BMRCL: ನಮ್ಮ ಮೆಟ್ರೋದಲ್ಲಿ ಹೃದಯಘಾತದಿಂದ ವ್ಯಕ್ತಿ ಸಾವು; ಬಿಎಂಆರ್​ಸಿಎಲ್ ವಿರುದ್ಧ ಎಫ್​ಐಆರ್ ದಾಖಲು

ತಿಮ್ಮೇಗೌಡ ಎಂಬುವವರಿಗೆ ಮೆಟ್ರೋದಲ್ಲಿ ಹೃದಯಾಘಾತವಾಗಿದ್ದು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸದೆ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಬಿಎಂಆರ್​ಸಿಎಲ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

BMRCL: ನಮ್ಮ ಮೆಟ್ರೋದಲ್ಲಿ ಹೃದಯಘಾತದಿಂದ ವ್ಯಕ್ತಿ ಸಾವು; ಬಿಎಂಆರ್​ಸಿಎಲ್ ವಿರುದ್ಧ ಎಫ್​ಐಆರ್ ದಾಖಲು
ತಿಮ್ಮೇಗೌಡ
Follow us
| Updated By: ಆಯೇಷಾ ಬಾನು

Updated on:Jul 26, 2023 | 2:33 PM

ಬೆಂಗಳೂರು, ಜುಲೈ 26: ಕೋಟಿ ಕೋಟಿ ಹಣ ಖರ್ಚು ಮಾಡಿ ನಿರ್ಮಿಸಿರುವ ಮೆಟ್ರೋದಲ್ಲಿ(Namma Metro) ಪ್ರಯಾಣಿಕರ ಆರೋಗ್ಯದಲ್ಲಿ ಹೆಚ್ಚುಕಮ್ಮಿಯಾದ್ರೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಇದು ಮತ್ತೊಮ್ಮೆ ಸಾಮೀತಾಗಿದೆ.  ಇಂದು ನಮ್ಮ ಮೆಟ್ರೋದಲ್ಲಿ ನಡೆದ ಘಟನೆ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಓರ್ವ ಪ್ರಯಾಣಿಕನಿಗೆ ಹೃದಯಾಘಾತವಾಗಿದ್ದು(Heart Attack) ಆತ ಮರಣ ಹೊಂದಿದ್ದಾನೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಿಫಲವಾದ ಆರೋಪದ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಅಧಿಕಾರಿಗಳ ವಿರುದ್ಧ ಎಫ್‌ಐಆರ್(FIR) ದಾಖಲಾಗಿದೆ. ಈ ಕುರಿತು ಉತ್ತರ ನೀಡುವಂತೆ ಬೈಯಪ್ಪನಹಳ್ಳಿ ಪೊಲೀಸರು ಬಿಎಂಆರ್‌ಸಿಎಲ್ ಮುಖ್ಯ ಭದ್ರತಾ ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದ ತಿಮ್ಮೇಗೌಡ(67) ಎಂಬುವವರಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ತಲುಪುವ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೊನೆಗೆ ಮೆಟ್ರೋ ರೈಲು ಎಂಜಿ ರಸ್ತೆ ನಿಲ್ದಾಣಕ್ಕೆ ಬಂದಾಗ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದು ಮೆಟ್ರೋ ರೈಲಿನಿಂದ ಹೊರಗೆ ಕರೆತಂದು ಫ್ಲಾಟ್ ಫಾರಂ ಮೇಲೆ ಕೂರಿಸಿದ್ದಾರೆ. ಸುಮಾರು ಹದಿನಾಲ್ಕು ನಿಮಿಷಗಳ ಕಾಲ ಫ್ಲಾಟ್ ಫಾರಂನಲ್ಲೇ ತಿಮ್ಮೇಗೌಡರನ್ನು ಹಾಗೇ ಬಿಟ್ಟಿದ್ದಾರೆ. ಅಲ್ಲಿನ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ. ಕೆಲ ನಿಮಿಷದ ನಂತರ ತಿಮ್ಮೇಗೌಡರನ್ನು ಇನ್ಫ್ರಾಂಟ್ರಿ ರಸ್ತೆಯ ಸ್ಪರ್ಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸದ ಕಾರಣ ತಿಮ್ಮೇಗೌಡರ ಪ್ರಾಣ ಪಕ್ಷಿ ಹಾರಿಹೋಗಿದೆ. ಇಲ್ಲಿ ಮೆಟ್ರೋ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಇದನ್ನೂ ಓದಿ: Namma Metro: 2023 ವರ್ಷಾಂತ್ಯಕ್ಕೆ ಜಯದೇವ ಮಲ್ಟಿ ಲೆವೆಲ್ ಮೆಟ್ರೋ ನಿಲ್ದಾಣ ಕಾರ್ಯಾರಂಭ: ಬಿಎಂಆರ್​ಸಿಎಲ್

ಪ್ರಯಾಣಿಕರಿಗೆ ಆರೋಗ್ಯದಲ್ಲೇನಾದರೂ ಸಮಸ್ಯೆಯಾದರೇ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಸಹಾಯಕ್ಕೆ ಧಾವಿಸಲೂ ಯಾವ ಸಿಬ್ಬಂದಿಯೂ ಮುಂದೆ ಬರುವುದಿಲ್ಲ. ಹೃದಯಾಘಾತವಾಗಿ ನಲವತ್ತು ನಿಮಿಷಗಳು ಕಳೆದ್ರು ಯಾರು ಸಹಾಯಕ್ಕೆ ಬಂದಿಲ್ಲ ಎಂದು ಪ್ರಯಾಣಿಕರೊಬ್ಬರು ಬಿಎಂಆರ್​ಸಿಎಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಘಟನೆ ಬಳಿಕ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನ ಅನ್ವಯ ಕೇಸ್ ದಾಖಲು ಮಾಡಿದ ಪೊಲೀಸರು ಬಿಎಂಆರ್​ಸಿಎಲ್ ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಿದ್ದಾರೆ. ಬಿಎಂಆರ್​ಸಿಎಲ್ ಚೀಫ್ ಸೆಕ್ಯುರಿಟಿ ಆಫೀಸರ್ ಸೆಲ್ವಂಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಬೇಜಾಬ್ದಾರಿ ಹಿನ್ನೆಲೆ ಸಾವು ಸಂಭವಿಸಿದ್ದು ಸರಿಯಾದ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊನೆಗೂ ಬಿಎಂಆರ್​ಸಿಎಲ್ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿಸಿಲ್ಲ ಬದಲಾಗಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:16 pm, Wed, 26 July 23