ಬೆಂಗಳೂರಿನಾದ್ಯಂತ ಬಕ್ರೀದ್ ಸಂಭ್ರಮ; ಹಲವೆಡೆ ಟ್ರಾಫಿಕ್ ಜಾಮ್

| Updated By: ವಿವೇಕ ಬಿರಾದಾರ

Updated on: Jun 17, 2024 | 9:57 AM

ಬೆಂಗಳೂರಿನಾದ್ಯಂತ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಸಂಭ್ರಮ ಮನೆ ಮಾಡಿದೆ. ಮುಸ್ಲಿಮರು ಹಬ್ಬದ ಪ್ರಯುಕ್ತ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದು ಕೆಲ ನಿಮಿಷಗಳಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ನಗರದ ಕೆಲವೆಡೆ ಟ್ರಾಫಿಕ್ ಕಂಡು ಬಂದಿದೆ.

ಬೆಂಗಳೂರಿನಾದ್ಯಂತ ಬಕ್ರೀದ್ ಸಂಭ್ರಮ; ಹಲವೆಡೆ ಟ್ರಾಫಿಕ್ ಜಾಮ್
ಟ್ರಾಫಿಕ್
Follow us on

ಬೆಂಗಳೂರು, ಜೂನ್. 17: ರಾಜ್ಯಾದ್ಯಂತ ಇಂದು ಬಕ್ರಿದ್ (Bakrid) ಹಬ್ಬ ಸಂಭ್ರಮ ಮನೆ ಮಾಡಿದೆ. ಬಕ್ರೀದ್ ಹಿನ್ನೆಲೆ ಬೆಂಗಳೂರಿನ ಕೆಲವೆಡೆ ಟ್ರಾಫಿಕ್ ಸಮಸ್ಯೆ ಎದುರಾಗಿದೆ (Bengaluru Traffic). ಕಿ,ಮೀ ಗಟ್ಟಲೆ ಟ್ರಾಫಿಕ್​ನಲ್ಲಿ ನಿಲ್ಲುವಂತಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ಪೊಲೀಸ್ ಭದ್ರತೆ ಕೈಗೊಂಡಿದ್ದು ಚಾಮರಾಜಪೇಟೆ ಸುತ್ತಮುತ್ತ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ.

ಈಗಾಗಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಬಕ್ರೀದ್ ಹಿನ್ನೆಲೆ ಕೆಲ ಕಡೆ ರಸ್ತೆ ಮಾರ್ಗ ಬದಲಿ, ನಿರ್ಬಂಧಗಳನ್ನು ವಿಧಿಸಿದ್ದಾರೆ ಮತ್ತು ಸಂಚಾರ ಸಲಹೆಯನ್ನು ನೀಡಿದ್ದಾರೆ. ಈದ್ ಪ್ರಾರ್ಥನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಸದ್ಯ ಮುಸ್ಲಿಮರು ನಮಾಜ್​ಗಾಗಿ ಈದ್ಗಾಗಳ ಬಳಿ ಸೇರುತ್ತಿದ್ದು ಕೆಲವೆಡೆ ಸಂಚಾರ ವ್ಯತ್ಯಯ ಕಂಡು ಬಂದಿದೆ.

ಇದನ್ನೂ ಓದಿ: ಬೆಂಗಳೂರು: ಜೂನ್​​ 20ರಿಂದ ಫ್ರೀಡಂಪಾರ್ಕ್​ ಪಾರ್ಕಿಂಗ್​ ಕಟ್ಟಡ ಆರಂಭ!

ಮೈಸೂರು ರಸ್ತೆಯ ಬಿ.ಬಿ ಜಂಕ್ಷನ್ ಹತ್ತಿರದ ಮಸೀದಿ ಮತ್ತು ಚಾಮರಾಜಪೇಟೆ 1ನೇ ಮುಖ್ಯ ರಸ್ತೆಯ 7ನೇ ಅಡ್ಡರಸ್ತೆ ಬಳಿಯ ಬಿಬಿಎಂಪಿ ಆಟದ ಮೈದಾನದಲ್ಲಿ ಬಕ್ರೀದ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಮುಸ್ಲಿಮರು ಸೇರಿರುವುದರಿಂದ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ನಗರದ ಚಾಮರಾಜಪೇಟೆ ಈದ್ಗ ಮೈದಾನದಲ್ಲಿ ನಡೆಯುತ್ತಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧಾವರು ಭಾಗಿಯಾಗಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಭಾಗಿಯಾಗಿದ್ದಾರೆ. ಹೀಗಾಗಿ ಚಾಮರಾಜಪೇಟೆ ರಸ್ತೆ ಸಂಪರ್ಕಿಸುವ ಕೆಆರ್ ಮಾರುಕಟ್ಟೆ ರಸ್ತೆ, ಚಾಮರಾಜಪೇಟೆ, ಬಸವನಗುಡಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:40 am, Mon, 17 June 24