
ಬೆಂಗಳೂರು, ಮೇ 12: ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಸೇರಿದಂತೆ ರಾಜ್ಯದ ಕಾರಾಗೃಹಗಳಲ್ಲಿ ಸರಣಿ ಅಕ್ರಮಗಳು ಬಯಲಾದ ಬೆನ್ನಲ್ಲೇ, ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಜೈಲಿನಲ್ಲಿ ಕೈದಿಗಳು ಮತ್ತು ಸಿಬ್ಬಂದಿಯ ಪ್ರತಿಯೊಂದು ಚಲನವಲನವನ್ನು ಪತ್ತೆಹಚ್ಚಲು ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್ಮೆಂಟ್’ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆ ಜಾರಿಗೆ ಬಂದಿದ್ದು, ಇನ್ನು ಮುಂದೆ ಜೈಲಿನೊಳಗೆ ಯಾರು, ಎಲ್ಲಿ ಹೋಗುತ್ತಿದ್ದಾರೆಂಬುದು ಸೆಕೆಂಡ್ ಟು ಸೆಕೆಂಡ್ ದಾಖಲಾಗಲಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ಹಿಂದೆ ನಡೆದಿದ್ದ ಆತಂಕಕಾರಿ ಘಟನೆಗಳು ಈ ಕಠಿಣ ನಿರ್ಧಾರಕ್ಕೆ ಪ್ರೇರಣೆಯಾಗಿವೆ. ಇತ್ತೀಚೆಗಷ್ಟೇ ಜೈಲಿನ ಮೇಲೆ ದಾಳಿ ನಡೆದಾಗ ಕೈದಿಗಳು ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಅಲ್ಲದೆ, ದಾಳಿಯ ವೇಳೆ 200ಕ್ಕೂ ಹೆಚ್ಚು ಮೊಬೈಲ್ಗಳು ಪತ್ತೆಯಾಗಿ ಜೈಲಿನ ಭದ್ರತೆಯನ್ನು ಅಣಕಿಸಿದ್ದವು. ಮಗದೊಂದು ಪ್ರಕರಣದಲ್ಲಿ ಕೈದಿಗಳು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ ಡಿಜಿಪಿ ಹೆಸರನ್ನೇ ಪ್ರಸ್ತಾಪಿಸಿ ವೈರಲ್ ಮಾಡಿದ್ದರು. ಇಂತಹ ಘಟನೆಗಳಿಂದ ಜೈಲು ಅಧಿಕಾರಿಗಳ ಶಾಮೀಲಾತಿ ಸಾಬೀತಾದ ಹಿನ್ನೆಲೆಯಲ್ಲಿ, ಈಗ ಸಿಬ್ಬಂದಿಗೂ ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ.
ಈ ಹೊಸ ವ್ಯವಸ್ಥೆಯಡಿ ಜೈಲಿನ ಪ್ರತಿ ಬ್ಯಾರಕ್, ಅಡುಗೆ ಮನೆ, ಆಸ್ಪತ್ರೆ ಮತ್ತು ಸಂದರ್ಶಕರ ಕೊಠಡಿಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗಿದೆ. ಕೈದಿಯು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಹೋಗಬೇಕಾದರೆ ಹೆಬ್ಬೆಟ್ಟಿನ ಗುರುತು ನೀಡಬೇಕು. ಇದರಿಂದ ಯಾವ ಕೈದಿ ಎಷ್ಟೊತ್ತು ಕ್ಯಾಂಟೀನ್ನಲ್ಲಿದ್ದ ಅಥವಾ ಎಷ್ಟು ಸಮಯ ಆಸ್ಪತ್ರೆಯಲ್ಲಿದ್ದ ಎಂಬ ಮಾಹಿತಿ ಕಂಪ್ಯೂಟರ್ನಲ್ಲಿ ದಾಖಲಾಗುತ್ತದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಹೈಡ್ರಾಮಾ: ಜೈಲಧಿಕಾರಿಗಳ ಮೇಲೆ ಕೈದಿಗಳಿಂದ ಹಲ್ಲೆಗೆ ಯತ್ನ, ಲಘು ಲಾಠಿ ಪ್ರಹಾರ!
ಈ ವ್ವವಸ್ಥೆಯು ಕೈದಿಗಳು ಅಕ್ರಮವಾಗಿ ಗುಂಪು ಸೇರುವುದನ್ನು ಮತ್ತು ಮೊಬೈಲ್ ಬಳಸಲು ಸಿಬ್ಬಂದಿ ನೆರವಾಗುವುದನ್ನು ತಡೆಯಲಿದೆ. ಅಲೋಕ್ ಕುಮಾರ್ ಅವರ ಈ ಹೊಸ ‘ಡಿಜಿಟಲ್ ಲಾಕ್’ ಜೈಲು ಹಕ್ಕಿಗಳ ಅಕ್ರಮ ದರ್ಬಾರ್ಗೆ ಅಂತ್ಯ ಹಾಡುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ