ಜಾತಿ ಸಮೀಕ್ಷೆ: ಮನೆಗೆ ಬಂದ ಗಣತಿದಾರರಿಗೆ ಕೇಂದ್ರ ಸಚಿವ ಸೋಮಣ್ಣ ಕ್ಲಾಸ್​

ಬೆಂಗಳೂರಿನ ವಿಜಯನಗರದಲ್ಲಿರುವ ತಮ್ಮ ಮನೆಗೆ ಜಾತಿ ಸಮೀಕ್ಷೆಗೆಂದು ಬಂದಿದ್ದ ಗಣತಿದಾರರಿಗೆ ಕೇಂದ್ರ ಸಚಿವ ಸೋಮಣ್ಣ ಕ್ಲಾಸ್​ ತೆಗೆದುಕೊಂಡ ಪ್ರಸಂಗ ನಡೆದಿದೆ. ಮನೆಗೆ 9 ಜನ ಸಿಬ್ಬಂದಿ ನೋಡಿ ಈ ವೇಳೆ ಇಷ್ಟು ಜನ ಯಾಕೆ ಬಂದಿದ್ದೀರಾ ಎಂದು ಪ್ರಶ್ನಿಸಿರುವ ಅವರು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಿಸುತ್ತೆ. ಹೀಗಿರುವಾಗ ಇಷ್ಟು ಪ್ರಶ್ನೆಗಳು ಬೇಕಾ? ಇದೆಲ್ಲಾ ನೀವು ಸರ್ಕಾರಕ್ಕೆ ತಿಳಿಸಬೇಕಲ್ವಾ? ಎಂದಿದ್ದಾರೆ.

ಜಾತಿ ಸಮೀಕ್ಷೆ: ಮನೆಗೆ ಬಂದ ಗಣತಿದಾರರಿಗೆ ಕೇಂದ್ರ ಸಚಿವ ಸೋಮಣ್ಣ ಕ್ಲಾಸ್​
ವಿ. ಸೋಮಣ್ಣ ಮನೆಯಲ್ಲಿ ಜಾತಿ ಗಣತಿ

Updated on: Oct 05, 2025 | 12:13 PM

ಬೆಂಗಳೂರು, ಅಕ್ಟೋಬರ್​ 05: ರಾಜ್ಯ ಸರ್ಕಾರದಿಂದ ನಡೆಸಲಾಗ್ತಿರುವ ಸಾಮಾಜಿಕ, ಆರ್ಥಿಕ & ಶೈಕ್ಷಣಿಕ ಸಮೀಕ್ಷೆ (Caste census) ಹಿನ್ನಲೆ ಮನೆಗೆ ಗಣತಿಗೆ ಬಂದವರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಕ್ಲಾಸ್​ ತೆಗೆದುಕೊಂಡ ಪ್ರಸಂಗ ನಡೆದಿದೆ. ಮನೆಗೆ ಬಂದವರನ್ನು ನೋಡಿ ಈ ವೇಳೆ ಇಷ್ಟು ಜನ ಯಾಕೆ ಬಂದಿದ್ದೀರಾ ಎಂದು ಸೋಮಣ್ಣ ಪ್ರಶ್ನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಿಸುತ್ತೆ. ಹೀಗಿರುವಾಗ ಇಷ್ಟು ಪ್ರಶ್ನೆಗಳು ಬೇಕಾ? ಇದೆಲ್ಲಾ ನೀವು ಸರ್ಕಾರಕ್ಕೆ ತಿಳಿಸಬೇಕಲ್ವಾ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.

ಬೆಂಗಳೂರಿನ ವಿಜಯನಗರದಲ್ಲಿರುವ ಕೇಂದ್ರ ಸಚಿವ ಸೋಮಣ್ಣ ಮನೆಗೆ 9 ಜನ ಸಿಬ್ಬಂದಿ ತೆರಳಿದ್ದ ವೇಳೆ ಈ ಪ್ರಸಂಗ ನಡೆದಿದೆ. ಉಪಜಾತಿ ಯಾವುದು ಅಂತಾ ಗಣತಿದಾರರು ಕೇಳಿದಾಗ ಅದೆಲ್ಲಾ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಅಂತಾ ಬರೆದುಕೊಳ್ಳಿ ಎಂದು ಸೋಮಣ್ಣ ತಿಳಿಸಿದ್ದಾರೆ. ಮದುವೆ ಆದಾಗ ನಿಮಗೆ ಎಷ್ಟು ವರ್ಷ ಅಂತಾ ಸಿಬ್ಬಂದಿ ಕೇಳಿದ್ದು, ಇದನ್ನ ನಮ್ಮ ಅಪ್ಪ-ಅಮ್ಮನ ಕೇಳಬೇಕು. 26 ಅಂತಾ ಬರೆದುಕೊಳ್ಳಿ ಎಂದಿದ್ದಾರೆ. ಇದು ವೋಟ್​ ಗಾಗಿ ಸಿದ್ದರಾಮಯ್ಯ ಮಾಡಿಸುತ್ತಿರುವ ಸಮೀಕ್ಷೆ ಎಂದಿರುವ ಕೇಂದ್ರ ಸಚಿವರು, ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಹೆಸರನ್ನೇ ಹಾಕೊಳ್ಳಿ ಎಂದಿದ್ದಾರೆ. ಉತ್ತರ ಕೊಡಲಾಗದ ಪ್ರಶ್ನೆಗಳನ್ನೆಲ್ಲಾ ನೀವು ಕೇಳುತ್ತಿದ್ದೀರಿ. ಸಿದ್ದರಾಮಯ್ಯ, ಡಿಕೆಶಿಯವರನ್ನ ಯಾವ ಗ್ರೂಪ್ ಹಾಕ್ತೀರಿ ಅಂತಾ
ಗಣತಿದಾರ ಸಿಬ್ಬಂದಿಗೆ ಸೋಮಣ್ಣ ಮರು ಪ್ರಶ್ನಿಸಿದ ಪ್ರಸಂಗವೂ ನಡೆದಿದೆ.

ಜಾತಿಗಣತಿಗೆ ವಿದ್ಯಾರ್ಥಿಗಳ ಬಳಕೆ?

ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿಗೆ ಕಾಲೇಜು ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಮೈಸೂರಿನ ದೇವರಾಜ ಅರಸು ರಸ್ತೆಯ ದೇವರಾಜ ಶಾಲೆಯ ಆಸುಪಾಸಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಮೀಕ್ಷೆ ನಡೆಸುತ್ತಿರುವುದನ್ನ ಸ್ಥಳೀಯರು ಪ್ರಶ್ನಿಸೋ ವಿಡಿಯೋ ವೈರಲ್​ ಆಗಿದೆ. ಜನರು ಕೇಳಿದ ಪ್ರಶ್ನೆಗೆ ಉತ್ತರ ಕೊಡದ ಹಿನ್ನಲೆ ಸಮೀಕ್ಷೆಗೆ ಕಳಿಸಿದ್ದ ಜಾತಿಗಣತಿಗೆ ನಿಯೋಜಿರುವ ಸಿಬ್ಬಂದಿಗೂ ಕರೆ ಮಾಡಿ ತರಾಟೆಗೆ ಪಡೆಯಲಾಗಿದೆ. ತ್ವರಿತವಾಗಿ ಸಮೀಕ್ಷೆ ಸಲುವಾಗಿ ವಿದ್ಯಾರ್ಥಿಗಳನ್ನು ಕಳಿಸಿದ್ದೇನೆಂದು ಗಣತಿಗೆ ನಿಯೋಜಿಸಿದ ಮಹಿಳಾ ಸಿಬ್ಬಂದಿ ಸಮಜಾಯಿಷಿ‌ ನೀಡಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.