
ಬೆಂಗಳೂರು, ನವೆಂಬರ್ 13: ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಾದಿತ ನಿರ್ಧಾರ ಕೈಗೊಳ್ಳಲಾಗಿದೆ. ಜಿಬಿಎ ವ್ಯಾಪ್ತಿಯ ಕಸ ಗುಡಿಸುವ ಯಂತ್ರಕ್ಕೆ ನೂರಾರು ಕೋಟಿ ಬಾಡಿಗೆ ನೀಡಲು ಸರ್ಕಾರ ಮುಂದಾಗಿದ್ದು, 7 ವರ್ಷದ ಅವಧಿಗೆ 46 ಕಸಗುಡಿಸುವ ಯಂತ್ರ ಬಾಡಿಗೆ ಪಡೆಯಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆ ಮತ್ತು ಉಪ ಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ ಕಸಗುಡಿಸುವ ಯಂತ್ರ ಬಾಡಿಗೆಗೆ ಪಡೆಯಲು ನಿರ್ಧರಿಸಲಾಗಿದೆ. ಇದಕ್ಕಾಗಿ 613.25 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
3 ಸಂಪುಟ ಉಪ ಸಮಿತಿಗಳು 6 ತಿಂಗಳು ಆದ್ರೂ ವರದಿ ಸಲ್ಲಿಸಿದ ಕಾರಣ, ಆದಷ್ಟು ಬೇಗ ರಿಪೋರ್ಟ್ ನೀಡಲು
ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕೋವಿಡ್ ಹಗರಣದ ಕುರಿತು ಕುನ್ಹಾ ವರದಿಯ ಪರಿಶೀಲನೆ ಉಪ ಸಮಿತಿ, ರಾಜ್ಯದ ವಿವಿಗಳ ಆರ್ಥಿಕ ಸ್ಥಿತಿಗಳ ಪರಿಶೀಲನೆಗೆ ನೇಮಿಸಿರುವ ಡಿಸಿಎಂ ನೇತೃತ್ವದ ಉಪ ಸಮಿತಿ ಮತ್ತು ನೈಸ್ ಕಾರಿಡಾರ್ ಯೋಜನೆಯ ಅನುಷ್ಠಾನ, ಮುಂದಿನ ಯೋಜನೆಯ ಪ್ರಗತಿ ಬಗ್ಗೆ ಪರಮೇಶ್ವರ್ ನೇತೃತ್ವದ ಉಪಸಮಿತಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ, ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಗೆಲುವು, ತಮಿಳುನಾಡಿನ ಅರ್ಜಿ ವಜಾ
ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ದಿನಾಂಕ ನಿಗದಿಪಡಿಸಲಾಗಿದೆ. ಡಿಸೆಂಬರ್ 8ರಿಂದ 19ರವರೆಗೆ ಬೆಳಗಾವಿ ಅಧಿವೇಶನ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾ ಆಗಿದೆ. ಮುಂದಿನ ಹೆಜ್ಜೆ ಇಡುವುದಕ್ಕಾಗಿ ಇದು ಹಸಿರು ನಿಶಾನೆ ತೋರಿಸಿದಂತಾಗಿದೆ. ಹೀಗಾಗಿ ರಾಜಕೀಯ, ಕಾನೂನಾತ್ಮಕ ಹೋರಾಟ ನಡೆಸಿದ್ದಕ್ಕಾಗಿ ಸಿಎಂ ಮತ್ತು ಡಿಸಿಎಂಗೆ ಸಂಪುಟ ಅಭಿನಂದನೆ ಸಲ್ಲಿದೆ ಎಂದೂ ಹೆಚ್.ಕೆ. ಪಾಟೀಲ್ ಈ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:14 pm, Thu, 13 November 25