ಪ್ರೇಮಿಗಳೇ ಹಿಂದೂ ಸಂಘಟನೆಗೆ ಭಯಪಡಬೇಡಿ: ನಿಮ್ಮ ರಕ್ಷಣೆಗೆ ‘ಪ್ರೀತಿಯ ಸೈನಿಕರಾಗಿ’ ನಿಲ್ಲುತ್ತೇವೆ ಎಂದ ಯುವ ಕಾಂಗ್ರೆಸ್

ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿಯನ್ನು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ ತಡೆಯಲಿದೆ. ಸಂವಿಧಾನದಡಿ ಪ್ರೇಮಿಗಳ ಹಕ್ಕುಗಳನ್ನು ರಕ್ಷಿಸಲು 'ಪ್ರೀತಿಯ ಸೈನಿಕರಾಗಿ' ನಿಲ್ಲಲಿದೆ. ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗ ದಳದಂತಹ ಸಂಘಟನೆಗಳ ಕಿರುಕುಳಕ್ಕೆ ಹೆದರಬೇಕಿಲ್ಲ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್ ಗೌಡ ಘೋಷಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರೇಮಿಗಳ ಸುರಕ್ಷತೆಗೆ ನಿರ್ದೇಶನ ನೀಡಲಾಗಿದೆ.

ಪ್ರೇಮಿಗಳೇ ಹಿಂದೂ ಸಂಘಟನೆಗೆ ಭಯಪಡಬೇಡಿ: ನಿಮ್ಮ ರಕ್ಷಣೆಗೆ ‘ಪ್ರೀತಿಯ ಸೈನಿಕರಾಗಿ’ ನಿಲ್ಲುತ್ತೇವೆ ಎಂದ ಯುವ ಕಾಂಗ್ರೆಸ್
ಸಾಂದರ್ಭಿಕ ಚಿತ್ರ

Updated on: Feb 13, 2026 | 9:54 PM

ಬೆಂಗಳೂರು ಫೆ.13: ಫೆಬ್ರವರಿ 14ರ ಪ್ರೇಮಿಗಳ ದಿನದಂದು (Valentine’s Day) ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ ಸನ್ನದ್ಧವಾಗಿದೆ. ವಿಶ್ವ ಹಿಂದೂ ಪರಿಷತ್‌, ಭಜರಂಗ ದಳದಂತಹ ಸಂಘಟನೆಗಳ ಪುಂಡಾಟಿಕೆಗೆ ಹೆದರಬೇಕಿಲ್ಲ, ಪ್ರೇಮಿಗಳ ರಕ್ಷಣೆಗೆ ನಾವು ‘ಪ್ರೀತಿಯ ಸೈನಿಕರಾಗಿ’ ನಿಲ್ಲಲಿದ್ದೇವೆ ಎಂದು ಯುವ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಎಚ್.ಎಸ್‌. ಮಂಜುನಾಥ್‌ ಗೌಡ ಘೋಷಿಸಿದ್ದಾರೆ. ಪ್ರತಿ ವರ್ಷ ಪ್ರೇಮಿಗಳ ದಿನದಂದು ಹಿಂದೂ ಪರ ಸಂಘಟನೆಗಳು ಪಾರ್ಕ್‌ಗಳು, ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳಿಗೆ ಕಿರುಕುಳ ನೀಡುವ ದೂರುಗಳು ಕೇಳಿಬರುತ್ತವೆ. ಈ ಬಾರಿ ಅಂತಹ ಯಾವುದೇ ಸಮಾಜಘಾತುಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮಂಜುನಾಥ್ ಗೌಡ ಎಚ್ಚರಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ಪ್ರೇಮಿಗಳ ಸುರಕ್ಷತೆಯ ಹೊಣೆ ನಿರ್ವಹಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ.

ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಸಂಗಾತಿಯ ಆಯ್ಕೆ ಮತ್ತು ಪ್ರೀತಿ ಮಾಡುವುದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹೀಗಾಗಿ, ಕಾನೂನುಬಾಹಿರವಾಗಿ ಪ್ರೇಮಿಗಳ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯಗಳನ್ನು ನಾವು ಸಹಿಸುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಫೆಬ್ರವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಏಕೆ? ಇಲ್ಲಿದೆ ಕಾರಣ

ವಿಶೇಷವಾಗಿ ಮಂಗಳೂರಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗಿ ನಡೆಯುವ ಸಾಧ್ಯತೆ ಇರುವುದರಿಂದ, ಅಲ್ಲಿ ಹೆಚ್ಚಿನ ನಿಗಾ ವಹಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ. ಹೂವು ಮತ್ತು ಉಡುಗೊರೆ ಮಾರಾಟ ಮಾಡುವ ಬಡ ವ್ಯಾಪಾರಿಗಳ ಮೇಲಿನ ದಾಳಿಗಳನ್ನು ತಡೆಯಲು ಕೂಡ ಕಾರ್ಯಕರ್ತರು ಸಕ್ರಿಯರಾಗಿರಲಿದ್ದಾರೆ. ಪೊಲೀಸ್ ಇಲಾಖೆಯು ಇಂತಹ ಗೂಂಡಾಗಿರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಇಲಾಖೆ ವಿಫಲವಾದರೆ ನಾವೇ ಪ್ರೇಮಿಗಳಿಗೆ ರಕ್ಷಣೆ ನೀಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ವರದಿ: ಟಿವಿ9 ಪ್ರಮೋದ್​ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us