ಕಥಕ್‌ ಗುರು ನಿರುಪಮಾ ರಾಜೇಂದ್ರ ಶಿಷ್ಯೆ ಕು. ಸ್ಫೂರ್ತಿ ಎಸ್‌ ಜೋಷಿ ರಂಗಪ್ರವೇಶ

ಕು. ಸ್ಫೂರ್ತಿ ಎಸ್‌.ಜೋಷಿ ಬಸವನಗುಡಿ ನ್ಯಾಷನಲ್‌ ಕಾಲೇಜ್‌ನಲ್ಲಿ ಮೂಲ ವಿಜ್ಞಾನದಲ್ಲಿ ಪದವಿ ಗಳಿಸಿದ್ದು, ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ (ಮಾಹೆ) ಸಂಸ್ಥೆಯಿಂದ ಸ್ಟೆಮ್‌ಸೆಲ್‌ ಟೆಕ್ನಾಲಜಿ ಆ್ಯಂಡ್ ರಿಜನರೇಟಿವ್ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಇವರು ನಿರುಪಮಾ ರಾಜೇಂದ್ರ ಮತ್ತು ಟಿ.ಡಿ.ರಾಜೇಂದ್ರ ಅವರ ಶಿಷ್ಯೆ.

ಕಥಕ್‌ ಗುರು ನಿರುಪಮಾ ರಾಜೇಂದ್ರ ಶಿಷ್ಯೆ ಕು. ಸ್ಫೂರ್ತಿ ಎಸ್‌ ಜೋಷಿ ರಂಗಪ್ರವೇಶ
ಕು.ಸ್ಫೂರ್ತಿ ಎಸ್‌.ಜೋಷಿ ರಂಗಪ್ರವೇಶ
Edited By:

Updated on: Dec 03, 2024 | 6:36 PM

ಬೆಂಗಳೂರು. ಡಿಸೆಂಬರ್ 3: ಕಥಕ್‌ ನೃತ್ಯ ಪ್ರಕಾರದ ಖ್ಯಾತ ಗುರುಗಳಾದ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ.ರಾಜೇಂದ್ರ ಅವರ ಶಿಷ್ಯೆ ಕು.ಸ್ಫೂರ್ತಿ ಎಸ್. ಜೋಷಿ ಅವರ ಕಥಕ್‌ ರಂಗಪ್ರವೇಶ ‘ಆರಾಧನಾ’ ಇತ್ತೀಚೆಗೆ ಬೆಂಗಳೂರಿನ ಹೊಂಬೇಗೌಡ ನಗರದ ಪ್ರಭಾತ್ ಕಲಾ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ನೃತ್ಯ ಗುರುಗಳಾದ ನಿರುಪಮಾ ಮತ್ತು ರಾಜೇಂದ್ರ ಅವರ ಅಭಿನವ ಡ್ಯಾನ್ಸ್‌ ಕಂಪನಿಯಲ್ಲಿ (ಎಡಿಸಿ) 14 ವರ್ಷಗಳಿಂದ ಕಥಕ್‌ ನೃತ್ಯಾಭ್ಯಾಸ ಮಾಡುತ್ತಿರುವ ಕು.ಸ್ಫೂರ್ತಿ ಎಸ್‌.ಜೋಷಿ ಈ ಅಕಾಡೆಮಿಯ ಹಿರಿಯ ನೃತ್ಯ ಗುರು ರೋಹಿಣಿ ಪ್ರಭಾತ್ ಅವರಿಂದಲೂ ಸಾಕಷ್ಟು ನೃತ್ಯ ತರಬೇತಿ ಪಡೆದುಕೊಂಡಿದ್ದಾರೆ. ‘ಬೆಂಗಳೂರು ಗಣೇಶ ಉತ್ಸವ’, ‘ಚಿನ್ನ ಕಲಾ ನಾದಂ’ ನಂತಹ ಪ್ರಮುಖ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿರುವ ಸ್ಫೂರ್ತಿ, ಎಡಿಸಿಯ ಅತ್ಯಂತ ಮಹತ್ವದ ನೃತ್ಯ ಕಾರ್ಯಕ್ರಮಗಳಾದ ‘ರಾಮ ಕಥಾ ವಿಸ್ಮಯ’, ‘ಸಿಲ್ವರ್ ಟು ಸಿಲಿಕಾನ್‌’ ಮೊದಲಾದವುಗಳ ಭಾಗವಾಗಿದ್ದರು.

ಚೆನ್ನೈ, ದೆಹಲಿ ಸಹಿತ ಹಲವು ಕಡೆಗಳಲ್ಲಿ ಅಭಿನವ ತಂಡದೊಂದಿಗೆ ಕಾರ್ಯಕ್ರಮ ನೀಡಿದ್ದಾರೆ. ತಮ್ಮ ಪ್ರತಿಭೆಗಾಗಿ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಕಲಾಸೌರಭ 2020’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬಸವನಗುಡಿ ನ್ಯಾಷನಲ್‌ ಕಾಲೇಜ್‌ನಲ್ಲಿ ಮೂಲ ವಿಜ್ಞಾನದಲ್ಲಿ ಪದವಿ ಗಳಿಸಿರುವ ಕು.ಸ್ಫೂರ್ತಿ ಎಸ್.ಜೋಷಿ, ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ (ಮಾಹೆ) ಸಂಸ್ಥೆಯಿಂದ ಸ್ಟೆಮ್‌ಸೆಲ್‌ ಟೆಕ್ನಾಲಜಿ ಆ್ಯಂಡ್ ರಿಜನರೇಟಿವ್ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಸದ್ಯ ಸ್ಫೂರ್ತಿ ಎಸ್‌.ಜೋಷಿ ಅವರು ಅಭಿನವ ಡ್ಯಾನ್ಸ್‌ ಕಂಪನಿಯಲ್ಲಿ ನೃತ್ಯ ಶಿಕ್ಷಕಿಯಾಗಿದ್ದು, ವಿದ್ಯಾರ್ಥಿಗಳಿಗೆ ಕಥಕ್‌ ನೃತ್ಯಾಭ್ಯಾಸ ಕಲಿಸುತ್ತಿದ್ದಾರೆ.

Kathak artist Nirupama Rajendra's student Spoorthi S Joshi Ranga pravesha at Bangalore

ರಂಗಪ್ರವೇಶ ಕಾರ್ಯಕ್ರಮದಲ್ಲಿ ಪಡಾಂತ್‌ನಲ್ಲಿ ನಿರುಪಮಾ ರಾಜೇಂದ್ರ, ಹಾಡುಗಾರಿಕೆಯಲ್ಲಿ ವಿದ್ವಾನ್ ಕೀರ್ತನ್‌ ಹೊಳ್ಳ, ತಬ್ಲಾದಲ್ಲಿ ವಿದ್ವಾನ್‌ ಪ್ರವೀಣ್‌ ಡಿ.ರಾವ್, ಪಖಾವಾಜ್​ನಲ್ಲಿ ವಿದ್ವಾನ್‌ ಗುರುಮೂರ್ತಿ ವೈದ್ಯ, ಸಿತಾರ್‌ನಲ್ಲಿ ವಿದ್ವಾನ್‌ ಸುಬ್ರಹ್ಮಣ್ಯ ಹೆಗಡೆ, ಬಾನ್ಸುರಿಯಲ್ಲಿ ವಿದ್ವಾನ್‌ ಸಮೀರ್ ರಾವ್, ಸಾರಂಗಿಯಲ್ಲಿ ವಿದ್ವಾನ್‌ ಸರ್ಫ್ರಾಜ್‌ ಖಾನ್‌ ಸಹಕರಿಸಿದರು. ರೋಹಿಣಿ ಪ್ರಭಾತ್ ಮತ್ತು ಮಾನ್ವಿ ರಾಮ್‌ಪ್ರಸಾದ್ ಅವರು ಪೂರ್ವಾಭ್ಯಾಸದಲ್ಲಿ ನೆರವಾಗಿದ್ದಾರೆ.

ಸ್ಫೂರ್ತಿ ಬೆಂಗಳೂರಿನ ಸಂಜಯ್‌ ಜಿ.ಜೋಷಿ ಮತ್ತು ರಜನಿ ಎಸ್‌.ಜೋಷಿ ಅವರ ಪುತ್ರಿ.

ಬೆಂಗಳೂರಿನ ಹೊಂಬೇಗೌಡನಗರದ ಪ್ರಭಾತ್‌ ಕಲಾ ಸಂಭ್ರಮ ಸಭಾಂಗಣದಲ್ಲಿ ನಡೆದ ರಂಗಪ್ರವೇಶ ಕಾರ್ಯಕ್ರಮದಲ್ಲಿ ಕಥಕ್‌ ಗುರುಗಳಾದ ಶ್ರೀಮತಿ ನಿರುಪಮಾ, ಶ್ರೀ ಟಿ.ಡಿ.ರಾಜೇಂದ್ರ, ಶ್ರೀಮತಿ ಮಾಲತಿ ಜೋಷಿ, ಶ್ರೀಮತಿ ಶಶಿಕಲಾ ದಯಾನಂದ್‌, ಸಂಧ್ಯಾ ಚೌಹಾಣ್‌ ಗೋಪಾಲ್ ಪಾಲ್ಗೊಂಡಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us