ಮಕ್ಕಳ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ

ಪಠ್ಯಪುಸ್ತಕ ಪರಿಷ್ಕರಣೆಯನ್ನು ಮಕ್ಕಳಿಗೆ ಸಮಸ್ಯೆಯಾಗದಂತೆ ಮಾಡಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಪಠ್ಯಪರಿಷ್ಕರಣೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಮಕ್ಕಳ ಹಿತದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ
Follow us
|

Updated on: Jun 02, 2023 | 1:55 PM

ಬೆಂಗಳೂರು: ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಪಠ್ಯಪುಸ್ತಕ ಪರಿಷ್ಕರಣೆ (Textbook revision) ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಹಿಂದಿನ ಸರ್ಕಾರ ಪರಿಷ್ಕರಿಸಿದ ಪಠ್ಯಪುಸ್ತಕವನ್ನು, ಈಗ ಮತ್ತೆ ಕಾಂಗ್ರೆಸ್​ ಸರ್ಕಾರ ಪರಿಷ್ಕರಿಸಲು ಮುಂದಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯನ್ನು ಮಕ್ಕಳಿಗೆ ಸಮಸ್ಯೆಯಾಗದಂತೆ ಮಾಡಲಾಗುವುದು. ಮಕ್ಕಳ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮಾರ್ಗದರ್ಶನದಲ್ಲಿ ಪಠ್ಯಪರಿಷ್ಕರಣೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪಠ್ಯ ಪುಸ್ತಕ ಪರಿಷ್ಕರಣೆ ಈಗಾಗಲೇ ಒಂದು ಹಂತಕ್ಕೆ ಬಂದಿದೆ. ಶಾಲಾ ತರಗತಿ ಪ್ರಾರಂಭ ಮಾಡಲು ಇನ್ನೂ 15 ದಿನಗಳು ಬೇಕು. ಮಕ್ಕಳಿಗೆ ತೊಂದರೆ ಆಗದಂತೆ ಪಠ್ಯಪರಿಷ್ಕರಣೆ ಮಾಡಲಾಗುತ್ತೆ. ನಿರ್ದಿಷ್ಟವಾಗಿ ಇಂತಹ ಪಾಠವೇ ತೆಗೆಯುತ್ತೇವೆ ಅಂತಾ ಹೇಳಲ್ಲ ಎಂದು ಸ್ಪಷ್ಟನೆ ನೀಡಿದರು.

ರೋಹಿತ್ ಚಕ್ರತೀರ್ಥ ವಿರುದ್ಧ ದೂರು ವಿಚಾರವಾಗಿ ಮಾತನಾಡಿದ ಅವರು ನಮ್ಮ ಆದ್ಯತೆ ಮೊದಲು ಪಠ್ಯಪುಸ್ತಕ ಬದಲಾವಣೆ. ನಂತರ ಅದರ ಬಗ್ಗೆ ಮಾತನಾಡ್ತೇನೆ ಎಂದರು.

ಪಠ್ಯ ಪರಿಷ್ಕರಣೆ ವಿರುದ್ಧ ಸಿಟಿ ರವಿ ವಾಕ್ಪ್ರಹಾರ

ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಮಾನ ಮನಸ್ಕರ ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಬುದ್ದಿಜೀವಿಗಳನ್ನು ಮೆಕಾಲೆ ಹೋಲಿಸಿ ವಾಗ್ದಾಳಿ ನಡೆಸಿದ್ದರು. ಜೂನ್ 1 ರಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಗುಂಡು, ತುಂಡು, ಸಿಗರೇಟ್ ಕೈಯಲ್ಲಿ ಇದ್ದರೆ ಬುದ್ದಿ ಓಡುವ ಜನ ಮಾತ್ರ ಬುದ್ದಿಜೀವಿಗಳಾ? ಎಂದು ಪ್ರಶ್ನಿಸಿದ್ದರು.

ಬುದ್ದಿಜೀವಿಗಳು ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತವನ್ನು ದಾಸ್ಯದ ಚಿಂತನೆಯಲ್ಲೇ ನಮ್ಮ ಸಂಸ್ಕೃತಿಗಳ ವಿರುದ್ಧ ಇದ್ದವರು. ದಾಸ್ಯದಲ್ಲೇ ಇರಬೇಕು ಎನ್ನುವ ಯೋಚನೆಯಲ್ಲಿ ಜನರನ್ನು ತಯಾರು ಮಾಡುವ ಯೋಚನೆ ಅವನದ್ದಾಗಿತ್ತು. ಕುಟುಂಬ ಒಂದು ಸಂಸ್ಥೆ, ರಾಜ್ಯ ಇರಬಾರದು ಎನ್ನುವ ಚಿಂತನೆ ಕಾರ್ಲ್ ಮಾರ್ಕ್ಸ್​​ದಾಗಿತ್ತು. ಅವರ ಚಿಂತನೆಯಲ್ಲಿರುವ ಜನ ಭಾರತ ಶ್ರೇಷ್ಠ ಎಂದು ಹೇಳಿದ್ದಾರಾ? ಅಲೆಗ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಎನ್ನುವ ಇವರು ಯಾರು? ಇವರು ದೇಶ ಲೂಟಿ ಮಾಡಿದ ದಾಳಿಕೋರರು. ನಮ್ಮ ಸಂಸ್ಕೃತಿ ನಾಶ ಮಾಡಿದವರು‌. ನಮ್ಮ ತಾಯಂದಿರ ಶೀಲವನ್ನು ಕೆಡಿಸಲು ಕೈ ಹಾಕಿದವರು. ಅಂತಹವರನ್ನು ದಿ ಗ್ರೇಟ್ ಎಂದು

ನಮ್ಮ ದೇಶದಲ್ಲಿ ಹೇಳಿಕೊಳ್ಳುತ್ತಾರೆ ಎನ್ನುವುದೇ ದೇಶಕ್ಕೆ ಅಪಮಾನ ಎಂದು ಕಿಡಿಕಾರಿದ್ದರು. ದೇಶದಲ್ಲಿ ಸಾಧನೆ ಮಾಡಿದವರು ಇರಲಿಲ್ಲವೇ? ಆರ್ಯಭಟ, ಚಾಣಕ್ಯ , ಅಶೋಕ ಚಕ್ರವರ್ತಿ, ರಾಜರಾಜ ಚೋಳ ಎಲ್ಲಿಯವರು? ಅವರ ಇತಿಹಾಸದ ಬಗ್ಗೆ ಎಲ್ಲಾದರೂ ಹೇಳಿದ್ರಾ? ರಾಜ ರಾಜ ಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳ ಇವರೆಲ್ಲಾ ಇಂಡೊನೇಷ್ಯಾ ಕಾಂಬೋಡಿಯಾವರೆಗೆ ಭಾರತವನ್ನು ವಿಸ್ತರಣೆ ಮಾಡಿದರು ಎನ್ನುವುದು ಇತಿಹಾಸದಲ್ಲಿ ಓದಿದ್ದೇವಾ? ಅಶೋಕ್ ಚಕ್ರವರ್ತಿ ಸಾಮ್ರಾಜ್ಯ ಪರ್ಷಿಯಾವನ್ನು ದಾಟಿ ಹೋಗಿತ್ತು, ಅದನ್ನು ಓದಿದ್ದೇವಾ? ಎಂದು ಪ್ರಶ್ನಿಸಿದ್ದರು.

ನಾವು ಹೇಳಿಕೊಟ್ಟಿದ್ದು ಅಕ್ಬರ್ ಗ್ರೇಟ್, ಅಲೆಗ್ಸಾಂಡರ್ ಗ್ರೇಟ್. ಈ ಬುದ್ದಿಜೀವಿಗಳು ಮೆಕಾಲೆ, ಕಾರ್ಲ್ ಮಾರ್ಕ್ಸ್ ಗರಡಿಯಲ್ಲಿ ಪಳಗಿದವರು. ಆ ಜನರಿಗೆ ಭಾರತೀಯತೆ, ಭಾರತದ ಹಿರಿಮೆ ಗರಿಮೆ ಹೇಳುವ ಸಂಗತಿ ಅಪಥ್ಯವಾಗಿ ಕಂಡಿದೆ. ಆ ಜನ ಇವತ್ತು ಸಿದ್ದರಾಮಯ್ಯ ಕಿವಿಗೆ ಪದೇ ಪದೇ ಊದುತ್ತಾ ಇದ್ದಾರೆ. ಭಾರತದ ಶ್ರೇಷ್ಠತೆಯನ್ನು ಹೇಳುವ ಕೆಲಸ ಆಗಬೇಕು. ಆಗ ಭಾರತ ಎದ್ದು ನಿಲ್ಲುತ್ತದೆ. ಸಾಮಾನ್ಯ ಜನ ದೇಶಕ್ಕೆ ಸಮರ್ಪಣೆ ಮಾಡಿದ್ದು, ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಹೇಳಿದರೆ ಭಾರತ ಎದ್ದು ನಿಲ್ಲುತ್ತದೆ. ಈ ಜನರಿಗೆ ಭಾರತ ಎದ್ದು ನಿಲ್ಲಬಾರದು. ಹೀಗಾಗಿ ಈ ಜನ ಪಠ್ಯ ಪುಸ್ತಕ ನೆಪಮಾಡಿಕೊಂಡಿದ್ದಾರೆ. ಇವರು ಮಾತ್ರ ತಜ್ಞರಾ? ಎಂದು ಕುಟುಕಿದ್ದರು.

ಸಂಸತ್ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಇದು ಭಾರತದ ಪ್ರಜಾಪ್ರಭುತ್ವದ ದೇಗುಲ. ಈಗ ಸಂಸತ್ ಕಟ್ಟಿದ್ದು ಬ್ರಿಟಿಷರು ಎನ್ನುವ ಹಾಗಿಲ್ಲ, ನಮ್ಮವರೇ ಕಟ್ಟಿದ್ರು ಎಂದು ಹೇಳಬೇಕು ಅಂತಾ ದೇವೇಗೌಡರು ಚೆನ್ನಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಗೆ ಇದು ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಗರು ಕಟ್ಟಿದರು, ಮೋದಿ ಕಟ್ಟಿದರು ಎಂಬ ನೋವು ಕಾಂಗ್ರೆಸ್ ಗೆ ಇದೆ. ಪಾಂಡವರ ಇಂದ್ರಪ್ರಸ್ಥಕ್ಕೆ ಹೋಗಿದ್ದ ದುರ್ಯೋಧನಾದಿ ಕೌರವರು ಅದನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ದರು. ಈಗ ಅದೇ ರೀತಿ ಹೊಸ ಸಂಸತ್ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದು ಕೊಳ್ಳುತ್ತಿದೆ‌ ಎಂದು ಟಾಂಗ್ ನೀಡಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ