ಬೆಂಗಳೂರಿನಲ್ಲಿ ಸಂಜೆ 6 ಗಂಟೆಯಿಂದ ನಿರ್ಬಂಧ; ಹೊಸವರ್ಷಾಚರಣೆ ಹೆಸರಲ್ಲಿ ಹೆಚ್ಚು ಜನ ಸೇರದಂತೆ ಕ್ರಮ

ಹೊಸವರ್ಷಕ್ಕೆ ಕೌಂಟ್ ಡೌನ್ ನಡುವೆ ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್​ನಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಬ್ಯಾರಿಕೇಡ್ ಹಾಕಲು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಸಂಜೆ 6 ಗಂಟೆಯಿಂದ ನಿರ್ಬಂಧ; ಹೊಸವರ್ಷಾಚರಣೆ ಹೆಸರಲ್ಲಿ ಹೆಚ್ಚು ಜನ ಸೇರದಂತೆ ಕ್ರಮ
ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)
Updated By: ganapathi bhat

Updated on: Dec 31, 2021 | 3:35 PM

ಬೆಂಗಳೂರು: ನಗರದಲ್ಲಿ ಇಂದು ಸಂಜೆ 6 ಗಂಟೆಯಿಂದ ನಿರ್ಬಂಧವಿದೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಹೆಚ್ಚು ಜನರ ಸೇರಬಾರದು. ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ವಿಧಾನಸೌಧದಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಕೊರೊನಾ ಸ್ಫೋಟವಾಗಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ನಿರ್ಬಂಧ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ನಿರ್ಬಂಧ ಹಾಕಲಾಗಿದೆ. ಜನರು ತಮ್ಮ ಮನೆಗಳಲ್ಲೇ ಹೊಸವರ್ಷಾಚರಣೆ ಮಾಡಬೇಕು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಹೊಸವರ್ಷಕ್ಕೆ ಕೌಂಟ್ ಡೌನ್ ನಡುವೆ ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್​ನಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಬ್ಯಾರಿಕೇಡ್ ಹಾಕಲು ವ್ಯವಸ್ಥೆ ಮಾಡಲಾಗಿದೆ.

ಹೋಟೆಲ್, ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಆರ್ಥಿಕ ನಷ್ಟ ವಿಚಾರವಾಗಿ ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಬಂಧಗಳನ್ನ ಹಾಕಲು ನಮಗೆ ಸಂತೋಷವಿಲ್ಲ, ನಮಗೆ ನೋವಿದೆ. ಹೋಟೆಲ್ ಪಬ್ ಅವರವರ ವ್ಯಾಪರ ಮಾಡ್ತಿದ್ದಾರೆ. ಆದ್ರೆ ಸದ್ಯ ಬದುಕು ಮುಖ್ಯ. ನಾವು ಈಗಾಗಲೇ ಸ್ಮಶಾನದಲ್ಲಿ ಆ್ಯಂಬುಲೆನ್ಸ್​ಗಳು ಕ್ಯೂ ನಿಂತಿದ್ದನ್ನ ನೋಡಿದ್ದೇವೆ. ಮಾಧ್ಯಮಗಳಲ್ಲಿ ಅದನ್ನು ನೋಡುವಾಗ ತುಂಬಾ ನೋವಾಗಿದೆ. ಅದು ಆಗಬಾರದು ಅಂತಾ ನಾವೂ ಈ ರೀತಿ ನಿರ್ಬಂಧ ಮಾಡುತ್ತೇವೆ. ರಾಜ್ಯದ ಎಲ್ಲಾ ಕಡೆ ಇದೇ ಅನ್ವಯವಾಗಲಿದೆ. ಕರಾವಳಿ ಭಾಗದಲ್ಲೂ ಇದು ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಯಿಂದ ಏನೂ‌ ಆಗಲ್ಲ. ಆರೂವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಅವರು ಏನೂ ಮಾಡಲಿಲ್ಲ. ಪಾದಯಾತ್ರೆಯ ಸ್ಟಂಟ್​ನಿಂದ ಚುನಾವಣೆ ಗೆಲ್ಲಕ್ಕಾಗಲ್ಲ. ಪಾದಯಾತ್ರೆಯಿಂದ ಚುನಾವಣೆ ಗೆಲ್ತೀವಿ ಅನ್ನೋದು ಅವರ ಭ್ರಮೆ. ಪಾದಯಾತ್ರೆಗೆ ಅನುಮತಿ‌ ಕೊಡುವ ಬಗ್ಗೆ ನಿರ್ಧಾರ ತಗೋತೀವಿ ಎಂದು ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಉಡುಪಿ ಕೊರಗ ಕುಟುಂಬದ ಮೇಲೆ ಪೊಲೀಸರ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ಆಗ್ತಿದೆ. ಈಗಾಗಲೇ ಹಲ್ಲೆ ಮಾಡಿದವರನ್ನ ಸಸ್ಪೆಂಡ್ ಮಾಡಲಾಗಿದೆ. ಸಾಮೂಹಿಕವಾಗಿ ಬೇರೆಡೆ ವರ್ಗ ಮಾಡಲಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಅವರ ಕ್ಷೇತ್ರದ ಕೊರಗ ಸಮುದಾಯದವರು. ಆ ಜನಾಂಗದವರು ಮದುವೆ ಖುಷಿಯಲ್ಲಿದ್ರು. ನಮ್ಮ ಪೊಲೀಸರು ಅತಿರೇಕ ಮಾಡಿದ್ದಾರೆ. ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸ್ವತಃ ಎಸ್.ಪಿ ಅವರೇ ಹೋಗಿ ಹೇಳಿದ್ದಾರೆ. ಕುಟುಂಬದ ಮೇಲೆ ಯಾವುದೇ ಎಫ್.ಐ.ಆರ್ ಹಾಕೋದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಪಾರ್ಟಿ ಮಾಡಬೇಕಾ?; ಸಂಜೆ 6ರಿಂದ ಬೆಂಗಳೂರಿನ ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲದ ರಸ್ತೆ ಬಂದ್

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಯಾವೆಲ್ಲಾ ಪ್ರವಾಸಿ ಕೇಂದ್ರ ಬಂದ್; ಯಾವುವು ಮುಕ್ತ ಮುಕ್ತ ಮುಕ್ತ