ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಮೆಟ್ರೋ ಟಿಕೆಟ್​​ ತೆಗೆದುಕೊಳ್ಳಲು ಪ್ರಯಾಣಿಕರ ಪರದಾಟ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇತ್ತೀಚೆಗೆ ಬ್ಯಾಂಕ್ ಸರ್ವರ್ ದೋಷದಿಂದಾಗಿ ಟಿಕೆಟ್ ಪಡೆಯಲು ತೀವ್ರ ತೊಂದರೆಯಾಗಿದೆ. ಯುಪಿಐ/ಕಾರ್ಡ್ ಪಾವತಿ ವೈಫಲ್ಯದಿಂದ ಸಾವಿರಾರು ಜನರು ಪರದಾಡಿದರು, ಕ್ಯೂಆರ್ ಕೋಡ್ ಉತ್ಪತ್ತಿಯಾಗಲಿಲ್ಲ. ಹಣ ಕಟ್ ಆದರೂ ಟಿಕೆಟ್ ಸಿಗದೆ ಆಕ್ರೋಶ ವ್ಯಕ್ತವಾಯಿತು. ಇಂತಹ ಸಂದರ್ಭಗಳಲ್ಲಿ ನಗದು ಅಥವಾ ಸ್ಮಾರ್ಟ್ ಕಾರ್ಡ್ ಬಳಸಲು ಮತ್ತು ಪದೇ ಪದೇ ಪಾವತಿ ಮಾಡದಿರಲು ಸಲಹೆ ನೀಡಲಾಗಿದೆ.

ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಮೆಟ್ರೋ ಟಿಕೆಟ್​​ ತೆಗೆದುಕೊಳ್ಳಲು ಪ್ರಯಾಣಿಕರ ಪರದಾಟ
ಮೆಟ್ರೋದಲ್ಲಿ ಟಿಕೇಟ್​​​ ಸಮಸ್ಯೆ
Edited By:

Updated on: Feb 10, 2026 | 9:22 PM

ಬೆಂಗಳೂರು, ಫೆ.10: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಒಂದು ಕಹಿ ಅನುಭವ ಆಗಿದೆ. ಬ್ಯಾಂಕ್ ಸರ್ವರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಸಾವಿರಾರು ಜನರು ಪರದಾಡುವಂತಾಗಿದೆ. ಇತ್ತೀಚೆಗಷ್ಟೇ ಮೆಟ್ರೋ ದರ ಏರಿಕೆ ಮಾಡಿ ಮೆಟ್ರೋ ಪ್ರಯಾಣಿಕರ ಅಕ್ರೋಶಕ್ಕೆ ಒಳಗಾಗಿತ್ತು, ಇದೀಗ ಇದರ ಬೆನ್ನಲ್ಲೇ ಬ್ಯಾಂಕ್ ಸರ್ವರ್‌ನಲ್ಲಿ ಡೌನ್​ ಆಗಿರುವುದು ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇಂದು (ಫೆ. 10) ಸಂಜೆ 6 ಗಂಟೆಯಿಂದ ಬ್ಯಾಂಕ್ ಸರ್ವರ್ ಸಮಸ್ಯೆ ಆರಂಭವಾಗಿದೆ. ಯುಪಿಐ (UPI) ಪೇಮೆಂಟ್ ಅಥವಾ ಬ್ಯಾಂಕ್ ಕಾರ್ಡ್‌ಗಳ ಮೂಲಕ ಟಿಕೆಟ್ ಖರೀದಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದೆ.

ಕಚೇರಿ ಕೆಲಸ ಮುಗಿಸಿ ಮನೆಗೆ ಮರಳುವ ಅವಸರದಲ್ಲಿದ್ದ ಪ್ರಯಾಣಿಕರು ಟಿಕೆಟ್ ಕೌಂಟರ್ ಹಾಗೂ ಎಟಿಎಂಗಳ (ATMs) ಮುಂದೆ ಗಂಟೆಗಟ್ಟಲೆ ನಿಲ್ಲುವಂತಾಯಿತು. ಸರ್ವರ್ ಸಮಸ್ಯೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಪ್ರಯಾಣಿಕರು ಒಂದಕ್ಕೆ ಎರಡರಷ್ಟು ಬಾರಿ ಯುಪಿಐ ಪೇಮೆಂಟ್ ಮಾಡಿದ್ದಾರೆ. ಅಕೌಂಟ್‌ನಿಂದ ಹಣ ಕಟ್ ಆಗಿದ್ದರೂ ಕ್ಯೂಆರ್ ಕೋಡ್ (QR Code) ಜನರೇಟ್ ಆಗಿಲ್ಲ.ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಯಶವಂತಪುರ ಸೇರಿದಂತೆ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಶೇ. 50ರಷ್ಟು ಸಿಗಲಿದೆ ಮನೆ ಬಾಡಿಗೆ ಭತ್ಯೆ

ಇಲ್ಲಿದೆ ನೋಡಿ ವಿಡಿಯೋ:

ಕಟ್ ಆಗಿರುವ ಹಣ ವಾಪಸ್ ಬರುತ್ತದೆಯೇ ಎಂಬ ಆತಂಕದಲ್ಲಿ ಜನರು ಕಸ್ಟಮರ್ ಕೇರ್ ಮುಂದೆ ಜಮಾಯಿಸಿದ್ದಾರೆ. ಇಂತಹ ತುರ್ತು ಸಂದರ್ಭಗಳಲ್ಲಿ ಸಣ್ಣ ಮೊತ್ತದ ನಗದು (Cash) ಇಟ್ಟುಕೊಳ್ಳುವುದು ಉತ್ತಮ. ಕೌಂಟರ್‌ಗಳಲ್ಲಿ ನಗದು ನೀಡಿ ಟೋಕನ್ ಪಡೆಯಬಹುದು. ಯುಪಿಐಗಿಂತ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳು ಇಂತಹ ಸಮಯದಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ಒಮ್ಮೆ ಹಣ ಕಟ್ ಆಗಿ ಟಿಕೆಟ್ ಬರದಿದ್ದರೆ, ಪದೇ ಪದೇ ಪೇಮೆಂಟ್ ಮಾಡಬೇಡಿ. ಸಾಮಾನ್ಯವಾಗಿ ಕಟ್ ಆದ ಹಣ 24-48 ಗಂಟೆಗಳಲ್ಲಿ ನಿಮ್ಮ ಖಾತೆಗೆ ಮರುಪಾವತಿಯಾಗುತ್ತದೆ ಎಂಬುದು ಬ್ಯಾಂಕ್​​​ಗಳ ಸಲಹೆ ಕೂಡ ನೀಡಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ