ರಾಮ ಮಂದಿರ ಉದ್ಘಾಟನೆ ದಿನವೇ ಮಗು ಪಡೆಯಲು ಬೆಂಗಳೂರಿನಲ್ಲೂ ಶುರುವಾಗಿದೆ ಹೊಸ ಟ್ರೆಂಡ್
ಭಾರತದಲ್ಲಿ ರಾಮಜಪ ಶುರುವಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಮರ್ಯಾದಾ ಪರುಷೋತ್ತಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೇ ಶುರುವಾಗಿದೆ. ಮತ್ತೊಂದೆಡೆ ಭಾರತದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ. ಜನವರಿ 22ರಂದೇ ಹೆರಿಗೆ ಆಗಲಿ ಎಂದು ಗರ್ಭಿಣಿಯರು ಬಯಸುತ್ತಿದ್ದಾರೆ. ಈ ಟ್ರೆಂಡ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ಶುರುವಾಗಿದೆ.

ಬೆಂಗಳೂರು, (ಜನವರಿ 09): ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ (ayodhya ram mandir) ದಿನ ಹತ್ತಿರವಾಗುತ್ತಿದ್ದಂತೆ ರಾಮನ ಭಕ್ತರು ಒಂದೊಂದು ವಿನೂತನ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ. ಇದೇ ಜನವರಿ 22ರಂದು ಅಯೋಧ್ಯ ರಾಮ ಮಂದಿರದಲ್ಲಿ ವಿಜೃಂಭಣೆಯಿಂದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಜನವರಿ 22ರ ದಿನವನ್ನು ಸ್ಮರಣೀಯವಾಗಿಸಲು ಹಲವು ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಆ ದಿನವೇ ತಮ್ಮ ಮಕ್ಕಳು ಜನಿಸಬೇಕು ಎಂದು ಗರ್ಭಿಣಿಯರು ಆಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಅನೇಕ ಆಸ್ಪತ್ರೆಯ ವೈದ್ಯರಿಗೆ ಗರ್ಭಿಣಿಯರು ದುಂಬಾಲು ಬಿದ್ದಿದ್ದಾರೆ.
ಇದು ಅಚ್ಚರಿ ಎನಿಸಿದರೂ ಸತ್ಯ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನದಂದೆ ತಮಗೆ ಹೆರಿಗೆ ಮಾಡಿಸಬೇಕೆಂದು ವೈದ್ಯರಿಗೆ ಗರ್ಭಿಣಿಯರು ಒತ್ತಾಯಿಸುತ್ತಿರುವ ಸುದ್ದಿ ಉತ್ತರ ಪ್ರದೇಶ ಕಾನ್ಪುರದಲ್ಲಿ ಬೆಳಕಿಗೆ ಬಂದಿದ್ದವು. ಇದೀಗ ಬೆಂಗಳೂರಿನಲ್ಲೂ ಸಹ ಸಾಕಷ್ಟು ಗರ್ಭಿಣಿಯರು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿ 22 ರಂದೇ ಡೆಲಿವೆರಿ ಮಾಡಿಸಿಕೊಳ್ಳುವಂತೆ ವೈದ್ಯರಿಗೆ ಮನವಿ ಮಾಡುತ್ತಿದ್ದಾರೆ. ಆದ್ರೆ ವೈದ್ಯರು, ಎಲ್ಲರಿಗೂ ಅವತ್ತೆ ಡೆಲಿವರಿ ಮಾಡುವುದಕ್ಕೆ ಕಷ್ಟ ಸಾಧ್ಯ ಎನ್ನುತ್ತಿದ್ದಾರೆ. ಡೆಲಿವರಿ ನಿಗಧಿಯಾದ ದಿನಾಂಕಕ್ಕಿಂತ ಒಂದು ವಾರ ಹಿಂದೆ ಮುಂದೆ ಅಂತರ ಇದ್ರೆ ಮಾತ್ರ ಈ ರೀತಿ ಡೆಲಿವರಿ ಮಾಡಿಸಿಕೊಳ್ಳಬಹುದು. ಅತಂವರಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ ಎಂದಿದ್ದಾರೆ ವೈದ್ಯರು.
ಮಂದಿರ ಉದ್ಘಾಟನೆ ದಿನ ಹೆರಿಗೆ ಮಾಡಿಸಿಕೊಳ್ಳಲು ತಾಯಂದಿರ ಬೇಡಿಕೆ ಹೆಚ್ಚಾಗಿದ್ದು, ನಮಗೆ ರಾಮನಂಥಾ ಮಗು ಹುಟ್ಟಲಿ ಎಂದು ಬಯಸಿ ಉತ್ತರ ಪ್ರದೇಶದ ಗರ್ಭಿಣಿಯರು ಸಿಜೇರಿಯನ್ ಮಾಡಿಸಿಕೊಳ್ಳಲು ಆಸ್ಪತ್ರೆಗಳಿಗೆ ಮುಗಿಬೀಳುತ್ತಿದ್ದಾರೆ. ಮಾಹಿತಿಯ ಪ್ರಕಾರ ಕಾನ್ಪುರ ದ ಗಾಯತ್ರಿ ಶಂಕರ್ ಸ್ಮಾರಕ ಆಸ್ಪತ್ರೆಯಲ್ಲಿ ಜನವರಿ 22ಕ್ಕೆ ಸಿಜೇರಿಯನ್ಗೆ 14ರಿಂದ 16 ಗರ್ಭಿಣಿಯರು ಮನವಿ ಸಲ್ಲಿಸಿದ್ದಾರಂತೆ. ಹೀಗಾಗಿ ಆಸ್ಪತ್ರೆಯಲ್ಲಿ 35 ಸಿಜೇರಿಯನ್ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯಂತೆ.
ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾನ 84 ಸೆಕೆಂಡ್ಗಳಲ್ಲಿ ಆಗಲಿದೆ. ಮಧ್ಯಾಹ್ನ 12.29ರಿಂದ ಪ್ರತಿಷ್ಠಾಪನಾ ಕಾರ್ಯ ಶುರುವಾಗಲಿದೆ. ಅಂದೇ ಮಗು ಜನಿಸುವುದು ಶುಭಕರ ಮತ್ತು ಶ್ರೇಷ್ಠ ಎಂದು ಈ ಗರ್ಭಿಣಿ ಸ್ತ್ರೀಯರು ಭಾವಿಸಿದ್ದಾರೆ. ಹೀಗಾಗಿ ತಮಗೆ ರಾಮನಂತಹಾ ಸಹನಾ ಗುಣವುಳ್ಳ ಮಗು ಜನಿಸುತ್ತೆ ಅನ್ನೋ ಆಸೆಯಿಂದ ತಾಯಂದಿರು ಈ ಕ್ಷಣವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ.
ಹೊಸ ವರ್ಷ ಸೇರಿದಂತೆ ವಿಶೇಷ ದಿನಗಳಂದು ಮಗು ಹುಟ್ಟಬೇಕೆಂದು ಪೋಷಕರು ಆಸೆ ಪಟ್ಟಿರುತ್ತಾರೆ. ಅದರಲ್ಲೂ ಮುಖ್ಯವಾಗಿ ನ್ಯೂ ಇಯರ್ ದಿನದಂದು ಸಿಜೇರಿಯನ್ ಮಾಡಿಸಿಕೊಳ್ಳುವ ಟ್ರೆಂಡ್ ಇದೆ. ಇದೀಗ ರಾಮ ಮಂದಿರ ಉದ್ಘಾಟನೆ ದಿನವೇ ಮಗು ಪಡೆಯಬೇಕೆಂಬ ಟ್ರೆಂಡ್ ಶುರುವಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ