- Kannada News Photo gallery Cricket photos Rishabh Pant Fined 12 Lakh for Slow Over-Rate After LSG's IPL 2026 Win; Playoffs Out
IPL 2026: ಲಕ್ನೋ ತಂಡದ ನಾಯಕ ರಿಷಭ್ ಪಂತ್ಗೆ ದಂಡದ ಬರೆ ಎಳೆದ ಬಿಸಿಸಿಐ
Rishabh Pant fine IPL 2026: ಐಪಿಎಲ್ 2026 ರ 59 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಈ ಗೆಲುವು ಲಕ್ನೋ ತಂಡಕ್ಕೆ ಪ್ಲೇಆಫ್ ಲಾಭ ತರದಿದ್ದರೂ, ನಾಯಕ ರಿಷಭ್ ಪಂತ್ಗೆ ನಿಧಾನಗತಿಯ ಓವರ್ ಕಾರಣಕ್ಕಾಗಿ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. ಈ ಆವೃತ್ತಿಯಲ್ಲಿ ನಿಧಾನಗತಿ ಓವರ್ಗಾಗಿ ದಂಡಕ್ಕೊಳಗಾದ ಹಲವು ನಾಯಕರಲ್ಲಿ ಪಂತ್ ಕೂಡ ಸೇರಿದ್ದಾರೆ.
Updated on:May 16, 2026 | 4:23 PM

ಐಪಿಎಲ್ 2026 ರ 59 ನೇ ಪಂದ್ಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಈ ಆವೃತ್ತಿಯ 4ನೇ ಗೆಲುವು ದಾಖಲಿಸಿತು. ಆದಾಗ್ಯೂ ಈ ಗೆಲುವು ಲಕ್ನೋ ತಂಡಕ್ಕೆ ಯಾವುದೇ ಲಾಭ ತರಲಿಲ್ಲ. ಏಕೆಂದರೆ ಲಕ್ನೋ ತಂಡ ಈಗಾಗಲೇ ಪ್ಲೇಆಫ್ ರೇಸನ್ನಿಂದ ಹೊರಬಿದ್ದಿದೆ. ಆದರೆ ಈ ಗೆಲುವಿನ ನಡುವೆಯೇ ಲಕ್ನೋ ನಾಯಕ ರಿಷಭ್ ಪಂತ್ಗೆ ಬಿಸಿಸಿಐ ದಂಡದ ಬರೆ ಎಳೆದಿದೆ.

ಸಿಎಸ್ಕೆ ವಿರುದ್ಧದ ಈ ಪಂದ್ಯದಲ್ಲಿ ನಿಗಧಿತ ಸಮಯಕ್ಕೆ ಓವರ್ ಮುಗಿಸದ ಲಕ್ನೋ ತಂಡದ ನಾಯಕ ರಿಷಭ್ ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ಅಂದರೆ ಪಂತ್ 12 ಲಕ್ಷ ರೂ ದಂಡ ಕಟ್ಟಬೇಕಾಗಿದೆ. ಆದಾಗ್ಯೂ, ಐಪಿಎಲ್ 2026 ರಲ್ಲಿ ಪಂತ್ಗೂ ಮೊದಲು ಹಲವು ತಂಡಗಳ ನಾಯಕರು ಈ ತಪ್ಪಿಗೆ ದಂಡ ತೆತ್ತಿದ್ದಾರೆ. ಅದರಲ್ಲೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಈಗಾಗಲೇ ಎರಡು ಬಾರಿ ನಿಧಾನಗತಿಯ ಓವರ್ ದರ ಉಲ್ಲಂಘನೆಗಾಗಿ ದಂಡ ಕಟ್ಟಿದ್ದಾರೆ.

ಪಂತ್ ಮೊದಲ ಬಾರಿಗೆ ಈ ಶಿಕ್ಷೆಗೆ ಗುರಿಯಾಗಿರುವುದರಿಂದ ಅವರಿಗೆ 12 ಲಕ್ಷ ರೂಪಾಯಿಗಳನ್ನು ದಂಡವಾಗಿ ವಿಧಿಸಲಾಗಿದೆ. ನಿಧಾನಗತಿಯ ಓವರ್ ದರ ಉಲ್ಲಂಘನೆಯು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಉಲ್ಲಂಘನೆಯಾಗಿದೆ, ಇದಕ್ಕಾಗಿ ಕನಿಷ್ಠ ದಂಡ 12 ಲಕ್ಷ ರೂಪಾಯಿಗಳಾಗಿದೆ. ಇನ್ನು ಈ ಶಿಕ್ಷೆಗೆ ಗುರಿಯಾದವರಲ್ಲಿ ಪಂತ್ಗೂ ಮೊದಲು ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ರುತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್ ಮತ್ತು ಪ್ಯಾಟ್ ಕಮ್ಮಿನ್ಸ್ ಕೂಡ ಸೇರಿದ್ದಾರೆ.

ಮೇಲೆ ಹೇಳಿದಂತೆ ಲಕ್ನೋ ತಂಡ ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಅಂದರೆ ಲಕ್ನೋ ತಂಡ ಲೀಗ್ ಹಂತದಲ್ಲೇ ತನ್ನ ಪ್ರಯಾಣವನ್ನು ಮುಗಿಸಲಿದೆ. ಆದಾಗ್ಯೂ ಲಕ್ನೋ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಇಂತಹ ತಪ್ಪನ್ನು ಪುನರಾವರ್ತಿಸಿದರೆ, ನಾಯಕ ಪಂತ್ಗೆ 24 ಲಕ್ಷ ರೂ. ದಂಡ ವಿಧಿಸಲಾಗುವುದು. ಪಂತ್ ಜೊತೆಗೆ ತಂಡದ ಉಳಿದ ಆಟಗಾರರಿಗೂ ಪಂದ್ಯ ಶುಲ್ಕ ಕಡಿತಗೊಳಿಸಲಾಗುವುದು.

ಈ ಆವೃತ್ತಿಯಲ್ಲಿ ಲಕ್ನೋ ತಂಡ ಇಲ್ಲಿಯವರೆಗೆ 12 ಪಂದ್ಯಗಳನ್ನು ಆಡಿದ್ದು, ಕೇವಲ ನಾಲ್ಕರಲ್ಲಿ ಗೆದ್ದು ಎಂಟರಲ್ಲಿ ಸೋತಿದೆ. ಹೀಗಾಗಿ ಎಂಟು ಅಂಕಗಳೊಂದಗೆ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂತ್ ನಾಯಕತ್ವದಲ್ಲಿ ಲಕ್ನೋ ತಂಡಕ್ಕೆ ಇದು ಸತತ ಎರಡನೇ ಸೀಸನ್, ಆದರೆ ಅವರು ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಪಂತ್ ಅವರ ಸ್ವಂತ ಪ್ರದರ್ಶನವು ಪ್ರಶ್ನಾರ್ಹವಾಗಿದೆ.
Published On - 4:23 pm, Sat, 16 May 26

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More
