AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂ ಕೈಲಾಸ! ಕೋಟಿಲಿಂಗೇಶ್ವರ ಸುಕ್ಷೇತ್ರದಲ್ಲಿ ಶಿವಲಿಂಗಗಳು ತಾಂಡವ! ಒಂದು ಪ್ರದಕ್ಷಿಣೆ ಹಾಕೋಣ ಬನ್ನಿ

ಹೂವಿನ ತೋಟದಲ್ಲಿನ ಹೂವುಗಳಂತೆ ಕೋಟಿಲಿಂಗೇಶ್ವರ ಸುಕ್ಷೇತ್ರ ಭಾಸವಾಗುತ್ತದೆ. ಅಷ್ಟಕ್ಕೂ ಆ ಕೋಟಿಲಿಂಗೇಶ್ವರದ ಇತಿಹಾಸವೇನು? ಅಲ್ಲಿ ನಿಜಕ್ಕೂ ಕೋಟಿ ಶಿವಲಿಂಗಗಳು ಇವೆಯಾ? ಏನದರ ವಿಶೇಷ? ಹೀಗೆ ನಿಮ್ಮ ಮನಸ್ಸಿನಲ್ಲಿ ಮೂಡುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​|

Updated on:Jan 23, 2024 | 6:11 PM

Share

ಅದು ವಿಶ್ವದ ಏಕೈಕ ಸ್ಥಳ, ಏಕ ಕಾಲದಲ್ಲಿ ಕೋಟಿ ಶಿವಲಿಂಗಗಳ ದರ್ಶನ ನೀಡುವ ಸ್ಥಳವದು, ಆ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿದ ಎಲ್ಲರಿಗೂ ಕೂಡಾ ಅದೊಂದು ಭೂಕೈಲಾಸವೇ ಧರೆಗಿಳಿದು ಬಂದಂತ ಅನುಭವ ಆಗುತ್ತದೆ ಅಂಥಾದೊಂದು ಅದ್ಬುತ ಕ್ಷೇತ್ರವಿರೋದು ಕೋಲಾರ ಜಿಲ್ಲೆ ಕೆಜಿಎಫ್​ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದಲ್ಲಿ. ಏನು ಅಲ್ಲಿನ ವಿಶೇಷಗಳು ಇಲ್ಲಿದೆ ಡೀಟೇಲ್ಸ್​.

ಎಲ್ಲಿ ನೋಡಿದ್ರು, ಎಷ್ಟು ನೋಡಿದರೂ ನೋಡಿದ ಕಡೆಯೆಲ್ಲಾ ಬರೀ ಶಿವಲಿಂಗಗಳೇ ಕಣ್ಣಿಗೆ ನಾಟುತ್ತವೆ. ಸಣ್ಣ ಶಿವಲಿಂಗದಿಂದ ಹಿಡಿದು 108 ಅಡಿಯ ಅತಿದೊಡ್ಡ ಶಿವಲಿಂಗದವರೆಗೂ ಹಲವು ಬಗೆಯ ಶಿವಲಿಂಗಗಳು ನಮಗೆ ಒಂದೇ ಸ್ಥಳದಲ್ಲಿ ಕಾಣ ಸಿಗುತ್ತವೆ. ನೀವು ಆ ಶಿವಲಿಂಗವನ್ನು ಎಣಿಸುತ್ತೇವೆಂದರೂ ಅದು ಸಾಧ್ಯವಾಗದ ಮಾತು ಎನ್ನುವಂತೆ ತಾಂಡವವವಾಡುತ್ತಿವೆ.

ಕೋಟಿಲಿಂಗೇಶ್ವರ ಅನ್ನೋ ಕ್ಷೇತ್ರವನ್ನು ಮೊದಲು ಮಾಡಬೇಕು ಎಂದು ಪ್ರೇರಣೆಯಾಗಿದ್ದು 1980 ರಲ್ಲಿ. ಸಾಂಭಶಿವಮೂರ್ತಿ ಅನ್ನೋರಿಗೆ ಮೊದಲು ಕೋಟಿಲಿಂಗೇಶ್ವರ ಕ್ಷೇತ್ರವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಪ್ರೇರೇಪಣೆಯಾಗುತ್ತದೆ. ಅದರ ಫಲವಾಗಿ ಮೊದಲು ಸಾಂಭ ಶಿವಮೂರ್ತಿ ಹಾಗೂ ಅವರ ಪತ್ನಿ ರುಕ್ಮಿಣಿ ಅನ್ನೋರು ಮೊದಲು ಈ ಸ್ಥಳದಲ್ಲಿ 5 ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ನಂತರ 101 ಶಿವಲಿಂಗ ಮತ್ತು ನಂತರ 1001 ಶಿವಲಿಂಗ, ಕಾಲಾಂತರದಲ್ಲಿ ಒಂದು ಲಕ್ಷ, ಹತ್ತು ಲಕ್ಷ, ಹೀಗೆ ಅಲ್ಲಿ ಲಕ್ಷಾಂತರ ಶಿವ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಸದ್ಯ ಇಲ್ಲಿಯವರೆಗೆ 90 ಲಕ್ಷದಷ್ಟು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಇಂದಿಗೂ ಕೂಡಾ ಅಲ್ಲಿ ಪ್ರತಿನಿತ್ಯವೂ ಕೂಡಾ ಶಿವಲಿಂಗಗಳ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಲೇ ಇದೆ. 1994 ರಲ್ಲಿ ಇದೇ ಸ್ಥಳದಲ್ಲಿ 108 ಅಡಿಯ ಬೃಹತ್​ ಶಿವಲಿಂಗ ಹಾಗೂ ನಂದಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಈ ಸಂಪೂರ್ಣ ದೇವಾಲಯ ಸಂಕೀರ್ಣದಲ್ಲಿ ಕೋಟಿಲಿಂಗೇಶ್ವರವನ್ನು ಹೊರತುಪಡಿಸಿ 12ಕ್ಕೂ ಹೆಚ್ಚು ದೇವಾಲಯಗಳಿವೆ. ಮುಖ್ಯವಾಗಿ ಬ್ರಹ್ಮ, ವಿಷ್ಣು, ಕೋಟಿಲಿಂಗೇಶ್ವರ, ಅನ್ನಪೂರ್ಣೇಶ್ವರಿ ದೇವಿ, ವೆಂಕಟರಮಣಸ್ವಾಮಿ, ಪಾಂಡುರಂಗ ಸ್ವಾಮಿ, ಪಂಚಮುಖ ಗಣಪತಿ, ರಾಮ-ಲಕ್ಷ್ಮಣ-ಸೀತಾ, ಶನಿಸಿಂಗಾಪುರ ಶನಿಮಹಾತ್ಮ, ಸೇರಿದಂತೆ ಹಲವು ದೇವಾಲಯಗಳನ್ನು ಒಳಗೊಂಡಿದೆ.

ಅಷ್ಟಕ್ಕೂ ಯಾರಿದು ಸಾಂಭ ಶಿವಮೂರ್ತಿ ಅನ್ನೋದನ್ನ ನೋಡೋದಾದ್ರೆ 1947 ಆಗಸ್ಟ್ 23 ರಂದು ಬಂಗಾರಪೇಟೆ ತಾಲ್ಲೂಕು ಕಮ್ಮಸಂದ್ರ ಗ್ರಾಮದಲ್ಲಿ ಜನಿಸಿದ ಇವರ ಮೂಲ ಹೆಸರು ಗೋಪಾಲಪ್ಪ. ಬೆಮೆಲ್​ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು 1979 ರಲ್ಲಿ ಆಧ್ಯಾತ್ಮಿಕ ಸೆಳೆತದಿಂದ ಕೋಟಿಶಿವಲಿಂಗಗಳ ಸ್ಥಾಪನೆಗೆ ಮುಂದಾಗಿ ಸಾಂಭಶಿವಮೂರ್ತಿ ಸ್ವಾಮೀಜಿಯಾಗಿ ಎಲ್ಲವನ್ನೂ ತೊರೆದು ಈ ಕ್ಷೇತ್ರದ ನಿರ್ಮಾಣಕ್ಕೆ ಮುಂದಾದರು.

ಅಂದಿನಿಂದ ತಮ್ಮದೇ ಭೂಮಿಯಲ್ಲಿ ಕೋಟಿಶಿವಲಿಂಗಗಳ ಸ್ಥಾಪನೆಗೆ ಚಾಲನೆ ನೀಡಿದ್ರು. ಕಳೆದ 40 ವರ್ಷಗಳಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚು ಶಿವ ಲಿಂಗಗಳ ಸ್ಥಾಪನೆ ಮಾಡಿ ವಿಶ್ವಪ್ರಸಿದ್ದ ಕೋಟಿಶಿವಲಿಂಗ ಕ್ಷೇತ್ರವಾಗಿ ನಿರ್ಮಾಣ ಮಾಡಿದ್ದ ಸ್ವಾಮಿಗಳು, ವಿಶ್ವದಲ್ಲೇ ಅತಿ ಎತ್ತರದ 108 ಅಡಿಲಿಂಗ ಸ್ಥಾಪನೆ ಮಾಡಿದ ಕೀರ್ತಿ ಇವರಿಗಿದೆ.

ಈ ಕ್ಷೇತ್ರ ಪ್ರತಿನಿತ್ಯ ಸಾವಿರಾರು ಭಕ್ತರ ಆಧ್ಯಾತ್ಮ ಕೇಂದ್ರವಾಗಿ ಸಾವಿರಾರು ಭಕ್ತರನ್ನು ಸೆಳೆಯುವಂತೆ ಮಾಡಿದ ಕೀರ್ತಿ ಸ್ವಾಮೀಜಿಯವರಿಗಿದೆ. ಈ ಸ್ಥಳದಲ್ಲಿ ಮಾಜಿ ಪ್ರಧಾನಿಗಳಾದ ರಾಜೀವಗಾಂಧಿ, ಹೆಚ್​.ಡಿ.ದೇವೇಗೌಡ, ತೆಲುಗು ನಟ ಚಿರಂಜೀವಿ, ಡಾ.ರಾಜ್​ ಕುಮಾರ್​, ಎನ್.​ಟಿ.ರಾಮರಾವ್​, ಧರ್ಮಸಿಂಗ್​, ಎಸ್​.ಎಂ.ಕೃಷ್ಣ, ಕೆ.ಹೆಚ್.​ ಮುನಿಯಪ್ಪ, ಶ್ರೀರಾಮುಲು ಸೇರಿದಂತೆ ರಾಜ್ಯ ಹಾಗೂ ದೇಶದ ವಿವಿದ ಗಣ್ಯರು ಈ ಸ್ಥಳಕ್ಕೆ ಬಂದು ತಮ್ಮ ಹೆಸರಲ್ಲಿ ಒಂದೊಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. 2018 ರಲ್ಲಿ ಸಾಂಭಶಿವಮೂರ್ತಿ ಸ್ವಾಮಿಗಳು ನಿಧರಾದ ಮೇಲೆ ಸದ್ಯ ಅವರ ಪುತ್ರ ಶಿವಪ್ರಸಾದ್ ಹಾಗೂ ಕಾರ್ಯದರ್ಶಿ ಕುಮಾರಿ ಅವರು ಕ್ಷೇತ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಕೋಟಲಿಂಗೇಶ್ವರ ಕ್ಷೇತ್ರಕ್ಕೆ ಪ್ರತಿನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ, ಕರ್ನಾಟಕ ಮಾತ್ರವಲ್ಲದೆ, ಆಂದ್ರ, ತಮಿಳುನಾಡು, ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಇಲ್ಲಿ ಮಹಾಶಿವರಾತ್ರಿಯಂದು, ಹೊಸ ವರ್ಷದ ಮೊದಲ ದಿನದಂದು, ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ರಥೋತ್ಸವಗಳು ನಡೆಯುತ್ತದೆ. ಹಾಗೂ ಯುಗಾದಿ, ಸಂಕ್ರಾಂತಿ ಹಬ್ಬಗಳಲ್ಲಿ, ನವರಾತ್ರಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಈ ದಿನಗಳಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟಾಗಿರುತ್ತದೆ. ಈ ವಿಶೇಷ ದಿನದಂದು ಇಚ್ಚೆಯುಳ್ಳವರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ, ಇಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡುತ್ತಾರೆ. ಈ ಸ್ಥಳದಲ್ಲಿ ಶ್ರೀಮಂಜುನಾಥ, ಅನ್ನಪೂರ್ಣೇಶ್ವರಿ ಸೇರಿದಂತೆ ಹಲವು ಭಕ್ತ ಪ್ರಧಾನ ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ಇನ್ನು ಈ ಕೋಟಿಲಿಂಗೇಶ್ವರ ಕ್ಷೇತ್ರ ಕೋಲಾರ ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರ ಹಾಗೂ ರಾಜಧಾನಿ ಬೆಂಗಳೂರಿನಿಂದ 95 ಕಿ.ಮೀ ದೂರವಿದೆ.

Published On - 4:46 pm, Tue, 23 January 24