
ಬೆಂಗಳೂರು, ಆ.18: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಡಲ್ಪಡುವ ಆತಂಕ ಎದುರಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಟ ಪ್ರಕಾಶ್ ರಾಜ್ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ತುರ್ತು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಸಂಘಟನೆಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು ಹಾಗೂ ದೂರುಗಳ ವಿವರ ಇಲ್ಲಿದೆ
ಪ್ರಸ್ತುತ ಸಿದ್ಧಪಡಿಸಲಾಗುತ್ತಿರುವ ಡಿಲೀಷನ್ ಪಟ್ಟಿಯಲ್ಲಿ ಸುಮಾರು 1 ಕೋಟಿ 9 ಲಕ್ಷ ಮತದಾರರ ಹೆಸರುಗಳು ಕೈಬಿಡಲ್ಪಡುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ರಾಜಧಾನಿ ಬೆಂಗಳೂರಿನ ಸುಮಾರು 3,000 ಬೂತ್ಗಳಲ್ಲಿ ಶೇಕಡಾ 60ಕ್ಕೂ ಅಧಿಕ ಮತದಾರರ ಹೆಸರುಗಳು ಡಿಲೀಟ್ ಆಗುವ ಆತಂಕವಿದೆ ಎಂದು ಆರೋಪಿಸಲಾಗಿದೆ.
ಕೆಲಸಕ್ಕಾಗಿ ಬೇರೆಡೆ ತೆರಳಿದವರನ್ನು ‘Shifted/Absent’ ಎಂದು ಪರಿಗಣಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಅಲ್ಲದೆ, ಬಾಡಿಗೆ ಮನೆ ಬದಲಾಯಿಸಿದವರು ಮತ್ತು ಮದುವೆಯಾಗಿ ಬೇರೆ ಮನೆಗೆ ತೆರಳಿದ ಮಹಿಳೆಯರಿಗೆ ಸೂಕ್ತ ‘Enumeration Form’ ತಲುಪಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಫಾರಂಗಳಲ್ಲಿ ಆಗುವ ಸಣ್ಣಪುಟ್ಟ ತಪ್ಪುಗಳಿಗೂ ಅರ್ಜಿಗಳನ್ನು ‘Others’ ವಿಭಾಗಕ್ಕೆ ಸೇರಿಸಿ ಡಿಲೀಟ್ ಮಾಡಲು ಮುಂದಾಗುತ್ತಿದ್ದು, ಪ್ರಸ್ತುತ ವಾಸವಿರುವ ಅರ್ಹ ಮತದಾರರನ್ನು ಸಂಪರ್ಕಿಸಿ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ದೂರಲಾಗಿದೆ.
ಇದನ್ನೂ ಓದಿ; ಲೈಸನ್ಸ್ ಇದ್ದರೆ ಮಾತ್ರ ಬೈಕ್ ಸ್ಟಾರ್ಟ್: ಹಾವೇರಿ ರಾಷ್ಟ್ರೋತ್ಥಾನ ಶಾಲೆಯ 5ನೇ ತರಗತಿ ಮಕ್ಕಳ ವಿನೂತನ ಆವಿಷ್ಕಾರ
ಸೂಕ್ತ ತರಬೇತಿ ಹಾಗೂ ಸಿದ್ಧತೆಗಳಿಲ್ಲದೆ ತರಾತುರಿಯಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ ಫಾರಂ ವಿತರಣೆ, ಭರ್ತಿ, ಸಂಗ್ರಹಣೆ ಹಾಗೂ ಅಪ್ಲೋಡ್ ಮಾಡುವುದು ಬಿಎಲ್ಒಗಳಿಗೆ ತೀವ್ರ ಕಷ್ಟಕರವಾಗಿದೆ. ಅವಧಿ ವಿಸ್ತರಣೆ ಮಾಡಿದ್ದರೂ ಸಹ ಅವ್ಯವಸ್ಥೆ ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ