AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿಕ್ಷಾಟನೆ ನಿಲ್ಲಿಸಲು ಕಠಿಣ ಕ್ರಮಕ್ಕೆ ಮುಂದಾದ ಕರ್ನಾಟಕ ಸರ್ಕಾರ: ಬೆಂಗಳೂರಿನಲ್ಲಿ ಮಕ್ಕಳ ರಕ್ಷಣೆಗೆ ಎಸಿಪಿಗಳ ನೇಮಕ

ಸಮಾಜದಲ್ಲಿ ನಾಲ್ಕು ರೀತಿಯ ಭಿಕ್ಷಕರು ಕಾಣಿಸುತ್ತಾರೆ. ಇವರೆಲ್ಲರ ಸಮಸ್ಯೆ ಮತ್ತು ಅಗತ್ಯಗಳು ಬೇರೆಬೇರೆ ಎಂದು ವಿವರಿಸಿದರು.

ಭಿಕ್ಷಾಟನೆ ನಿಲ್ಲಿಸಲು ಕಠಿಣ ಕ್ರಮಕ್ಕೆ ಮುಂದಾದ ಕರ್ನಾಟಕ ಸರ್ಕಾರ: ಬೆಂಗಳೂರಿನಲ್ಲಿ ಮಕ್ಕಳ ರಕ್ಷಣೆಗೆ ಎಸಿಪಿಗಳ ನೇಮಕ
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jul 18, 2022 | 3:03 PM

Share

ಬೆಂಗಳೂರು: ಕರ್ನಾಟಕ ಸರ್ಕಾರವು ಭಿಕ್ಷಾಟನೆ ನಿಲ್ಲಿಸಲು ಅಗತ್ಯ ಕ್ರಮ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಪೂರಕ ಕಾರ್ಯಕ್ರಮಗಳಿಗೆ ವೇಗ ಕೊಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಾಲ್ಕು ರೀತಿಯ ಭಿಕ್ಷಕರು ಕಾಣಿಸುತ್ತಾರೆ. ಇವರೆಲ್ಲರ ಸಮಸ್ಯೆ ಮತ್ತು ಅಗತ್ಯಗಳು ಬೇರೆಬೇರೆ ಎಂದು ವಿವರಿಸಿದರು. ವಯೋ ಸಹಜ ಭಿಕ್ಷಕರು, ಮಾನಸಿಕ ಅಸ್ವಸ್ಥರು, ತೃತಿಯ ಲಿಂಗಿಗಳು ಹಾಗೂ ಮಕ್ಕಳ ಭಿಕ್ಷಾಟನೆ ಸಮಾಜದಲ್ಲಿ ಕಂಡು ಬರುತ್ತಿದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೆಲವರು ಭಿಕ್ಷೆ ಬೇಡುತ್ತಾ ನಿಂತಿರುತ್ತಾರೆ. ಮಕ್ಕಳಿಗೆ ಮತ್ತು ಬರುವ ಅಂಶ ನೀಡಿ ತಾಯಂದಿರು ಭಿಕ್ಷೆ ಬೇಡುವುದು ಕಂಡುಬರುತ್ತಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿ ಇತ್ತೀಚೆಗೆ 80 ಮಕ್ಕಳನ್ನು ರಕ್ಷಣೆ ಮಾಡಿ ನಿರ್ಭಯ ಕೇಂದ್ರಕ್ಕೆ ದಾಖಲಿಸಲಾಗಿದೆ. ತಾಯಿ ಮತ್ತು ಮಗುವನ್ನು ಸಂರಕ್ಷಿಸಿ ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಕೊಡಲಾಗುತ್ತದೆ. ನ್ಯಾಯಾಲಯದ ಸೂಚನೆ ಮೇರೆಗೆ ನಗರ ಪ್ರದೇಶಕ್ಕೆ ಸೀಮಿತವಾಗಿ 18 ವರ್ಷದ ಒಳಗಿನ 720 ಮಕ್ಕಳನ್ನು ಗುರುತಿಸಿ ಅವರನ್ನ ರಕ್ಷಣೆ ಮಾಡಲಾಗಿದೆ ಎಂದರು.

ಬೆಂಗಳೂರಿನ 8 ಡಿವಿಜನ್‌ಗಳಲ್ಲಿ ಮಕ್ಕಳ ರಕ್ಷಣೆಗಾಗಿ ಎಸಿಪಿಗಳನ್ನು ನೇಮಿಸಲಾಗಿದೆ. ಈ ಎಸಿಪಿಗಳು ಮಕ್ಕಳನ್ನು ರಕ್ಷಿಸಿ, ಮಕ್ಕಳ ರಕ್ಷಣಾ ಕೇಂದ್ರಕ್ಕೆ ಸೇರಿಸುತ್ತಾರೆ. ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೆ ತರಲು ಸಮಾಜ ಕಲ್ಯಾಣ ಇಲಾಖೆಯು ಸಂಪೂರ್ಣ ಬದ್ಧವಾಗಿದೆ. ತಾಯಿ, ಮಗು ಬೀದಿಯಲ್ಲಿ ಭಿಕ್ಷೆ ಬೇಡುವುದು ತಪ್ಪಿಸಬೇಕಿದೆ. ಇದಕ್ಕೆ ಬೇಕಾದ ವಾಹನ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸಿಡಬ್ಲ್ಯೂಸಿ ಮಕ್ಕಳ ರಕ್ಷಣಾ ಪಡೆ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ ಭರವಸೆ ಮೂಡಿಸಲು ಯತ್ನಿಸುತ್ತಿದ್ದಾರೆ. ಪ್ರಯಾಣಿಕರಿಗೆ ಹಿಂಸೆ ಕೊಡುವ, ಹಿಂದೆ ಬೀಳುವವರನ್ನು ಗುರುತಿಸಿ ರಕ್ಷಣೆ ಮಾಡಲಾಗುವುದು. 31 ಜಿಲ್ಲೆಗಳಲ್ಲೂ ಇದು ಅನ್ವಯ ಆಗಲಿದೆ. ಜಿಲ್ಲಾಧಿಕಾರಿಗಳ ಮಟ್ಟದ ಸಮಿತಿಯು ಈ ನಿಟ್ಟಿನಲ್ಲಿ ಗಮನ ಹರಿಸುತ್ತಿದೆ. ಭಿಕ್ಷಾಟನೆ ನಿಷೇಧ ಕಾಯ್ದೆಯು ಇಡೀ ರಾಜ್ಯಕ್ಕೆ ಅನ್ವಯ ಆಗಲಿದೆ. ಮೊದಲ‌ ಹಂತದಲ್ಲಿ ಬೆಂಗಳೂರಿನಲ್ಲಿ ತಾಯಿ, ಮಕ್ಕಳನ್ನು ರಕ್ಷಣೆ ಮಾಡುವ ಕೆಲಸ ಆಗಲಿದೆ ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ಭಿಕ್ಷಾಟನೆ ನಿಯಂತ್ರಣ ಸಂಬಂಧ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭೆ ನಡೆಯಿತು. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು, ತಾಯಂದಿರ ರಕ್ಷಣೆ, ಭಿಕ್ಷಾಟನೆಯನ್ನು ನಿಯಂತ್ರಿಸುವ ಸಂಬಂಧ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಸಚಿವರಾದ ಆರಗ ಜ್ಞಾನೇಂದ್ರ, ಶಿವರಾಂ ಹೆಬ್ಬಾರ್, ಹಾಲಪ್ಪ ಪಾಲ್ಗೊಂಡಿದ್ದರು.

Published On - 2:56 pm, Mon, 18 July 22