ರೈಲ್ವೇ ಪ್ರಯಾಣಿಕರಿಗೆ ಗುಡ್​​ ನ್ಯೂಸ್​​: ಯಲಹಂಕ- ಅರಸೀಕೆರೆ ಮೆಮು ರೈಲು ಸೇವೆ ಆರಂಭ

ಯಲಹಂಕದಿಂದ ಅರಸೀಕೆರೆಗೆ, ತುಮಕೂರು ಮಾರ್ಗವಾಗಿ ಹೊಸ ಮೆಮು ರೈಲು ಸೇವೆ ಆರಂಭವಾಗಿದೆ. ಇದು ವಿದ್ಯಾರ್ಥಿಗಳು, ಉದ್ಯೋಗಿಗಳು, ರೈತರು ಮತ್ತು ವ್ಯಾಪಾರಿಗಳಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣ ಆಯ್ಕೆ ಒದಗಿಸಲಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಈ ರೈಲು ಸೇವೆ ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದು, ಭಾನುವಾರ ಹೊರತುಪಡಿಸಿ ವಾರದ ಆರು ದಿನ ಸಂಚಾರ ನಡೆಸಲಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ ಸಾರ್ವಜನಿಕರಿಂದ ಭಾನುವಾರಕ್ಕೂ ಸೇವೆ ವಿಸ್ತರಿಸುವಂತೆ ಬೇಡಿಕೆ ಬಂದಿದೆ.

ರೈಲ್ವೇ ಪ್ರಯಾಣಿಕರಿಗೆ ಗುಡ್​​ ನ್ಯೂಸ್​​: ಯಲಹಂಕ- ಅರಸೀಕೆರೆ ಮೆಮು ರೈಲು ಸೇವೆ ಆರಂಭ
ಸಾಂದರ್ಭಿಕ ಚಿತ್ರ

Updated on: Mar 27, 2026 | 8:23 PM

ಬೆಂಗಳೂರು, ಮಾರ್ಚ್​​ 27:  ತುಮಕೂರು ಮಾರ್ಗವಾಗಿ ಬೆಂಗಳೂರಿನಿಂದ ಅರಸೀಕೆರೆಗೆ ಮೆಮು ರೈಲು ಸೇವೆ ಆರಂಭವಾಗಿದ್ದು, ಯಲಹಂಕದಿಂದ ಯಶವಂತಪುರ ಮಾರ್ಗವಾಗಿ ಮೆಮು ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದ್ದು ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆಮು ರೈಲಿನ ಸೇವೆಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಕೂಡ ಎಕ್ಸ್​​ ಪೋಸ್ಟ್​​ ಮಾಡಿ ಮಾಹಿತಿ ನೀಡಿದ್ದಾರೆ.

ಸೋಮಣ್ಣ ಪೋಸ್ಟ್​​ನಲ್ಲಿ ಏನಿದೆ?

ಯಲಹಂಕದಿಂದ, ಯಶವಂತಪುರ ಮಾರ್ಗವಾಗಿ ಹೊರಡುವ ಈ ಮೆಮು ರೈಲು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೈತರು, ವ್ಯಾಪಾರಿಗಳು ಸೇರಿದಂತೆ ಮುಂತಾದ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ಒದಗಿಸಲಿದೆ. ಈ ಭಾಗದ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರುವುದುದಾಗಿ ಸೋಮಣ್ಣ ಮನವಿ ಮಾಡಿದ್ದಾರೆ.

ಇದನ್ನೂ ಓದಿ:  ಗೃಹ ಸಚಿವ ಪರಮೇಶ್ವರ​ ಒಡೆತನದ ಕಾಲೇಜು ಸೇರಿ, RTO ಕಚೇರಿಗಳಿಗೆ ಬಾಂಬ್​​ ಬೆದರಿಕೆ

ರೈಲಿನ ವೇಳಾಪಟ್ಟಿ

ಯಲಹಂಕ-ಅರಸೀಕೆರೆ ಮೆಮು ರೈಲು ಸಂಖ್ಯೆ 66505 ಬೆಳಿಗ್ಗೆ 6.45ಕ್ಕೆ ಯಲಹಂಕದಿಂದ ಹೊರಡಲಿದ್ದು, ಯಶವಂತಪುರ ಮಾರ್ಗವಾಗಿ ಬೆಳಿಗ್ಗೆ 8.58ಕ್ಕೆ ತುಮಕೂರಿಗೆ ತಲುಪಲಿದೆ. 11 ಗಂಟೆಗೆ ಅರಸೀಕರೆಗೆ ತೆರಳಲಿದೆ. ಅದೇ ರೀತಿ ಅರಸೀಕೆರೆಯಿಂದ ಯಲಹಂಕಕ್ಕೆ ಹೊರಡುವ ರೈಲು ಸಂಖ್ಯೆ 66506 ಅರಸೀಕೆರೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು ಸಂಜೆ 4.38ಕ್ಕೆ ತುಮಕೂರಿಗೆ, 7.15ಕ್ಕೆ ಯಲಹಂಕಕ್ಕೆ ತಲುಪಲಿದೆ. ಭಾನುವಾರದ ಹೊರತಾಗಿ ವಾರದ ಆರು ದಿನಗಳ ಕಾಲ ಈ ಮೆಮು ರೈಲು ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಸೋಮಣ್ಣ ಮಾಹಿತಿ ನೀಡಿದ್ದಾರೆ.

ಭಾನುವಾರವೂ ರೈಲು ಸಂಚಾರಕ್ಕೆ ಬೇಡಿಕೆ

ಮೆಮು ರೈಲು ಸೇವೆ ಆರಂಭದ ಬಗ್ಗೆ ಸೋಮಣ್ಣ ಅವರು ಹಾಕಿರುವ ಪೋಸ್ಟ್​​ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ಪೈಕಿ ಬಹುತೇಕರು ಭಾನುವಾರವೂ ಸೇರಿ ವಾರದ 7 ದಿನಗಳ ಕಾಲವೂ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ತಿಪಟೂರಿಂದ ಭಾನುವಾರಮಧ್ಯಾಹ್ನದ ಮೇಲೆ ಯಾವುದೇ ರೈಲು ಇರುವುದಿಲ್ಲ. ಹೀಗಾಗಿ ಅಂದೂ ಪ್ರಯಾಣಿಕರು ಜಾಸ್ತಿ ಇರುವುದಾಗಿ ಓರ್ವರು ಸಚಿವರ ಗಮನ ಸೆಳೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us