ಮೈತ್ರಿ ಪಕ್ಷದ ವಿರೋಧಿಯನ್ನು ಜೆಡಿಎಸ್ಗೆ ಸೇರಿಸಿಕೊಂಡ ಕುಮಾರಣ್ಣ: ಭುಗಿಲೆದ್ದ ಅಸಮಾಧಾನ
ಭಾರೀ ವಿರೋಧದ ನಡುವೆಯೂ ಸ್ವಾಭಿಮಾನ ಜನತಾ ಪಕ್ಷದ ಮುಖಂಡ ಇದೀಗ ಮಿತ್ರ ಪಕ್ಷ ಜೆಡಿಎಸ್ (JDS) ಸರ್ಪಡೆಯಾಗಿದ್ದಾರೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ನಾಯಕ ಇದೀಗ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಇದ್ದರೂ ಸಹ ಬಂಡಾಯ ನಾಯಕ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರು, (ಮಾರ್ಚ್ 05): ಕೋಲಾರ (Kolar) ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯದಿಂದ ಸ್ಪರ್ಧಿಸಿ ಸೋತಿದ್ದ ಹೂಡಿ ವಿಜಯ್ ಕುಮಾರ್ ( hoodi Vijaykumar) ಇಂದು (ಮಾರ್ಚ್ 05) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು ಮಾಲೂರು ಸ್ವಾಭಿಮಾನಿ ಜನತಾ ಪಕ್ಷದಿಂದ ನಿಂತು ಸೋತಿದ್ದ ವಿಜಯ್ ಕುಮಾರ್ ಬೆಂಗಳೂರಿನ (Bengaluru) ಜೆಪಿ ಭವನದಲ್ಲಿಂದು ಕೇಂದ್ರ ಸಚಿವ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡ ಬಳಿಕ ಮಾತನಾಡಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನಾನು ವಿಜಯ್ ಕುಮಾರ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೆನೆ. ಮುಂದೆ ಒಂದು ದಿನ ಪಕ್ಷ ಸೇರುವ ಸಮಯ ಬರುತ್ತೆ ಎಂದು ಹೇಳಿದ್ದೆ. ದುಡಿಕೆ ರಾಜಕೀಯ ಜೀವನವನ್ನ ಹಾಳು ಮಾಡಬಾರದು.ಒಳ್ಳೆಯ ಉದ್ದೇಶಕ್ಕೆ ನಾವು ಕೈ ಜೋಡಿಸೊದ್ದೇವೆ. ಮಾಲೂರು ಅಭಿವೃದ್ಧಿಗೆ ಹೊಸ ಚೈತನ್ಯ ತುಂಬಬೇಕು. ವಿಧಾನಸಭಾ ಚುನಾವಣೆ ಇನ್ನೂ ದೂರ ಇದೆ. ಅದಕ್ಕೂ ಮೊದಲು ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಅದು ಕಾರ್ಯಕರ್ತರ ಚುನಾವಣೆಯಾಗಿದೆ. ಮಾಲೂರು ಕ್ಷೇತ್ರದ ಕೆಲವರು ಕಾರಣಾಂತರದಿಂದ ಪಕ್ಷವನ್ನ ಬಿಟ್ಟು ಹೋಗಿದ್ರು. ಇವತ್ತು ಎಲ್ಲರು ಮತ್ತೆ ಪಕ್ಷ ಸೇರಿದ್ದಾರೆ. ಎಲ್ಲರಿಗೂ ಸ್ವಾಗತ ಕೋರುತ್ತೇನೆ ಎಂದರು.
ಇದನ್ನೂ ಓದಿ: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆ: ಮರು ಎಣಿಕೆಯಲ್ಲೂ ‘ಕೈ’ ನಾಯಕನದ್ದೇ ಮೇಲುಗೈ
ಬಿಜೆಪಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ವಿಜಯಕುಮಾರ್!
2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೆತ್ರದ ಬಿಜೆಪಿ ಟಿಕೆಟ್ ಹೂಡಿ ವಿಜಯ್ ಕುಮಾರ್ ಅವರ ಬದಲಿಗೆ ಕೆ.ಎಸ್. ಮಂಜುನಾಥ್ ಗೌಡ ಅವರಿಗೆ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡು ಹೂಡಿ ವಿಜಯ್ ಕುಮಾರ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದರಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಅವರ ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಯಾಕಂದ್ರೆ, ಕಾಂಗ್ರೆಸ್ನ ನಂಜೇಗೌಡ ಅವರು ಕೇವಲ 250 ಮತಗಳಿಂದ ಮಾತ್ರ ಗೆದ್ದಿದ್ದರು. ಒಂದು ವೇಳೆ ಹೂಡಿ ವಿಜಯ್ ಕುಮಾರ್ ಬಂಡಾಯವಾಗಿ ಸ್ಪರ್ಧೆ ಮಾಡದಿದ್ದರೆ ಬಿಜೆಪಿ ಗೆಲ್ಲುತ್ತಿತ್ತು.
ಮೈತ್ರಿಯಲ್ಲಿ ಬಿರುಕು!
ಹೂಡಿ ವಿಜಯ್ ಕುಮಾರ್ ಜೆಡಿಎಸ್ ಸೇರ್ಪಡೆಗೆ ಸ್ಥಳೀಯ ಬಿಜೆಪಿ ನಾಯಕರು, ಮಂಜುನಾಥ್ ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಜುನಾಥ್ ಗೌಡ ಆಕ್ರೋಶ ವ್ಯಕ್ತಪಡಿಸಿ, ಜೆಡಿಎಸ್ ವರಿಷ್ಠರು ಮೈತ್ರಿ ಧರ್ಮವನ್ನು ಮುರಿಯುತ್ತಿದ್ದಾರೆ ಆರೋಪಿಸಿದ್ದಾರೆ. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯ ನಡುವೆ ಇದು ಬಿರುಕು ಉಂಟುಮಾಡಿದೆ ಎಂಬ ಆತಂಕ ವ್ಯಕ್ತವಾಗಿದೆ.ಮಿತ್ರ ಪಕ್ಷ ಬಿಜೆಪಿ ವಿರೋಧದ ನಡುವೆಯೂ ಹೂಡಿ ವಿಜಯ್ ಕುಮಾರ್ ಅವರನ್ನು ಜೆಡಿಎಸ್ಗೆ ಸೇರಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಮಿತ್ರ ಪಕ್ಷಗಳ ನಡುವೆ ಸಂಬಂಧ ಹೇಗಿರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
