
ಬೆಂಗಳೂರು, ಮೇ 02: ರಾಜ್ಯದಲ್ಲಿ ಬಿಸಿಲಿನ ಅಬ್ಬರದ ಹಿನ್ನೆಲೆ ನೀರಿಗೆ ಬರ ಆರಂಭವಾಗಿದೆ. ರಾಜ್ಯದಲ್ಲಿರುವ 1.23 ಲಕ್ಷಕ್ಕೂ ಹೆಚ್ಚು ಬೋರ್ವೆಲ್ಗಳ ಪೈಕಿ, ವಿವಿಧ ಜಿಲ್ಲೆಗಳಲ್ಲಿನ 1,010 ಬೋರ್ವೆಲ್ಗಳಲ್ಲಿ ನೀರಿನ ಮಟ್ಟ ಭಾರಿ ಕುಸಿದಿದೆ. ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕಾರ, ಉತ್ತರ ಕನ್ನಡ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ನೀರಿನ ಸಮಸ್ಯೆ ಉಲ್ಬಣವಾಗಿದೆ.
ರಾಯಚೂರು ಜಿಲ್ಲೆಯಲ್ಲಿ 198 ಗ್ರಾಮಗಳು, ಶಿವಮೊಗ್ಗದಲ್ಲಿ 196, ಉತ್ತರ ಕನ್ನಡದಲ್ಲಿ 184, ತುಮಕೂರಿನಲ್ಲಿ 152 ಮತ್ತು ವಿಜಯಪುರದಲ್ಲಿ 148 ಗ್ರಾಮಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕೊಪ್ಪಳ, ಹಾಸನ, ದಾವಣಗೆರೆ, ಮಂಡ್ಯ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ 100ಕ್ಕೂ ಹೆಚ್ಚು ಗ್ರಾಮಗಳು ತೊಂದರೆಗೆ ಸಿಲುಕಿವೆ. ಹೀಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಸಂಖ್ಯೆ ಕಡಿಮೆ ಎನ್ನುವುದು ಸಮಾಧಾನಕರ ಸಂಗತಿ.
ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ; ವಾಹನಗಳನ್ನ ತೊಳೆಯದಂತೆ ಸೂಚನೆ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯ 1,128 ಗ್ರಾಮಗಳಲ್ಲಿ 708 ಗ್ರಾಮಗಳು ಬೋರ್ವೆಲ್ಗಳ ಮೇಲೆ ಅವಲಂಬಿತವಾಗಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲಾ ಮನೆಗಳಿಗೆ ನಳ ನೀರು ಒದಗಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಹುಗ್ರಾಮ ನೀರಿನ ಯೋಜನೆಯೂ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯತ್ ಗ್ರಾಮೀಣ ಜಲಪೂರೈಕೆ ವಿಭಾಗದ ಕಾರ್ಯನಿರ್ವಹಣಾ ಇಂಜಿನಿಯರ್ ಜಿ. ರಾಮಸ್ವಾಮಿ ಅವರು, ಬೋರ್ವೆಲ್ಗಳ ಮೇಲೆ ಅವಲಂಬಿತವಾಗಿರುವ ಗ್ರಾಮಗಳಲ್ಲಿ ನೀರಿನ ಉತ್ಪಾದನೆ ಕಡಿಮೆಯಾದ ಕಾರಣ ಸಮಸ್ಯೆ ಉಂಟಾಗಿದೆ. ಜಲ ಜೀವನ್ ಮಿಷನ್ ಮತ್ತು ಬಹುಗ್ರಾಮ ನೀರಿನ ಯೋಜನೆಗಳ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಕೆಲವು ಗ್ರಾಮಗಳಿಗೆ ನದಿ ನೀರು ತಲುಪಿಲ್ಲ ಎಂದು ಹೇಳಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:22 am, Sat, 2 May 26