ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಬೀದಿನಾಯಿಗಳ ಕಾಟ; ವಾಹನ ಸವಾರರಿಗೆ ಸಂಕಷ್ಟ, ಜನರಿಗೆ ಆತಂಕ

| Updated By: ಆಯೇಷಾ ಬಾನು

Updated on: Jul 13, 2024 | 2:25 PM

ಬೀದಿನಾಯಿಗಳ ಗ್ಯಾಂಗ್​ನಿಂದಾಗಿ ಬೆಂಗಳೂರಿನ ಕೆಲ ರಸ್ತೆಗಳಿಗೆ ಕಾಲಿಡೋಕೆ ಜನರು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಯಾವ ಗಲ್ಲಿಯಿಂದ, ಯಾವ ಕಡೆಯಿಂದ ಅಟ್ಯಾಕ್ ಮಾಡುತ್ತವೋ ಅನ್ನೋ ಭಯದಲ್ಲೇ ಜನರು ಓಡಾಡ್ತಿದ್ದಾರೆ. ಅತ್ತ ವಾಹನ ಸವಾರರನ್ನೂ ಬಿಡದೇ ಅಟ್ಟಾಡಿಸ್ತಿರೋದು ವಾಹನ ಸವಾರರಿಗೂ ಆತಂಕ ತಂದಿಟ್ತಿದೆ. ಅತ್ತ ಈ ಗ್ಯಾಂಗ್​ಗೆ ಲಗಾಮು ಹಾಕಬೇಕಿದ್ದ ಪಾಲಿಕೆ ಸೈಲೆಂಟ್ ಆಗಿರೋದಕ್ಕೆ ಸಿಟಿಮಂದಿ ವೈಲೆಂಟ್ ಆಗಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಬೀದಿನಾಯಿಗಳ ಕಾಟ; ವಾಹನ ಸವಾರರಿಗೆ ಸಂಕಷ್ಟ, ಜನರಿಗೆ ಆತಂಕ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜುಲೈ.13: ರಾಜ್ಯ ರಾಜಧಾನಿಯಲ್ಲಿ ಬೀದಿನಾಯಿಗಳ (Stray Dogs) ಹಾವಳಿ ಜೋರಾಗ್ತಿದೆ. ಶಾಪಿಂಗ್ ಹಾಟ್ ಸ್ಪಾಟ್ ಆಗಿದ್ದ ಬಸವನಗುಡಿಯ ಗಾಂಧಿ ಬಜಾರ್, ಲಾಲ್ ಬಾಗ್, ಸಂಪಂಗಿ ರಾಮನಗರ ಸೇರಿದಂತೆ ಹಲವೆಡೆ ಬೀದಿನಾಯಿಗಳು ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಕಂಡುಬರ್ತಿದೆ. ರಾಜಧಾನಿಯ ರಸ್ತೆಗಳಲ್ಲಿ ಸೈಲೆಂಟ್ ಆಗಿ ಮಲಗಿ ನಿದ್ದೆಮಾಡ್ತಿರೋ ಈ ಶ್ವಾನಗಳು, ಕೆಲವೊಮ್ಮೆ ವೈಲೆಂಟ್ ಆಗ್ತಿರೋದು ಸಿಟಿಮಂದಿಗೆ ಸಂಕಷ್ಟ ತಂದಿಟ್ಟಿದೆ.

ಶಾಪಿಂಗ್ ಹಾಟ್ ಸ್ಪಾಟ್ ಆಗಿರೋ ಗಾಂಧಿ ಬಜಾರ್ ಸುತ್ತಮುತ್ತ ಬೀದಿನಾಯಿಗಳು ಗುಂಪು ಕಟ್ಟಿಕೊಂಡು ಓಡಾಡ್ತಿವೆ. ಸಂಜೆ ವೇಳೆ ಕೆಲ ಶ್ವಾನಗಳು ಜನರಿಗೆ ಕಾಟ ಕೊಡ್ತಿರೋದು ಜನರನ್ನ ಹೈರಾಣಾಗಿಸಿದೆ. ಅತ್ತ ಸಂಪಂಗಿ ರಾಮನಗರ ಸುತ್ತಮುತ್ತ ಯಾವ ವಾಹನ ಬಂದ್ರೂ ಬೀದಿನಾಯಿಗಳು ಅಟ್ಟಾಡಿಸಿಕೊಂಡು ಹೋಗ್ತಿದ್ದು, ಇದರಿಂದ ವಾಹನ ಸವಾರರು ಗಾಬರಿಯಾಗಿ ಅಪಘಾತ ಸಂಭವಿಸಿದ ಉದಾಹರಣೆಯಿದೆ. ಬೀದಿನಾಯಿಗಳ ಕಾಟಕ್ಕೆ ಬೇಸತ್ತ ಮಂದಿ, ಪಾಲಿಕೆ ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕು ಅಂತಾ ಆಗ್ರಹ ಮಾಡ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಪ್ರವಾಸಿ ತಾಣಗಳಲ್ಲಿ ಹೆಚ್ಚಿದ ಪೊಲೀಸ್ ತಪಾಸಣೆ, ಮದ್ಯದ ಬಾಟಲಿಗಳು ಸೀಜ್!

ಇನ್ನು ಬೀದಿನಾಯಿಗಳು ಹಲವೆಡೆ ಜನರಿಗೆ ಸಮಸ್ಯೆಯಾಗ್ತಿದ್ದರು ಪಾಲಿಕೆ ಕ್ರಮ ಕೈಗೊಂಡಿಲ್ಲ ಅಂತಿರೋ ಸಿಟಿಮಂದಿ, ಬೀದಿನಾಯಿಗಳನ್ನ ಸೆರೆಹಿಡಿಯೋದೊಂದೆ ಇದಕ್ಕೆ ಪರಿಹಾರ ಅಂತಾ ಆಗ್ರಹ ಮಾಡ್ತಿದ್ದಾರೆ. ಅಲ್ಲದೇ ಬೀದಿಗಳಲ್ಲಿ ನಾಯಿಗಳ ಕಾಟಕ್ಕೆ ಮಹಿಳೆಯರು, ಮಕ್ಕಳು ಓಡಾಡೋಕು ಭಯಪಡುವಂತಾಗಿದೆ ಅಂತಿರೋ ಜನರು, ಬೀದಿನಾಯಿಗಳ ಮೇಲೆ ನಿಗಾ ಇಡಿ ಅಂತಿದ್ದಾರೆ.

ಸದ್ಯ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ಸೈಲೆಂಟ್ ಆಗ್ತಿರೋ ಪಾಲಿಕೆ, ಬೀದಿನಾಯಿಗಳು ಜನರ ಮೇಲೆ ದಾಳಿ ನಡೆಸೋ ಮೊದಲೇ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ. ಬೀದಿನಾಯಿಗಳ ಕಾಟಕ್ಕೆ ಸುಸ್ತಾದ ಸಿಟಿಮಂದಿ ಪಾಲಿಕೆಗೆ ಹಿಡಿಶಾಪ ಹಾಕ್ತಿದ್ದು, ಸದ್ಯ ಬೀದಿನಾಯಿಗಳ ಕಾಟಕ್ಕೆ ಪಾಲಿಕೆ ಬ್ರೇಕ್ ಹಾಕುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ