ಬೆಂಗಳೂರು ಹೊರ ವಲಯದಲ್ಲೊಂದು ವಿಶೇಷ ಜಾತ್ರೆ; ತಲೆ ಮೇಲೆ ತೆಂಗಿನಕಾಯಿ ಒಡೆದುಕೊಂಡು ಮಳೆಗಾಗಿ ಪ್ರಾರ್ಥನೆ

ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿ ಜನರು ಪರದಾಡುತ್ತಿದ್ದಾರೆ. ಈ ನಡುವೆ ಈ ಭಾರಿಯಾದರೂ ಉತ್ತಮ ಮಳೆ ಬೆಳೆಯಾಗಲಿ ಎಂದು ಇಲ್ಲೊಂದು ಕಡೆ ತಲೆ ಮೇಲೆ ತೆಂಗಿನಕಾಯಿ ಒಡೆದುಕೊಳ್ಳುವ ಮೂಲಕ ವಿಶೇಷ ಜಾತ್ರೆಯನ್ನ ಮಾಡಿದ್ದಾರೆ.

ಬೆಂಗಳೂರು, ಏ.21: ನಗರದ ಪೂರ್ವ ತಾಲೂಕಿನ ಖಾಜಿಸೊನ್ನೇನಹಳ್ಳಿ(Khajisonnanahalli) ಗ್ರಾಮದಲ್ಲಿಂದು ನಾಡಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಿ ಬರಗಾಲ ನಿವಾರಣೆಯಾಗಲಿ ಎಂದು ಗ್ರಾಮಸ್ಥರು ವಿಶೇಷ ಜಾತ್ರೆಯನ್ನ ನಡೆಸಿದ್ದರು. ಕಳೆದ ಹಲವು ದಶಕಗಳಿಂದ ತೀವ್ರ ಬರಗಾಲ ಹಾಗೂ ಸಂಕಷ್ಟಗಳು ಎದುರಾದಾಗ ಐದು ವರ್ಷಕ್ಕೊಮ್ಮೆ ಈ ಜಾತ್ರೆಯನ್ನ ಮಾಡಿಕೊಂಡು ಬಂದಿದ್ದು, ಈ ಭಾರಿಯು ವಿಶೇಷ ಜಾತ್ರೆಯನ್ನ ಶ್ರದ್ದಾ ಭಕ್ತಿಯಿಂದ ಮಾಡಿದರು. ಈ ಗ್ರಾಮದ ಸಿದ್ದೇಶ್ವರ ದೇವರನ್ನ ಮೆರವಣಿಗೆ ಮೂಲಕ ತಲೆಯ ಮೇಲೆ ಹೊತ್ತು ಊರ ಹೊರಗಡೆ ವರೆಗೂ ಸಾಗಿ ಬಂದ ಜನರು, ನಂತರ ನೀರಿನಲ್ಲಿ ದೇವರನ್ನಿಟ್ಟು ಪೂಜೆ ನೆರವೇರಿಸಿದರು. ಜೊತೆಗೆ ಇದೇ ವೇಳೆ ಹಾಲುಮತ ಸಮುದಾಯದಿಂದ ಸಾಂಪ್ರಾದಾಯಿಕವಾಗಿ ಈ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ಮಳೆ ಬೆಳೆಗೆ ಪ್ರಾರ್ಥಿಸಿದರು.

ವಿಶೇಷ ಜಾತ್ರೆ ಹಿನ್ನೆಲೆ ಬೆಳಗ್ಗೆಯಿಂದಲೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು, ಮಕ್ಕಳಿಂದ ಹಿರಿಯರ ವರೆಗೂ ಎಲ್ಲರೂ ತೋಟಗಳ ಬಳಿ ಆಗಮಿಸಿ ತೆಂಗಿನಕಾಯಿ ಒಡೆಯುವುದನ್ನ ಕಣ್ಥುಂಬಿಕೊಂಡರು. ಜೊತೆಗೆ ಇದೇ ವೇಳೆ ವಿವಿಧ ಕಲಾ ತಂಡಗಳು ಜನರ ಮುಂದೆ ಹೆಜ್ಜೆ ಹಾಕಿ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ದಿಗೆ ಬೇಡಿಕೊಂಡರು.

ಇದನ್ನೂ ಓದಿ:ಕೋಮುದ್ವೇಷದ ಮಧ್ಯೆ ವಿಜಯಪುರದಲ್ಲೊಂದು ಭಾವೈಕ್ಯತೆಯ ಜಾತ್ರೆ; ಏನಿದರ ವಿಶೇಷತೆ

ಇನ್ನು ಹತ್ತಾರು ಗ್ರಾಮಗಳಿಂದ ನೂರಾರು ಜನರು ಬಂದು ಇಲ್ಲಿ ಜಾತ್ರೆ ಮಾಡುವುದರಿಂದ ಮಳೆ,ಬೆಳೆ ಜೊತೆಗೆ ಮದುವೆಯಾಗದೆ ಇರುವ ಯುವಕ-ಯುವತಿಯರಿಗೆ ಮದುವೆ ಆಗುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆ. ಒಟ್ಟಾರೆ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ್ತಿದ್ದು, ಎಲ್ಲರೂ ಮಳೆರಾಯನ ಆಗಮನಕ್ಕೆ ಕಾದು ಕುಳಿತಿದ್ದಾರೆ. ಈ ಗ್ರಾ,ಮಸ್ಥರ ವಿಶೇಷ ತೆಂಗಿನಕಾಯಿ ಜಾತ್ರೆಗಾದರೂ ವರುಣ ಕೃಪೆ ತೋರುತ್ತಾನಾ ಎನ್ನುವುದನ್ನ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us