ಡಿ. 11ರಿಂದ ಬಸವನಗುಡಿ ಕಡಲೆಕಾಯಿ ಪರಿಷೆ: ನಾಳೆಯಿಂದಲೇ ಮಾರ್ಗ ಬದಲಾವಣೆ
Kadalekai parishe 2023: ನಗರದ ಬಸವನಗುಡಿಯ ದೊಡ್ಡ ಬಸವಣ್ಣ, ದೊಡ್ಡ ಗಣಪತಿ ದೇವಸ್ಥಾನದಲ್ಲಿ ಡಿ.11ರಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯಲಿದೆ. ಹಾಗಾಗಿ ನಾಳೆಯಿಂದ ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳು ಸೇರಿದಂತೆ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು, ಡಿಸೆಂಬರ್ 08: ಡಿ. 11ರಿಂದ ಬಸವನಗುಡಿಯ ದೊಡ್ಡ ಬಸವಣ್ಣ, ದೊಡ್ಡ ಗಣಪತಿ ದೇವಸ್ಥಾನದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ (Kadalekai parishe) ನಡೆಯಲಿದೆ. ಕಡಲೆಕಾಯಿ ಪರಿಷೆಗೆ ಸಿಲಿಕಾನ್ ಸಿಟಿ ಜನರು ಸೇರಿದಂತೆ ಸುತ್ತಮುತ್ತಲ ಲಕ್ಷಾಂತರ ಜನರು ಆಗಮಿಸುತ್ತಾರೆ. ಹಾಗಾಗಿ ನಾಳೆಯಿಂದಲೇ ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮತ್ತು ಪಾರ್ಕಿಂಗ್ಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪರ್ಯಾಯ ಮಾರ್ಗಗಳು ಹೀಗಿವೆ
ಲಾಲ್ಬಾಗ್ ವೆಸ್ಟ್ಗೇಟ್ ಕಡೆಯಿಂದ ವಾಣಿವಿಲಾಸ ರಸ್ತೆ ಮೂಲಕ 5ನೇ ಮುಖ್ಯರಸ್ತೆ ಚಾಮರಾಜಪೇಟೆ, ಗಾಂಧಿಬಜಾರ್ ಮುಖ್ಯರಸ್ತೆಯಿಂದ ಬುಲ್ಟೆಂಪಲ್ ರಸ್ತೆಯ ರಾಮಕೃಷ್ಣಾಶ್ರಮ ವೃತ್ತದಲ್ಲಿ ಬಲತಿರುವು ಪಡೆಯಬೇಕು. ಹಯವದನರಾವ್ ರಸ್ತೆ ಮೂಲಕ ಗವಿಪುರಂ 3ನೇ ಅಡ್ಡರಸ್ತೆ ಮೂಲಕ ಮೌಂಟ್ಜಾಯ್ ಮೂಲಕ ಹನುಮಂತನಗರದ ಕಡೆ ತೆರಳಬಹುದಾಗಿದೆ.
ಆರ್.ವಿ.ಟೀಚರ್ಸ್ ಕಾಲೇಜ್ ಜಂಕ್ಷನ್ ಕಡೆಯಿಂದ ಟ್ರಿನಿಟಿ ಆಸ್ಪತ್ರೆ ರಸ್ತೆ, ಕೆ.ಆರ್.ರಸ್ತೆಯಲ್ಲಿ ಬ್ಯೂಗಲ್ ರಾಕ್ ರಸ್ತೆ ಮೂಲಕ ಹನುಮಂತನಗರ ಕಡೆಗೆ ಸಂಚರಿಸುವ ವಾಹನಗಳು ಟ್ಯಾಗೋರ್ ಸರ್ಕಲ್ನಲ್ಲಿ ಬಲತಿರುವು ಪಡೆಯಬೇಕು.
ಗಾಂಧಿಬಜಾರ್ ಮುಖ್ಯರಸ್ತೆ ಮೂಲಕ ರಾಮಕೃಷ್ಣಾಶ್ರಮ ಜಂಕ್ಷನ್ ಮೂಲಕ ಹಯವದನರಾವ್ ರಸ್ತೆಯಲ್ಲಿ ಗವಿಪುರಂ ಎಕ್ಸ್ಟೆಂಕ್ಷನ್ 3ನೇ ಅಡ್ಡರಸ್ತೆ ಮೂಲಕ ಮೌಂಟ್ಜಾಯ್ ರಸ್ತೆ ಮೂಲಕ ಹನುಮಂತನಗರ ಕಡೆಗೆ ತೆರಳಬೇಕು.
ಇದನ್ನೂ ಓದಿ: ಬಸವನಗುಡಿ ದೊಡ್ಡ ಗಣಪನ ದೇಗುಲ ಗೋಪುರದಲ್ಲಿ ಬಿರುಕು: ಪತ್ರ ಬರೆದ್ರೂ ಕ್ರಮಕೈಗೊಳ್ಳದ ಪುರಾತತ್ವ ಇಲಾಖೆ?
ತ್ಯಾಗರಾಜನಗರ/ಬನಶಂಕರಿ ಕಡೆಯಿಂದ 5ನೇ ಮುಖ್ಯರಸ್ತೆ, ಎನ್.ಆರ್.ಕಾಲೋನಿ ರಸ್ತೆಯಲ್ಲಿ ಬುಲ್ಟೆಂಪಲ್ ರಸ್ತೆ ಮೂಲಕ ಚಾಮರಾಜಪೇಟೆ ಕಡೆಗೆ ಸಂಚರಿಸುವ ವಾಹನಗಳು ಬುಲ್ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಅಶೋಕ್ನಗರ 2ನೇ ಕ್ರಾಸ್ ರಸ್ತೆ ಮೂಲಕ ಕತ್ರಿಗುಪ್ಪೆ ರಸ್ತೆ ಜಂಕ್ಷನ್ನಲ್ಲಿ ಬಲತಿರುವು ಪಡೆದು 3ನೇ ಮುಖ್ಯರಸ್ತೆ ನಾರಾಯಣಸ್ವಾಮಿ ಸರ್ಕಲ್ನಲ್ಲಿ ಕೆ.ಜಿ.ನಗರ ಮುಖ್ಯರಸ್ತೆ ಅಥವಾ ಹಯವದನರಾವ್ ರಸ್ತೆ ಮೂಲಕ ರಾಮಕೃಷ್ಣಾಶ್ರಮ ಜಂಕ್ಷನ್ನಿಂದ ಚಾಮರಾಜಪೇಟೆ ಕಡೆಗೆ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ವಾಹನಗಳ ಪಾರ್ಕಿಂಗ್ ವ್ಯವಸ್ಥೆ
ಬೆಂಗಳೂರಿನ ಬಸವನಗುಡಿ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಎನ್.ಆರ್.ಕಾಲೋನಿಯ ಎಪಿಎಸ್ ಕಾಲೇಜು ಮೈದಾನ, ಹಯವದನರಾವ್ ರಸ್ತೆಯ ಕೊಹಿನೂರು ಆಟದ ಮೈದಾನ ಹಾಗೂ ಬುಲ್ಟೆಂಪಲ್ ರಸ್ತೆಯ ಉದಯಭಾನು ಮೈದಾನದಲ್ಲಿ ಪಾಕಿಂಗ್ಗೆ ಅವಕಾಶ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Fri, 8 December 23