ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರು ಮೆಟ್ರೋದ ಟಿಕೆಟ್ ದರ ಏರಿಕೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರ ಆಕ್ರೋಶಕ್ಕೆ ಮೆಟ್ರೋ ಕೆಲ ಮಾರ್ಗಗಳಲ್ಲಿ ದರ ಇಳಿಕೆ ಮಾಡಿದೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರವೇ ದರ ಏರಿಕೆಗೆ ಕಾರಣ ಎಂದಿದ್ದಾರೆ.

ಬೆಂಗಳೂರು, ಫೆಬ್ರವರಿ 15: ನಮ್ಮ ಮೆಟ್ರೋ (Namma Metro) ಬೆಂಗಳೂರಿಗರ ಜೀವನಾಡಿ. ಆದರೆ ಶೇಕಡಾ 90 ರಿಂದ 100 ರಷ್ಟು ಟಿಕೆಟ್ ದರ ಹೆಚ್ಚಿಸಿದ ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿತ್ತು. ಜನಾಕ್ರೋಶಕ್ಕೆ ಮಣಿದಿರುವ ಮೆಟ್ರೋ ಕೆಲ ಮಾರ್ಗದಲ್ಲಿ ದರ ಇಳಿಕೆ ಮಾಡಿದೆ. ಸದ್ಯ ಈ ಬಗ್ಗೆ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿದ್ದು, ಮೆಟ್ರೋ ಟಿಕೆಟ್ ದರ ಏರಿಕೆ ನಾವು ಮಾಡಿದ್ದೇವೆ ಎನ್ನುವುದು ತಪ್ಪು. ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಮೆಟ್ರೋ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತೆ
ನಗರದಲ್ಲಿ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಯೋಜನೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಟಿಕೆಟ್ ದರ ಏರಿಕೆ ಸಮಿತಿ ಇರುವುದು ದೆಹಲಿಯಲ್ಲಿ ಅಲ್ಲ. ಮೆಟ್ರೋ ಸಂಬಂಧ ಎಲ್ಲಾ ಜವಾಬ್ದಾರಿಗಳೂ ರಾಜ್ಯಕ್ಕೆ ಬರಲಿದೆ. ದರ ನಿಗದಿ ಸಮಿತಿ ಇರೋದು ಕರ್ನಾಟಕದಲ್ಲಿ, ದೆಹಲಿಯಲ್ಲಿ ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದರ ಏರಿಕೆ: ಮೆಟ್ರೋ ಪ್ರಯಾಣಿಕರ ಪರ್ಯಾಯ ವ್ಯವಸ್ಥೆ, ಬೆಂಗಳೂರಿನಲ್ಲಿ ಶುರುವಾಯ್ತು ಟ್ರಾಫಿಕ್ ಸಮಸ್ಯೆ
ರಾಜ್ಯ ಸರ್ಕಾರಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ. ಮೆಟ್ರೋ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ. ದರ ಏರಿಕೆ ಪ್ರಸ್ತಾವನೆ ಕೊಟ್ಟಿದ್ದೇ ರಾಜ್ಯ ಸರ್ಕಾರ. ರಾಜ್ಯ ಸರ್ಕಾರವೇ ಮೆಟ್ರೋ ಸಂಬಂಧ ಎಲ್ಲಾ ವಿಚಾರಗಳಿಗೂ ಕಾರಣ. ಕೇಂದ್ರ ಸರ್ಕಾರದಿಂದ ದರ ಏರಿಕೆಗೆ ಸೂಚನೆ ಕೊಟ್ಟಿಲ್ಲ, ಇದು ತಪ್ಪು ಆರೋಪ ಎಂದಿದ್ದಾರೆ.
ಟನಲ್ ರಸ್ತೆ ಯೋಜನೆಗಳು ಬೆಂಗಳೂರಿನಂತಹ ನಗರಗಳ ಸಂಚಾರ ದಟ್ಟಣೆ ಸರಳಗೊಳಿಸಲು ಹೇಳಿಮಾಡಿಸಿದ್ದಲ್ಲ. ಅದು ದುಬಾರಿ ಆಗಲಿದೆ. ಹಾಗಾಗಿ ರೈಲು ಮತ್ತು ಮೆಟ್ರೋ ಆಧಾರಿತ ಸಂಚಾರ ವ್ಯವಸ್ಥೆಗಳು ನಗರದ ಜನ ಜೀವನವನ್ನು ಸರಳಗೊಳಿಸುತ್ತವೆ. ಟನೆಲ್ ರಸ್ತೆಗಳು ಎಲ್ಲೂ ಸಂಚಾರ ದಟ್ಟಣೆಗೆ ಪರಿಹಾರ ಅಲ್ಲ ಅಂತ ನಗರ ತಜ್ಞರು ಎಲ್ಲಾ ಕಡೆ ಹೇಳಿದ್ದಾರೆ. ರೈಲ್ವೆ ಆಧಾರಿತ ಯೋಜನೆಗಳನ್ನೇ ಬೇರೆ ಬೇರೆ ದೇಶಗಳ ನಗರಗಳಲ್ಲೂ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸಮೀಪವೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ: ಅಶ್ವಿನಿ ವೈಷ್ಣವ್ ಮಾಹಿತಿ
ಬೆಂಗಳೂರಿಗೆ ಸರ್ಕ್ಯುಲರ್ ರೈಲು ಯೋಜನೆಯನ್ನು ಸದ್ಯದಲ್ಲೇ ಡಿಪಿಆರ್ ಮಾಡುತ್ತೇವೆ. ಸರ್ಕ್ಯುಲರ್ ರೈಲು ಯೋಜನೆಯನ್ನು ಬೆಂಗಳೂರಿನಲ್ಲಿ ತರುತ್ತಿದ್ದೇವೆ. ಏಳು ದಿಕ್ಕುಗಳಿಂದಲೂ ರೈಲು ಮಾರ್ಗಗಳು ಬೆಂಗಳೂರಿಗೆ ಸಂಪರ್ಕ ಕೊಡುತ್ತೇವೆ. ಈ ಏಳು ಮಾರ್ಗಗಳನ್ನೂ ಸಂಪರ್ಕಿಸುವ ಸರ್ಕ್ಯುಲರ್ ರೈಲು ಯೋಜನೆ ತರುತ್ತಿದ್ದೇವೆ. ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಮೂರು ಬಾರಿ ಟೆಂಡರ್ ರದ್ದಾಗಿತ್ತು. ಈ ರೀತಿಯ ತಾಂತ್ರಿಕ ಕಾರಣಗಳಿಂದ ರದ್ದಾಗುತ್ತಿದ್ದರೆ ಯೋಜನೆ ವೇಗಕ್ಕೆ ಅಡ್ಡಿಯಾಗುತ್ತಿದೆ. ಅದಕ್ಕಾಗಿ ನಾವು ನಿಗದಿತ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. 10 ರಿಂದ 12 ತಜ್ಞ ಇಂಜಿನಿಯರ್ಗಳನ್ನೂ ಕೊಡುವಂತೆ ಕೇಳಿದ್ದೇವೆ ಎಂದಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:52 pm, Sat, 15 February 25