ಕೆಪಿಟಿಸಿಎಲ್, ಎಸ್‌ಕಾಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಮಾರ್ಚ್ 16ರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

|

Updated on: Mar 14, 2023 | 3:01 PM

ಮಾರ್ಚ್ 16 ರಿಂದ ರಾಜ್ಯದಲ್ಲಿ ಕೆಪಿಟಿಸಿಎಲ್ ನೌಕರರು ಮತ್ತು ಐದು ಎಸ್ಕಾಂಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿವೆ. ಮಾರ್ಚ್ 20 ರಂದು ಬೆಂಗಳೂರಿನಲ್ಲಿ ಕಸ ಸಂಗ್ರಹಣೆಗೆ ಹೊಡೆತ ಬೀಳುವ ನಿರೀಕ್ಷೆಯೂ ಇದೆ. ಮಾರ್ಚ್ 21 ರಿಂದ ಸಾರಿಗೆ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ.

ಕೆಪಿಟಿಸಿಎಲ್, ಎಸ್‌ಕಾಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಮಾರ್ಚ್ 16ರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸರ್ಕಾರಿ ನೌಕರರು ನಡೆಸುತ್ತಿರುವ ಹಲವು ಪ್ರತಿಭಟನೆ, ಮುಷ್ಕರಗಳಿಂದಾಗಿ ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಅಗತ್ಯ ಸೇವೆಗಳು ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ (Power Cut) ಸಾಧ್ಯತೆ ಇದೆ. ಮಾರ್ಚ್ 16, ಗುರುವಾರದಿಂದ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಮತ್ತು ಐದು ವಿದ್ಯುತ್ ಸರಬರಾಜು ಕಂಪನಿಗಳ (ESCOM) ಸುಮಾರು 60,000 ನೌಕರರು ರಾಜ್ಯದಲ್ಲಿ ಅನಿರ್ದಿಷ್ಟ ಮುಷ್ಕರ (Indefinite strike) ನಡೆಸಲಿದ್ದಾರೆ. ವರದಿಗಳ ಪ್ರಕಾರ, ನೌಕರರು ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮುಷ್ಕರ ನಡೆಸಲಿದ್ದಾರೆ. ಕೆಪಿಟಿಸಿಎಲ್ ಎಂಪ್ಲಾಯೀಸ್ ಅಸೋಸಿಯೇಷನ್ ​​ಮತ್ತು ಫೆಡರೇಶನ್, ನೌಕರರು ಗ್ರಾಹಕರ ದೂರವಾಣಿ ಸಂಪರ್ಕಕ್ಕೆ ಲಭ್ಯವಿರುವುದಿಲ್ಲ ಎಂದು ಹೇಳಿದೆ.

ಈ ಬಗ್ಗೆ ವರದಿ ಮಾಡಿದ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ ಯೂನಿಯನ್ ಮತ್ತು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ ಬಲರಾಮ್, “ನಾವು ಏಪ್ರಿಲ್ 2022 ರಿಂದ ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಹಿಂದಿನ ನಿರ್ಧಾರದ ಪ್ರಕಾರ, ನಮ್ಮ ಸಂಬಳವನ್ನು ಶೇಕಡಾ 22 ರಷ್ಟು ಹೆಚ್ಚಿಸಬೇಕಿತ್ತು. ಈ ಪ್ರಸ್ತಾವನೆಯನ್ನು ಕೆಪಿಟಿಸಿಎಲ್ ಮಂಡಳಿಯು ಅನುಮೋದಿಸಿದೆ. ಆದರೆ, ಸರ್ಕಾರ ಅದನ್ನು ಅನುಮೋದಿಸದೆ ಇಂದಿಗೂ ಬಾಕಿ ಉಳಿಸಿಕೊಂಡಿದೆ. ಪ್ರತಿಭಟನೆ ನಡೆಸಿದರೆ ಮಾತ್ರ ಸರ್ಕಾರ ಮಾತು ಕೇಳುತ್ತದೆ. ಇದು ಇತರ ಉದ್ಯೋಗಿಗಳಿಗೆ ಫಲ ನೀಡಿದೆ. ಆದರೆ ನಮಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: India Weather Updates: ಮುಂದಿನ 6 ದಿನಗಳವರೆಗೆ ಕರ್ನಾಟಕ ಸೇರಿ 10ಕ್ಕೂ ಅಧಿಕ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಮಾರ್ಚ್ 20 ರಂದು ಕಸ ಸಂಗ್ರಹಣೆಗೆ ಹೊಡೆತ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಸ ಸಾಗಣೆ ಕಾರ್ಮಿಕರು ನೇರ ಪಾವತಿ ವ್ಯವಸ್ಥೆ ಸಕ್ರಮ ಮತ್ತು ಕಾಯಂ ಉದ್ಯೋಗ ಸ್ಥಾನಮಾನಕ್ಕಾಗಿ ಮಾರ್ಚ್ 20ರಂದು ಮುಷ್ಕರಕ್ಕೆ ಕರೆ ನೀಡಿದೆ. ಅದರಂತೆ ಅಂದು ನಗರದಲ್ಲಿ ಕಸ ಸಂಗ್ರಹಣೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಅಖಿಲ ಭಾರತ ಕೇಂದ್ರೀಯ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (AICTU) ಅಂಗಸಂಸ್ಥೆಯಾಗಿರುವ ಬಿಬಿಎಂಪಿ ಪೌರಕಾರ್ಮಿಕರ ಸಂಘವು 593 ಕಾಂಪ್ಯಾಕ್ಟರ್ ವಾಹನ ಚಾಲಕರು, 9,300 ಆಟೋ-ಟಿಪ್ಪರ್ ಚಾಲಕರು ಮತ್ತು ಸಹಾಯಕರು, 1,800 ಕಸ ತುಂಬಿಸುವವರನ್ನು ಖಾಯಂ ನೌಕರರನ್ನಾಗಿ ಮಾಡಲು ಒತ್ತಾಯಿಸಲಾಗುತ್ತಿದೆ. ಈ ಕಾರ್ಮಿಕರು ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆರ್‌ಟಿಸಿ ಟ್ರೇಡ್ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿಯಿಂದ ಮುಷ್ಕರ

ಏತನ್ಮಧ್ಯೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 21 ರಂದು ಆರ್‌ಟಿಸಿ ಟ್ರೇಡ್ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿಯು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಸರ್ಕಾರಿ ಬಸ್‌ಗಳಲ್ಲಿ ಓಡಾಡುವ ಪ್ರಯಾಣಿಕರಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. RTC ಟ್ರೇಡ್ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿಯು ಕರ್ನಾಟಕದಲ್ಲಿ ಆರು ಉದ್ಯೋಗಿ ರಸ್ತೆ ಸಾರಿಗೆ ನೌಕರರ ಸಂಘಗಳನ್ನು ಪ್ರತಿನಿಧಿಸುತ್ತದೆ.

ಕೆಎಸ್‌ಆರ್‌ಟಿಸಿ ನೌಕರರ ಕೂಟದಿಂದ ಮುಷ್ಕರ

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಮಾರ್ಚ್ 24 ರಂದು ಕೆಎಸ್‌ಆರ್‌ಟಿಸಿ ನೌಕರರ ಕೂಟವು ಇದೇ ರೀತಿಯ ಮುಷ್ಕರಕ್ಕೆ ಕರೆ ನೀಡಿದೆ. ಎರಡೂ ಮುಷ್ಕರಗಳು ಮುಂದುವರಿದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಮೇಲೆ ಪರಿಣಾಮ ಬೀರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ