ಮುಖ್ಯಮಂತ್ರಿಯಾಗಿ ಮೊದಲ ಸಿಎಲ್​ಪಿ ಸಭೆ: ಜೆನ್ ಜಿ ಬಗ್ಗೆ ಇರಲಿ ಎಚ್ಚರ , ಶಾಸಕರಿಗೆ ಖಡಕ್ ವಾರ್ನಿಂಗ್

ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಶಾಸಕರಿಗೆ ಪ್ರಮುಖ ಮಾರ್ಗದರ್ಶನ ನೀಡಿದರು. ಮುಂದಿನ ಚುನಾವಣೆಗಳಿಗೆ ಸಿದ್ಧತೆ, ಮತದಾರರ ಪಟ್ಟಿ ಪರಿಷ್ಕರಣೆ, ಪಕ್ಷದ ಆಂತರಿಕ ವಿಚಾರಗಳು ಹಾಗೂ ಯುವಶಕ್ತಿಯ ಸದ್ಬಳಕೆ ಕುರಿತು ಒತ್ತು ನೀಡಿದರು. ವಿಪಕ್ಷಗಳ ಆರೋಪಗಳನ್ನು ಎದುರಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದರು. ಪಕ್ಷದ ನಿಷ್ಠೆ ಮತ್ತು ಸಮರ್ಥ ಆಡಳಿತಕ್ಕೆ ಪ್ರಾಮುಖ್ಯತೆ ನೀಡಲಾಯಿತು.

ಮುಖ್ಯಮಂತ್ರಿಯಾಗಿ ಮೊದಲ ಸಿಎಲ್​ಪಿ ಸಭೆ: ಜೆನ್ ಜಿ ಬಗ್ಗೆ ಇರಲಿ ಎಚ್ಚರ , ಶಾಸಕರಿಗೆ ಖಡಕ್ ವಾರ್ನಿಂಗ್
ಸಾಂದರ್ಭಿಕ ಚಿತ್ರ
Edited By:

Updated on: Aug 18, 2026 | 10:09 PM

ಬೆಂಗಳೂರು, ಆ.18: ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಿತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಸಿಎಲ್​ಪಿ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಪಕ್ಷದ ಆಂತರಿಕ ವಿಚಾರಗಳು, ವಿಪಕ್ಷಗಳ ಆರೋಪಗಳು ಹಾಗೂ ಮುಂಬರುವ ಚುನಾವಣೆಗಳ ಕುರಿತು ಶಾಸಕರು ಮತ್ತು ನಾಯಕರಿಗೆ ಪ್ರಮುಖ ಮಾರ್ಗದರ್ಶನ ನೀಡಿದರು.

“ಕಳೆದ 3 ವರ್ಷಗಳಲ್ಲಿ ನಾವು ಅತ್ಯುತ್ತಮ ಆಡಳಿತ ನೀಡಿದ್ದೇವೆ. ದೇಶಕ್ಕೇ ಮಾದರಿಯಾಗುವ ರೀತಿಯಲ್ಲಿ ಸುಗಮವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ವಿರೋಧ ಪಕ್ಷದವರೂ ಆಶ್ಚರ್ಯ ಪಟ್ಟಿದ್ದಾರೆ. ಈ ಯಶಸ್ಸಿಗೆ ಕಾರಣರಾದ ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಪಕ್ಷದಲ್ಲಿ ಮಂತ್ರಿ ಆಗಲು ಅನೇಕ ಹಿರಿಯರು ಮತ್ತು ಅರ್ಹರಿದ್ದಾರೆ. ಆದರೆ ಎಲ್ಲರಿಗೂ ಅಧಿಕಾರ ನೀಡಲು ಸಾಧ್ಯವಾಗಿಲ್ಲ, ಇದಕ್ಕಾಗಿ ನನಗೂ ಬೇಸರವಿದೆ, ದಯವಿಟ್ಟು ಕ್ಷಮಿಸಿ. ಹಿಂದೆ ನನಗೂ ಮಂತ್ರಿ ಪದವಿ ಸಿಗದಿದ್ದಾಗ ನಾನು ಪ್ರಶ್ನಿಸಿರಲಿಲ್ಲ, ಅಧಿಕಾರ ಸಿಕ್ಕಾಗಲೂ ಪ್ರಶ್ನಿಸಲಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ” ಎಂದು ಹೇಳಿದರು.

“ಎಂಎಲ್​ಸಿ ಚುನಾವಣೆಯಲ್ಲಿ ನಾವು 5ನೇ ಅಭ್ಯರ್ಥಿಯನ್ನು ಗೆಲ್ಲಿಸಿದ್ದನ್ನು ಬಿಜೆಪಿ-ಜೆಡಿಎಸ್‌ನವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಅಸೆಂಬ್ಲಿಯಲ್ಲಿ ಹಂತ-ಹಂತವಾಗಿ ನಮ್ಮ ಮೇಲೆ ಬೀಳುತ್ತಿದ್ದಾರೆ. ಹಿಂದೆ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದು ನಾನು ಮತ್ತು ಸಿದ್ದರಾಮಯ್ಯ. ಆದರೆ ಅವರ ಮೇಲಿನ ಆರೋಪ ಸಾಬೀತಾಗಿಲ್ಲ. ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಮೇಲೆಯೂ ಕೇಸ್ ಇದೆಯಲ್ಲವೇ? ಅವರು ಅಧಿಕಾರದಲ್ಲಿ ಇಲ್ವಾ? ಬಿಡದಿ ವಿಚಾರದಲ್ಲೂ ಅವರೇ ಆರಂಭಿಸಿದ ಯೋಜನೆಗೆ ಈಗ ಅವರೇ ಗಲಾಟೆ ಮಾಡುತ್ತಿದ್ದಾರೆ.” ಎಂದರು.

“ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲ್ಲರೂ ಸಿದ್ಧರಾಗಿ. ತಪ್ಪುಗಳನ್ನು ತಿದ್ದಿಕೊಳ್ಳಲು ಫಲಿತಾಂಶಗಳು ಅವಕಾಶ ಮಾಡಿಕೊಡುತ್ತವೆ. ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಸುಮಾರು 1 ಕೋಟಿ ಮಂದಿ ವೋಟ್ ಕಳೆದುಕೊಳ್ಳುವ ಸ್ಥಿತಿ ಇದೆ. ನಿಮ್ಮ ಕ್ಷೇತ್ರಗಳಲ್ಲಿ ವೋಟರ್ ಲಿಸ್ಟ್ ತಿದ್ದುಪಡಿಗೆ ಜನರಿಗೆ ಅರಿವು ಮೂಡಿಸಿ. ನೀವು ಸೀರಿಯಸ್ ಆಗಿ ಕೆಲಸ ಮಾಡದಿದ್ದರೆ ಶಾಸಕರಾಗಿ ಉಳಿಯಲು ಆಸಕ್ತಿ ಇಲ್ಲ ಎಂದೇ ಅರ್ಥ.” ಎಂದು ಸಭೆಯಲ್ಲಿ ಹೇಳಿದರು.

“ಕೇಂದ್ರ ಸಚಿವರ ರಾಜೀನಾಮೆ ಪಡೆದ ಹಾಗೂ ಪ್ರಧಾನ ಮಂತ್ರಿಯನ್ನೇ ಅಲ್ಲಾಡಿಸಿದ ಜೆನ್ ಜಿ (Gen Z) ಯುವ ಪೀಳಿಗೆಯ ಬಗ್ಗೆ ಎಚ್ಚರಿಕೆಯಿಂದ ಇರಿ. ಭಾರತ್ ಜೋಡೋ ಯುವ ಕೇಂದ್ರಗಳ ಬಗ್ಗೆ ವಿಪಕ್ಷಗಳು ತಲೆಕೆಡಿಸಿಕೊಂಡಿವೆ, ನಾವು ಯುವಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು.” ಎಂದರು.

ಇದನ್ನೂ ಓದಿ; ಕರ್ನಾಟಕದಲ್ಲಿ ಲಕ್ಷಾಂತರ ಮತದಾರರ ಹೆಸರು ಡಿಲೀಟ್ ಆತಂಕ: ಸಿಇಒ ಕಚೇರಿಗೆ ದೂರು ನೀಡಿದ ಸಂಘಟನೆಗಳು

ಇನ್ನು ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಎಂಎಲ್​ಸಿಗಳಿಗೆ ಸಿಎಂ ಹಾಗೂ ಪ್ರಮುಖ ನಾಯಕರು ಹೂಗುಚ್ಛ ನೀಡಿ ಗೌರವಿಸಿದರು. ಸಭೆಯ ವೇಳೆ ನೂತನ ಎಂಎಲ್​ಸಿ ಮಳವಳ್ಳಿ ಶಿವಣ್ಣ ಅವರು ಕನಕಪುರ ವ್ಯಾಪ್ತಿಯ ಪ್ರಶ್ನೆ ಎತ್ತಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, “ಏನಯ್ಯ ಕನಕಪುರದ ಪ್ರಶ್ನೆ ಹಾಕಿದ್ದೀಯಾ?” ಎಂದು ನೇರವಾಗಿಯೇ ಪ್ರಶ್ನಿಸಿದರು. “ಮೈಸೂರಿನವರು ಕನಕಪುರದವರ ಮೇಲೆ, ಕನಕಪುರದವರು ಬೆಂಗಳೂರಿನವರ ಮೇಲೆ ಸ್ಪರ್ಧೆ ಮಾಡುತ್ತಾ ಕೂರಬಾರದು. ಪ್ರತಿಯೊಬ್ಬರೂ ಗ್ಲೋಬಲ್ ಕಾಂಪಿಟಿಷನ್ (ಜಾಗತಿಕ ಮಟ್ಟದ ಸ್ಪರ್ಧೆ) ಮಾಡಬೇಕು” ಎಂದು ನಾಯಕರಿಗೆ ಕಿವಿಮಾತು ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:06 pm, Tue, 18 August 26

Loading...
Unable to load recommendations.
Follow Us