ಬೆಂಗಳೂರು: ಚಿತ್ರದುರ್ಗ ಮರುಘಾ ಮಠದ ಸಿಬ್ಬಂದಿಗೆ ನವರಾತ್ರಿ ಹಬ್ಬಕ್ಕೆ ರಾಜ್ಯ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಹೊತ್ತು ಜೈಲುಪಾಲಾಗಿರುವ ಮಠದ (Chitradurga Murugarajendra Mutt) ಡಾ. ಶಿವಮೂರ್ತಿ ಮುರುಘಾ ಶರಣರು (Shivamurthy Muruga Sharanaru) ಅಕ್ಟೋಬರ್ ತಿಂಗಳ ಚೆಕ್ಗಳಿಗೆ ಸಹಿ ಹಾಕಲು ಷರತ್ತುಬದ್ಧ ಅನುಮತಿ ನೀಡಿದೆ. ಹಾಗಾಗಿ ಮಠದ 3 ಸಾವಿರ ಸಿಬ್ಬಂದಿ ಸದ್ಯಕ್ಕೆ ನಿಟ್ಟುಸಿರುಬಿಟ್ಟಿದ್ದಾರೆ.
ಸಹಿ ಪ್ರಕ್ರಿಯೆಗೆ ಕಂಡೀಷನ್ಸ್ ಹಾಕಿದ ಕೋರ್ಟ್:
ವೇತನಕ್ಕೆ ಸಂಬಂಧಿಸಿದ ಚೆಕ್ಗಳಿಗೆ ಮಾತ್ರ ಸಹಿ ಹಾಕಬೇಕು. ಸಹಿ ಪಡೆಯಲು ಚಿತ್ರದುರ್ಗ ಸೆಂಟ್ರಲ್ ಜೈಲಿನ ಅಧಿಕಾರಿಗಳು ಸಂಬಂಧಪಟ್ಟವರಿಗೆ ಅನುಮತಿ ನೀಡಬೇಕು. ಸಹಿ ವೇಳೆ ತನಿಖಾಧಿಕಾರಿ, ಜೈಲು ಅಧೀಕ್ಷಕರು ಉಪಸ್ಥಿತರಿರಬೇಕು. ಅಕ್ಟೋಬರ್ ತಿಂಗಳಿಗೆ ಮಾತ್ರ ಈ ಆದೇಶ ಅನ್ವಯ. ವೇತನವಿಲ್ಲದೆ ವಿದ್ಯಾಪೀಠದ ಸಿಬ್ಬಂದಿ ಉಪವಾಸ ಇರಬಾರದು ಎಂದು ಮಾನವೀಯ ನೆಲೆಗಟ್ಟಿನಲ್ಲಿ ಅನುಮತಿಸಲಾಗಿದೆ. ಇನ್ನಿತರ ಮನವಿಗಳ ಬಗ್ಗೆ ವಿಚಾರಣಾ ನ್ಯಾಯಾಲಯವೇ ನಿರ್ಧರಿಸಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ (Karnataka High Court) ಆದೇಶ ನೀಡಿದೆ.
Published On - 2:24 pm, Fri, 30 September 22