ಮೇಕೆದಾಟು ಡಿಪಿಆರ್ ಬಗ್ಗೆ ಪ್ರಸ್ತಾಪಿಸಲು ಮುಂದಾದ ಕರ್ನಾಟಕ; ಚರ್ಚೆ ಮಾಡಕೂಡದು ಎಂದು ಆಕ್ಷೇಪ ತೆಗೆದ ತಮಿಳುನಾಡು

| Updated By: Skanda

Updated on: Aug 31, 2021 | 1:01 PM

ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಮೇಕೆದಾಟು DPR ಬಗ್ಗೆ ಪ್ರಸ್ತಾಪಿಸಲು ಕರ್ನಾಟಕ ಮುಂದಾದಾಗ ತಕರಾರು ತೆಗೆದ ತಮಿಳುನಾಡು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಹೀಗಾಗಿ ಚರ್ಚೆಗೆ ಅವಕಾಶ ನೀಡಬಾರದು ಎಂದಿದೆ.

ಮೇಕೆದಾಟು ಡಿಪಿಆರ್ ಬಗ್ಗೆ ಪ್ರಸ್ತಾಪಿಸಲು ಮುಂದಾದ ಕರ್ನಾಟಕ; ಚರ್ಚೆ ಮಾಡಕೂಡದು ಎಂದು ಆಕ್ಷೇಪ ತೆಗೆದ ತಮಿಳುನಾಡು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 13ನೇ ಸಭೆ ದೆಹಲಿಯ ಸೇವಾ ಭವನದಲ್ಲಿ ನಡೆಯುತ್ತಿದ್ದು, ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಮೇಕೆದಾಟು DPR ಬಗ್ಗೆ ಪ್ರಸ್ತಾಪಿಸಲು ಕರ್ನಾಟಕ ಮುಂದಾದಾಗ ತಕರಾರು ತೆಗೆದ ತಮಿಳುನಾಡು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಹೀಗಾಗಿ ಚರ್ಚೆಗೆ ಅವಕಾಶ ನೀಡಬಾರದು ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತಿಳಿಸಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 13ನೇ ಸಭೆ ದೆಹಲಿಯ ಸೇವಾ ಭವನದಲ್ಲಿ ನಡೆಯುತ್ತಿದ್ದು, ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದರ್ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಬಾಕಿ ನೀರು ಬಿಡುಗಡೆಗೆ ತಮಿಳುನಾಡು ಬೇಡಿಕೆ ಇಟ್ಟಿದೆ. ಈವರೆಗೂ ಕರ್ನಾಟಕ 86.38 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ತಮಿಳುನಾಡಿಗೆ 55.78 ಟಿಎಂಸಿ ನೀರು ಮಾತ್ರ ಹರಿಸಿದೆ. ಬಾಕಿ 30.06 ಟಿಎಂಸಿ ನೀರು ಹರಿಸಬೇಕೆಂದು ಸಿಡಬ್ಲ್ಯುಎಂಎ ಸಭೆಯಲ್ಲಿ ತಮಿಳುನಾಡು ಬೇಡಿಕೆಯಿಟ್ಟಿದೆ.

ಶೀಘ್ರದಲ್ಲೇ ಡಿಪಿಆರ್​ಗೆ ಮಾನ್ಯತೆ ಸಿಗಲಿದೆ ಎಂದಿದ್ದ ಸಿಎಂ ಬೊಮ್ಮಾಯಿ
ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟು ಮನವರಿಕೆ ಮಾಡಿಕೊಟ್ಟಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಶೀಘ್ರದಲ್ಲೇ ಡಿಪಿಆರ್​ಗೆ ಮಾನ್ಯತೆ ಸಿಗಲಿದೆ ಎಂದು ನವದೆಹಲಿಯಲ್ಲಿ ಹೇಳಿಕೆ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ ಸಮಯ ಕೇಳಿದ್ದೇನೆ. ಅವರಿಗೆ ವೈಯಕ್ತಿಕ ಕೆಲಸವಿರುವ ಹಿನ್ನೆಲೆ ಸದ್ಯದಲ್ಲೇ ಭೇಟಿಯಾಗಲು ತಿಳಿಸಿದ್ದಾರೆ ಎಂದು ಹೇಳಿದ್ದರು.

ಮೇಕೆದಾಟು ಡ್ಯಾಂ ನಿರ್ಮಿಸುವುದನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ಕರ್ನಾಟಕ ಜಲ ಸಂಪನ್ಮೂಲ ಆಯೋಗಕ್ಕೆ ಸಲ್ಲಿಸಿರುವ ವರದಿಯನ್ನು ರದ್ದುಪಡಿಸಲು ತಮಿಳುನಾಡು ತನ್ನ ಅರ್ಜಿಯಲ್ಲಿ ಕೋರಿದೆ. ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಳೆದ ಕೆಲವು ತಿಂಗಳಿನಿಂದ ‘ಹೇಳಿಕೆ’ಗಳ ಸಮರ ನಡೆಯುತ್ತಿದೆ.

ಇದನ್ನೂ ಓದಿ:
ಮೇಕೆದಾಟು ಯೋಜನೆ ಜಾರಿ ಬಗ್ಗೆ ಮನವರಿಕೆ ಮಾಡಿದ್ದೇವೆ; ಶೀಘ್ರವೇ ಡಿಪಿಆರ್​ಗೆ ಮಾನ್ಯತೆ: ಬಸವರಾಜ ಬೊಮ್ಮಾಯಿ 

ಮೇಕೆದಾಟು ಡ್ಯಾಂ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ ತಮಿಳುನಾಡು

(Tamil Nadu objects Karnataka to Discuss over Mekedatu DPR in Delhi)

Published On - 12:46 pm, Tue, 31 August 21