ಉದ್ಘಾಟನೆಗೆ ಸಿದ್ಧವಾದ ಪಿಂಕ್ ಲೈನ್ ಮೆಟ್ರೋ ಮಾರ್ಗ: ಕೊಂಚ ಟ್ರಾಫಿಕ್ ಸಮಸ್ಯೆಗೆ ಮುಕ್ತಿ

ಸಿಲಿಕಾನ್‌ ಸಿಟಿ ಜನರಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ ಹೊರಬಂದಿದೆ. ದೇಶದ ಅತಿ ಎತ್ತರದ ಮೆಟ್ರೋ ಸ್ಟೇಷನ್‌ ಎಂಬ ಹೆಗ್ಗಳಿಕೆ ಹೊಂದಿರುವ ಜಯದೇವ ಜಂಕ್ಷನ್‌ ಹಾಗೂ ಐದು ಹಂತದ ಸಾರಿಗೆ ಸಂಪರ್ಕ ಇರುವ ಪಿಂಕ್‌ ಲೈನ್‌ ರೆಡಿಯಾಗಿದ್ದು, ರೈಲು ಓಡಾಡಕ್ಕೆ ಹಸಿರು ನಿಶಾನೆ ತೋರಿಸಬೇಕಷ್ಟೇ. ಇನ್ನು ಈ ಲೈನ್​​​ನಲ್ಲಿ ರೈಲು ಸಂಚಾರ ಯಾವಾಗ? ಎನ್ನುವ ಡಿಟೇಲ್ಸ್ ಇಲ್ಲಿದೆ.

ಉದ್ಘಾಟನೆಗೆ ಸಿದ್ಧವಾದ ಪಿಂಕ್ ಲೈನ್ ಮೆಟ್ರೋ ಮಾರ್ಗ: ಕೊಂಚ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
Pink Line Metro

Updated on: Sep 02, 2026 | 6:14 PM

ಬೆಂಗಳೂರು, (ಸೆಪ್ಟೆಂಬರ್ 02): ದೇಶದ ಅತಿ ಎತ್ತರದ ಮೆಟ್ರೋ ಸ್ಟೇಷನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಜಯದೇವ ಜಂಕ್ಷನ್‌ ನಿಂದ ಕಾಳೇನ ಅಗ್ರಹಾರವರೆಗೆ ಪಿಂಕ್‌ ಲೈನ್‌ ಉದ್ಘಾಟನೆಗೆ ಸಿದ್ಧವಾಗಿದ್ದು, ಇಂದು (ಸೆಪ್ಟೆಂಬರ್ 02) ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ ಕೃಷ್ಣಪ್ಪ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಕೃಷ್ಣಭೈರೇಗೌಡ, ಕೇಂದ್ರ ಸರ್ಕಾರದಿಂದ ಉದ್ಘಾಟನೆ ದಿನಾಂಕ ನಿಗದಿಯಾದರೆ ಸೆಪ್ಟೆಂಬರ್‌ನಲ್ಲಿಯೇ ಸಂಚಾರ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ತೆರಳಿ ನಿಲ್ದಾಣದ ಕಾಮಗಾರಿ, ಭದ್ರತೆ ಮತ್ತು ಸಂಚಾರ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು. ಆ ನಂತರ ತೇಜಸ್ವಿ ಸೂರ್ಯ ಅವರ ಜೊತೆಗೆ ಮೆಟ್ರೋ ಲೋಕೋ ಪೈಲಟ್ ಕ್ಯಾಬಿನ್ ನಲ್ಲಿ ಕುಳಿತು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೂ ಸಂಚರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಹಬ್ಬದ ಗಿಫ್ಟ್: ಮಂಗಳೂರು ಸೇರಿ 4 ವಿಶೇಷ ರೈಲುಗಳ ಸೇವೆ ನವೆಂಬರ್‌ವರೆಗೆ ವಿಸ್ತರಣೆ

ತೇಜಸ್ವಿ ಸೂರ್ಯ ಹೇಳಿದ್ದೇನು?

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ,
ಇಂದು ಬೆಳಿಗ್ಗೆ CMRS ಅಧಿಕಾರಿಗಳೊಂದಿಗೆ ಸುರಕ್ಷತಾ ಅನುಮತಿ ಹಾಗೂ ಗಡುವಿನ ಕುರಿತು ನಾನು ಮಾತನಾಡಿ, BMRCL ಈ ಮಾರ್ಗವನ್ನು ಈ ತಿಂಗಳ ಅಂತ್ಯದೊಳಗೆ ಉದ್ಘಾಟಿಸುವ ಗುರಿ ಹೊಂದಿದ್ದು, ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ Rolling Stock ಅನುಮತಿ ದೊರೆಯುವ ನಿರೀಕ್ಷೆಯಿದ್ದು, ನಂತರ ಇಡೀ ಮಾರ್ಗಕ್ಕೆ ಅಗತ್ಯವಿರುವ ಅನುಮತಿ ದೊರೆಯಲಿದೆ.

ಪಿಂಕ್ ಲೈನ್ ಆರಂಭವಾದ್ರೆ ಸಂಚಾರ ದಟ್ಟಣೆ ಕಡಿಮೆ


ಈ ಅನುಮತಿಗಳು ಶೀಘ್ರವಾಗಿ ದೊರೆಯುವಂತೆ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತೇನೆ. ಪಿಂಕ್ ಲೈನ್ ಆರಂಭವಾದರೆ ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ. ಬೆಂಗಳೂರಿಗೆ ಬೇಕಿರುವುದು ಇಂತಹ ವೈಜ್ಞಾನಿಕ, ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಯೋಜನೆಗಳು.ನಗರದ ಹಿತದೃಷ್ಟಿಯಿಂದ ಇಂತಹ ಯೋಜನೆಗಳಿಗೆ ನಾಗರಿಕರು ಮತ್ತು ವಿರೋಧ ಪಕ್ಷವೂ ಬೆಂಬಲ ನೀಡಲಿದೆ. ಬೆಂಗಳೂರಿಗೆ ಇನ್ನಷ್ಟು ಸಾರ್ವಜನಿಕ ಸಾರಿಗೆ ಬೇಕೇ ಹೊರಟು, ‘ಟನಲ್ ರೋಡ್’ನಂತಹ ಅವೈಜ್ಞಾನಿಕ ಯೋಜನೆಗಳಲ್ಲ ಎಂದಿದ್ದಾರೆ.

ಮೊದಲ ಹಂತದಲ್ಲಿ ಯಾವೆಲ್ಲಾ ನಿಲ್ದಾಣಗಳ ನಡುವೆ ಸಂಚಾರ?

  • ಕಾಳೇನ ಅಗ್ರಹಾರ
  • ಹುಳಿಮಾವು
  • ಐಐಎಂ-ಬಿ
  • ಜೆ.ಪಿ. ನಗರ 4ನೇ ಹಂತ
  • ಜಯದೇವ ಆಸ್ಪತ್ರೆ (ಹಳದಿ ಮಾರ್ಗದ ಜತೆ ಇಂಟರ್‌ಚೇಂಜ್)
  • ತಾವರೆಕೆರೆ

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us