
ನೆಲಮಂಗಲ, ಜೂ.2: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಐತಿಹಾಸಿಕ ಕ್ಷಣಕ್ಕೆ ಇಡೀ ನೆಲಮಂಗಲ ವಿಧಾನಸಭಾ ಕ್ಷೇತ್ರವೇ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿ ಮನೆಯಲ್ಲೂ ಸಂಭ್ರಮ ಮನೆ ಮಾಡಿದ್ದು, ಈ ಐತಿಹಾಸಿಕ ಸಂತಸವನ್ನು ಹಂಚಿಕೊಳ್ಳಲು ಸ್ಥಳೀಯ ಶಾಸಕರಾದ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಭೂತಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ.
ಡಿಕೆಶಿ ಅವರು ಮುಖ್ಯಮಂತ್ರಿಯಾಗುತ್ತಿರುವ ಈ ಅದ್ಭುತ ಕ್ಷಣ ನೆನಪಿನಲ್ಲಿರಬೇಕು ಎಂದು ನೆಲಮಂಗಲ ತಾಲೂಕಿನಾದ್ಯಂತ ಇರುವ ಸುಮಾರು 85 ಸಾವಿರದಿಂದ 90 ಸಾವಿರ ಮನೆಗಳಿಗೆ ತಲಾ ಮುಕ್ಕಾಲು ಕೆಜಿಯಷ್ಟು (750 ಗ್ರಾಂ) ಉನ್ನತ ಗುಣಮಟ್ಟದ ಲಾಡುಗಳ ಸಿಹಿ ಬಾಕ್ಸ್ ಅನ್ನು ಉಚಿತವಾಗಿ ವಿತರಿಸಲು ಶಾಸಕರು ನಿರ್ಧರಿಸಿದ್ದಾರೆ. ನಾಳೆ ಬೆಳಗ್ಗೆಯಿಂದಲೇ ಈ ಬೃಹತ್ ಸಿಹಿ ಹಂಚಿಕೆ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ಈ ಸಿಹಿ ವಿತರಣಾ ಕಾರ್ಯಕ್ಕಾಗಿ ನೆಲಮಂಗಲದಲ್ಲಿ ಬೃಹತ್ ಅಡುಗೆ ಶಾಲೆ ನಿರ್ಮಾಣವಾಗಿದ್ದು, ಸುಮಾರು 250 ರಿಂದ 300 ನುರಿತ ಬಾಣಸಿಗರು (Chefs) ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಇಡೀ ಕ್ಷೇತ್ರಕ್ಕೆ ವಿತರಿಸಲು ಒಟ್ಟಾರೆ 9 ರಿಂದ 10 ಲಕ್ಷ ಲಾಡುಗಳ ಅಗತ್ಯವಿದ್ದು, ಸದ್ಯ ಭರದಲ್ಲಿ ಲಾಡು ತಯಾರಿಕೆ ನಡೆಯುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ:
ಶಾಸಕರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಉತ್ಸಾಹಿ ಕಾರ್ಯಕರ್ತರು ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಈ ಸಿಹಿ ಪೊಟ್ಟಣಗಳನ್ನು ಹಸ್ತಾಂತರಿಸಲಿದ್ದಾರೆ. ಕ್ಷೇತ್ರದ ಕೊನೆಯ ಮನೆಗೂ ಸಿಹಿ ತಲುಪುವವರೆಗೂ ಈ ವಿತರಣಾ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಒಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಸಿಎಂ ಪಟ್ಟಾಭಿಷೇಕದ ಖುಷಿ ನೆಲಮಂಗಲದ ಜನರಲ್ಲಿ ನೆನಪಾಗಿರಲಿ ಎಂದು ಈ ಕೆಲಸವನ್ನು ಮಾಡುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ