಂಡು ಪರಾರಿಯಾಗಿದ್ದಾರೆ. ಹಿಟಾಚಿ ಕದಿಯುವ ಖತರ್ನಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಜಿಗಣಿಯಲ್ಲಿ‌ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗೆ ಹುಡುಕಾಟ ನಡೆಸಿದ್ದಾರೆ.

ಮನೆಯಲ್ಲಿನ ಚಿನ್ನಾಭರಣ ದೋಚಿ ಪರಾರಿ

ತುಮಕೂರು: ಪಾವಗಡ ಪಟ್ಟಣದ ಶ್ರೀನಿವಾಸ್ ನಗರದ ಜ್ಞಾನಭೂದಿನಿ ಶಾಲೆ ಬಳಿಯಿರುವ ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳರು ಜಿಲಾನಿ ಎಂಬುವರ ಮನೆಯ ಬೀಗ ಒಡೆದು ಒಂದು ಲಕ್ಷ ನಗದು ಜೊತೆಗೆ ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಂಢರಪುರಕ್ಕೆ ತೆರಳಿದ್ದ ಕನ್ನಡಿಗರ ಮೇಲೆ ಹಲ್ಲೆ

ಬೆಳಗಾವಿ: ಪಂಢರಪುರ ವಿಠ್ಠಲನ ದರ್ಶನಕ್ಕೆ ತೆರಳಿದ್ದ ಕನ್ನಡಿಗರ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ ನಡೆದಿದೆ. ಬೆಳಗಾವಿ ತಾಲೂಕಿನ ತುರುಮುರಿ‌ ಗ್ರಾಮದ 35 ಕ್ಕೂ ಹೆಚ್ಚು ‌ಜನರಿಂದ ಪಂಡರಪುರಕ್ಕೆ ತೆರಳಿದ್ದರು. ಆದರೆ ಬರುವಾಗ ಅವರಿದ್ದ ಟ್ರಕ್ ದಾರಿ ತಪ್ಪಿ ಮಹಾರಾಷ್ಟ್ರದ ಮಾಳಗಾಂವ್ ಗ್ರಾಮಕ್ಕೆ ತಲುಪಿದೆ. ಈ ವೇಳೆ ತಗಾದೆ ತೆಗೆದ ಗ್ರಾಮಸ್ಥರು ಚಾಲಕ ಮತ್ತು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸಮಯಕ್ಕೆ ಬಾರದ ರೈಲುಗಳು, ಸ್ಟೇಷನ್​ಗೆ ಮುತ್ತಿಗೆ

ನೆಲಮಂಗಲ: ನಿಗದಿತ ಸಮಯಕ್ಕೆ ರೈಲುಗಳು ಬಾರದ ಕಾರಣ ನೆಲಮಂಗಲ ತಾಲೂಕಿನ ನಿಡುವಂದ ರೈಲ್ವೆ ಸ್ಟೇಷನ್‌ಗೆ ಪ್ರಯಾಣಿಕರು ಮುತ್ತಿಗೆ ಹಾಕಿದ್ದಾರೆ. ಸರಿಯಾದ ಸಮಯಕ್ಕೆ ರೈಲುಗಳು ನಿಲ್ದಾಣ ತಲುಪದ ಹಿನ್ನೆಲೆ ಆಕ್ರೋಶವ್ಯಕ್ತಪಡಿಸಿದ್ರು. ನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ಸಾವಿರಾರು ಉದ್ಯೋಗಿಗಳು ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ