
ಬೆಂಗಳೂರು, ಮೇ 21: ಆನೆಗಳ ಕಾದಾಟದ ವೇಳೆ ಕುಶಾಲನಗರದ ದುಬಾರೆ ಶಿಬಿರದಲ್ಲಿ ಪ್ರವಾಸಿ ಮಹಿಳೆ ಮೃತಪಟ್ಟಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತೆರೆದ ವಾಹನಗಳಲ್ಲಿ ನಡೆಸಲಾಗುತ್ತಿದ್ದ ವನ್ಯಜೀವಿ ಸಫಾರಿಗಳಿಗೆ ಬ್ರೇಕ್ ಹಾಕಿದೆ. ಇನ್ನುಮುಂದೆ ತೆರೆದ ವಾಹನಗಳನ್ನು ಸಫಾರಿಗೆ ಬಳಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆ ಇತರ ಸಂರಕ್ಷಿತ ಪ್ರದೇಶಗಳಲ್ಲಿ ಈಗಲೂ ತೆರೆದ ಜೀಪ್ಗಳಲ್ಲಿ ಸಫಾರಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ, ಈ ವಿಷಯವನ್ನು ಕರ್ನಾಟಕದ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿರೋದಾಗಿಯೂ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡುತೆರೆದ ವಾಹನಗಳ ಬದಲು ಉಕ್ಕಿನ ಕಂಬಿಗಳಿಂದ ಬಲಪಡಿಸಿದ ಟಫೆಂಡ್ ಗ್ಲಾಸ್ ಹೊಂದಿದ ಮುಚ್ಚಿದ ವಾಹನಗಳನ್ನು ಸಫಾರಿಗೆ ಬಳಸಲು ತೀರ್ಮಾನಿಸಿದ್ದೇವೆ. ರಾಜ್ಯದ ವಿವಿಧ ಭಾಗಗಳು ಮತ್ತು ವಿದೇಶಗಳಿಂದ ನಮ್ಮ ಸಂರಕ್ಷಿತ ಪ್ರದೇಶಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸ್ಪಷ್ಟ ಸೂಚನೆ ನೀಡಿರೋದಾಗಿ ಸಚಿವ ಖಂಡ್ರೆ ಹೇಳಿದ್ದಾರೆ. ಎಲ್ಲಾ ಸಫಾರಿ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿರಬೇಕು ಮತ್ತು ತುರ್ತು ಪರಿಸ್ಥಿತಿಗೆ ಸಫಾರಿ ಕೇಂದ್ರಗಳ ಬಳಿ ಆಂಬುಲೆನ್ಸ್ ವ್ಯವಸ್ಥೆ ಇರಬೇಕು ಎಂದು ನಿರ್ದೇಶನ ನೀಡಲಾಗಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎರಡೆರಡು ಬಾರಿ ಸೆರೆ, ಮನೆಗಳ ಬಾಗಿಲು ಮುರಿದು ಪುಂಡಾಟ; ಕಾದಾಟದಲ್ಲಿ ಮೃತಪಟ್ಟ ಮಾರ್ತಾಂಡ ಆನೆಗಿತ್ತು ಭಯಂಕರ ಇತಿಹಾಸ
ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಕಾವೇರಿ ನದಿಗೆ ಸ್ನಾನಕ್ಕೆಂದು ಮಾವುತರು ಕರೆತಂದಿದ್ದರು. ಈ ವೇಳೆ ಕಂಜನ್ ಆನೆ ಮಾರ್ತಾಂಡನ ಮೇಲೆ ದಾಳಿ ಮಾಡಿದ್ದು, ಉಭಯ ಆನೆಗಳು ಪರಸ್ಪರ ಕಾದಾಡಿಕೊಂಡಿದ್ದವು. ಇವುಗಳ ನಡುವೆ ಸಿಲುಕಿದ್ದ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಆ ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಮಾರ್ತಾಂಡ ಆನೆ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.