ಒಕ್ಕಲಿಗರು ಹಾಗೂ ಮಹಿಳೆಯರನ್ನು ತೇಜೋವಧೆ ಮಾಡಿದ್ರೆ ನಾನು ನೇಣುಗಂಭಕ್ಕೆ ಹೋಗಲು ಸಿದ್ದ: ಸಚಿವ ಮುನಿರತ್ನ

|

Updated on: Mar 31, 2023 | 5:42 PM

ನಾನು ಒಕ್ಕಲಿಗರು ಹಾಗೂ ಮಹಿಳೆಯರನ್ನು ತೇಜೋವಧೆ ಮಾಡಿಲ್ಲ. ನಾನೇನಾದರೂ ತೇಜೋವಧೆ ಮಾಡಿದ್ರೆ ರಾಜಕೀಯ ನಿವೃತ್ತಿ ನೀಡುತ್ತೇನೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಹೇಳಿದರು.

ಒಕ್ಕಲಿಗರು ಹಾಗೂ ಮಹಿಳೆಯರನ್ನು ತೇಜೋವಧೆ ಮಾಡಿದ್ರೆ ನಾನು ನೇಣುಗಂಭಕ್ಕೆ ಹೋಗಲು ಸಿದ್ದ: ಸಚಿವ ಮುನಿರತ್ನ
ಮುನಿರತ್ನ
Follow us on

ಬೆಂಗಳೂರು: ನಾನು ಒಕ್ಕಲಿಗರು ಹಾಗೂ ಮಹಿಳೆಯರನ್ನು ತೇಜೋವಧೆ ಮಾಡಿಲ್ಲ. ನಾನೇನಾದರೂ ತೇಜೋವಧೆ ಮಾಡಿದ್ರೆ ರಾಜಕೀಯ ನಿವೃತ್ತಿ ನೀಡುತ್ತೇನೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ (Minister Munirathna) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವವರನ್ನು​ ಹೊಡೆದೋಡಿಸಿ ಎಂದು ಹೇಳಿದ್ದೆ ಅಷ್ಟೇ. ಒಕ್ಕಲಿಗ ಪದ ಬಳಸಿದರೆ ನಾನು ನೇಣುಗಂಬಕ್ಕೆ ಹೋಗಲು ಸಿದ್ಧನಿರುವೆ ಎಂದು ಹೇಳಿದರು. ಸುನಂದಾ ಬೋರೇಗೌಡ ಕೂಡ ಒಕ್ಕಲಗರೇ. ಅವರ ಮೇಲೆ ಮುಸ್ಲಿಂ ಮಹಿಳೆ ಹಲ್ಲೆ ಮಾಡಿದ್ದಾರೆ. ಅಲ್ಲಿ ಇವರಿಗೆ ಒಕ್ಕಲಿಗ ಹೆಣ್ಣುಮಗಳು ನೆನಪಿಗೆ ಬಂದಿಲ್ವಾ? ಅವರ ಮನೆಗೆ ಹೋಗಿ ಸನ್ಮಾನ ಮಾಡುತ್ತಾರೆ ಅಂದ್ರೆ ಏನ್ ಹೇಳೋದು ಎಂದು ಪ್ರಶ್ನಿಸಿದರು. ಯುದ್ದ ಗೆದ್ದು ಬಂದವರ ರೀತಿ ಸನ್ಮಾನ ಮಾಡಿದ್ದಾರೆ ಎಂದು ಸಚಿವ ಮುನಿರತ್ನ ಫೋಟೋ ರಿಲೀಸ್ ಮಾಡಿದರು.

ನಾನೀಗ ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತ ಅಷ್ಟೇ. ಅವರು ಹೇಳಿದ ಮಾತು ನನ್ನ ಬಾಯಲ್ಲಿ ಬಂದಿದ್ದರೆ ನೇಣು ಹಾಕಿಕೊಳ್ಳಲು ನಾನು ಸಿದ್ದ. ಅದು ಸುಳ್ಳಾದರೆ ಅವರು ನೇಣು ಹಾಕಿಕೊಳ್ಳುತ್ತಾರಾ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಕನ್ನಡಿಗರ ಮೇಲೆ ಹಲ್ಲೆ ಮಾಡುವಂತೆ ತಮಿಳರಿಗೆ ಹೇಳಿದ್ರಾ ಮುನಿರತ್ನ? ಪೊಲೀಸ್​ ಆಯುಕ್ತರಿಗೆ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ದೂರು

ನನ್ನ ಮೇಲೆಯೇ ಯಾಕಿಷ್ಟು ಕೋಪ: ಮುನಿರತ್ನ ಪ್ರಶ್ನೆ

ಕನಕಪುರದಿಂದ ಅವರ ಬೆಂಬಲಿಗರನ್ನ ಕರೆಸಿ ಕಾರಿನ ಗಾಜನ್ನ ಅವರೇ ಹೊಡೆಸಿಕೊಂಡ್ಡರು. ನನ್ನ ಮೇಲೆ ಆರೋಪ ಮಾಡೋಕೆ ಹೀಗೆ ಮಾಡುತ್ತಿದ್ದಾರೆ. ಮುನಿರತ್ನಗೆ ಸಡನ್ ಆಗಿ ಆಕ್ಸಿಡೆಂಟ್, ಹಾರ್ಟ್​ ಅಟ್ಯಾಕ್ ಆಗಬೇಕು ಅವರಿಗೆ. ಕಾಂಗ್ರೆಸ್​ನಿಂದ ಬಂದವರ ಯಾರ ಮೇಲೂ ಕೋಪ ಇಲ್ಲ. ನನ್ನ ಮೇಲೆಯೇ ಯಾಕಿಷ್ಟು ಕೋಪ ಅಂತ ಮುನಿರತ್ನ ಪ್ರಶ್ನೆ ಮಾಡಿದರು. ಆರ್​ಆರ್​ ನಗರದಲ್ಲಿ ನನ್ನ ಗೆಲ್ಲಿಸೋದು, ಸೋಲಿಸೋದು ಜನರ ತೀರ್ಮಾನ. ಅದು ಇವರ ಕೈಯಲ್ಲಿ ಇಲ್ಲ. ಅವರು ನಿದ್ರೆ ಕೆಟ್ಟಿರೋದಕ್ಕೆ ನನ್ನ ಮೇಲೆ ಸಿಡಿದೆದ್ದಿರೋದು. ಮುನಿರತ್ನನ ಬಂಧಿಸಲಿ, 40 ದಿನ ತಿಹಾರ್ ಜೈಜಲ್ಲಿ ಇರಿಸಿ ಎನ್ನುವವರು ಈ ಕ್ಷೇತ್ರದಲ್ಲಿ ಗೆಲ್ಲಿ ಎಂದು ಸವಾಲು ಹಾಕಿದರು.

ಡಿ.ಕೆ.ಸುರೇಶ್​ ವಿರುದ್ಧ ಮುನಿರತ್ನ ವಾಗ್ದಾಳಿ

ನಾನು ಯಾವ ಭಾಷೆಯಲ್ಲಿ ಮಾತಾಡಿದರೂ ಮಾತೃ ಭಾಷೆ ಮರೆಯಲ್ಲ. ಸಣ್ಣ ರಾಜಕೀಯಕ್ಕೋಸ್ಕರ ಕೀಳುಮಟ್ಟದ ಹೇಳಿಕೆ ನೀಡಬಾರದು ಎಂದು ಡಿ.ಕೆ.ಸುರೇಶ್​ ವಿರುದ್ಧ ಮುನಿರತ್ನ ವಾಗ್ದಾಳಿ ಮಾಡಿದರು. ಈ ಹಿಂದೆ 5 ಭಾಷೆಗಳಲ್ಲಿ ನನ್ನ ಜೊತೆ ಸುರೇಶ್ ಮಾತನಾಡಿದ್ದಾರೆ. ತೆಲುಗು, ತಮಿಳು, ಮಲಯಾಳಂ ಮಾತಾಡಿ ಮತ ಸಿಗುತ್ತೆ ಎಂದಿದ್ದರು. ಬೇರೆ ಭಾಷೆ ಮಾತಾಡಿದರೆ ನನ್ನ ಗೆಲುವು ಸುಲಭ ಆಗುತ್ತೆ ಎಂದಿದ್ದರು. ನಾನು ಬಿಜೆಪಿಗೆ ಬಂದಾಕ್ಷಣ ಜಾತಿ, ಧರ್ಮ, ಭಾಷೆ ವಿಚಾರ ಬರುತ್ತೆ. ನಾನು ಎಲ್ಲ ಭಾಷೆಯಲ್ಲೂ ಮಾತನಾಡುತ್ತೇನೆ.

ಇದನ್ನೂ ಓದಿ: Mallikarjun Khuba: ಬಿಜೆಪಿ ತೊರೆದು ಜೆಡಿಎಸ್​ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

ಆದರೆ ನಾನು ಓದಿದ್ದು, ಮಾತನಾಡುವುದು, ಬರವಣಿಗೆ ಎಲ್ಲವೂ ಕನ್ನಡ. ರಾಜಕೀಯಕ್ಕೋಸ್ಕರ ಇಷ್ಟು ಕೀಳುಮಟ್ಟಕ್ಕೆ ಇಳಿಯುವುದು ಸರಿಯಲ್ಲ. ಬೆಂಗಳೂರು ಶಾಂತಿಯಾಗಿದೆ, ಜಾತಿ ತಂದು ಹಾಳು ಮಾಡಬೇಡಿ ಎಂದು ಕಿಡಿಕಾರಿದರು.

ಕೀಳುಮಟ್ಟದ ರಾಜಕೀಯ ಮಾಡಬೇಡಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಸಿಎಂ ಆಗಬೇಕೆಂದು ಗಡ್ಡ ತೆಗೆದಿಲ್ಲ. ಸಂಸದ ಡಿ.ಕೆ.ಸುರೇಶ್​ ನನ್ನ ಕ್ಷೇತ್ರ ಬಿಟ್ಟು ಎಲ್ಲೂ ಹೋಗುತ್ತಿಲ್ಲ. ನನ್ನನ್ನು ಸಿಎಂ ಮಾಡಿ ಎಂದು ಡಿಕೆಶಿ ಊರೂರು ಸುತ್ತುತ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿಯವರೆಗೆ ಡಿಕೆ ಸೋದರರದ್ದು ಇದೇ ಆಯ್ತು. ಮೊನ್ನೆ ತಟ್ಟೆ ಹಂಚುವಾಗ ಸುನಂದಾ ಬೋರೇಗೌಡ ಮೇಲೆ ಹಲ್ಲೆ ಮಾಡಲಾಯಿತು. ಮುಸ್ಲಿಂ ಮಹಿಳೆ ಹೊಡೆದಿದ್ದಕ್ಕೆ ₹50,000 ಕೊಡೋಕೆ ಹೋಗುತ್ತಾರೆ. ಹಾಗಾದ್ರೆ ರಾಜರಾಜೇಶ್ವರಿನಗರದಲ್ಲಿ ರಾಜಕೀಯ ಮಾಡುತ್ತಿರುವವರು ಯಾರು? ಸಂಸದರಾಗಿ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ನಿಮ್ಮಣ್ಣ ಶೇವಿಂಗ್​ ಮಾಡಲು ಏನು ಮಾಡುಬೇಕೋ ಅದನ್ನ ಮಾಡಿ. ಅದನ್ನು ಬಿಟ್ಟು ಈ ರೀತಿ ಕೀಳುಮಟ್ಟದ ರಾಜಕೀಯ ಮಾಡಬೇಡಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:36 pm, Fri, 31 March 23