
ಬೆಂಗಳೂರು, ಮೇ 14: ಈ ವಾರಾಂತ್ಯದಲ್ಲಿ ಮುಂಗಾರು ಪೂರ್ವ ಮಳೆಯ ಚಟುವಟಿಕೆ ಬೆಂಗಳೂರಲ್ಲಿ (Bengaluru) ಹೆಚ್ಚುವ ಸಾಧ್ಯತೆ ಇದ್ದು, ಮೇ 15ರಿಂದ 17ರವರೆಗೆ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಕಳೆದ ಸುಮಾರು ಒಂದು ವಾರದದಿಂದ ಬಿಸಿಲಿನ ಬೇಗೆಗೆ ತತ್ತರಿಸಿರುವ ನಗರದ ಜನತೆಗೆ ವರುಣ ತಂಪೆರೆಯಲಿದ್ದಾನೆ ಎಂದು ಹವಾಮಾನ ವೀಕ್ಷಣಾ ಕೇಂದ್ರಗಳು ಮಾಹಿತಿ ನೀಡಿವೆ.
ಏಪ್ರಿಲ್ 30ರಂದು ಬೆಂಗಳೂರಿನಲ್ಲಿ ಸುಮಾರು 111 ಮಿ.ಮೀ ಮಳೆಯಾಗಿತ್ತು. ಇದರಿಂದ ನಗರದ ಹಲವೆಡೆ ನೀರು ನಿಂತು ಸಂಚಾರ ದಟ್ಟಣೆ ಉಂಟಾಗಿತ್ತು. ಆದರೆ ಬಳಿಕ ಮಳೆಯ ಚಟುವಟಿಕೆ ಗಣನೀಯವಾಗಿ ಕುಂಠಿತಗೊಂಡಿತ್ತು. ಮಾಹಿತಿ ಪ್ರಕಾರ, ಮೇ ಮೊದಲ 13 ದಿನಗಳಲ್ಲಿ ಬೆಂಗಳೂರು ನಗರ ವೀಕ್ಷಣಾಲಯದಲ್ಲಿ ಕೇವಲ 31 ಮಿ.ಮೀ ಮಳೆಯಾಗಿದ್ದು, HAL ವೀಕ್ಷಣಾಲಯದಲ್ಲಿ ಮಾಸಿಕ ಸರಾಸರಿ ಕೇವಲ 8.2 ಮಿ.ಮೀ ಮಳೆಯಾಗಿದೆ. ಮಳೆಯ ಕೊರತೆಯ ಕಾರಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನ ಮತ್ತೆ ಏರಿಕೆಯಾಗಿದೆ. ಈ ನಡುವೆ ಹವಾಮಾನ ಇಲಾಖೆ ಉತ್ತಮ ಮಳೆಯ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಬೆಳಗಾವಿ, ಚಿಕ್ಕಮಗಳೂರು ಸೇರಿ ಕರ್ನಾಟಕದ ಹಲವೆಡೆ ಭಾರಿ ಮಳೆ; ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ
#ಮಳೆ #ಮುನ್ನೆಚ್ಚರಿಕೆ :#rainfall #Warning for South Interior #Karnataka : #thunderstorm #lightning #KSNDMC@KarnatakaVarthe #KarnatakaRains #Premonsoon pic.twitter.com/5YFNumUmfZ
— Karnataka State Natural Disaster Monitoring Centre (@KarnatakaSNDMC) May 14, 2026
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಕೂಡ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಿದೆ. ಮೇ 16ರವರೆಗೆ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕರಾವಳಿ ಕರ್ನಾಟಕದಲ್ಲಿಯೂ ಮೇ 17ರವರೆಗೆ ಮಿಂಚು-ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:32 pm, Thu, 14 May 26