AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಡಂಬಿ ಬೆಳೆ ಈಗ ಬಿಸಿಲುನಾಡು ಬೀದರ್ ಜಿಲ್ಲೆಗೂ ಕಾಲಿಟ್ಟಿದೆ! ರೈತರ ಪಾಲಿಗೆ ಹಣ ನೀಡುವ ATM ಯಂತ್ರವಾಗುವ ಲಕ್ಷಣಗಳಿವೆ

Cashew crop in Bidar: ಮಲೆನಾಡಿಗಷ್ಟೇ ಸೀಮತವಾಗಿದ್ದ ಗೋಡಂಬಿ ಬೆಳೆ ಬೀದರ್ ಜಿಲ್ಲೆಗೂ ಕಾಲಿಟ್ಟು ರೈತರ ಪಾಲಿಗೆ ಹಣ ನೀಡೋ ಯಂತ್ರವಾಗಿ ಪರಿಣಮಿಸಿದೆ. ಜೌಗು ಮಿಶ್ರಿತ ಕೆಂಪು ಭೂ ಪ್ರದೇಶ ಹೊಂದಿರುವ ಬೀದರ್ ರೈತರು ಗೋಡಂಬಿ ಬೆಳೆಯಿಂದ ನಿರೀಕ್ಷೆಗೂ ಮೀರಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಗೋಡಂಬಿ ಬೆಳೆ ಈಗ ಬಿಸಿಲುನಾಡು ಬೀದರ್ ಜಿಲ್ಲೆಗೂ ಕಾಲಿಟ್ಟಿದೆ! ರೈತರ ಪಾಲಿಗೆ ಹಣ ನೀಡುವ ATM ಯಂತ್ರವಾಗುವ ಲಕ್ಷಣಗಳಿವೆ
ಬಿಸಿಲುನಾಡು ಬೀದರ್ ಜಿಲ್ಲೆಗೂ ಕಾಲಿಟ್ಟಿದೆ ಗೋಡಂಬಿ ಬೆಳೆ!
TV9 Web
| Updated By: ಸಾಧು ಶ್ರೀನಾಥ್​|

Updated on:Apr 04, 2023 | 2:04 PM

Share

ಕೇವಲ ಮಲೆನಾಡಿಗಷ್ಟೇ ಸೀಮಿತವಾಗಿದ್ದ ಗೋಡಂಬಿ ಬೆಳೆ (Cashew crop) ಈಗ ಬಿಸಿಲ ನಗರಿ, ಗಡಿ ಜಿಲ್ಲೆ ಬೀದರ್ (Bidar)ಗೂ ಕಾಲಿಟ್ಟಿದೆ. ಅತೀವೃಷ್ಟಿ ಹಾಗೂ ಅನಾವೃಷ್ಠಿಗೆ ತುತ್ತಾಗಿದ್ದ ಜಿಲ್ಲೆಯ ಜನರಿಗೆ ಗೋಡಂಬಿ ಬೆಳೆ ಕೈ ಹಿಡಿದಿದೆ. ಬಡವರ ಬೆಳೆ ಶ್ರೀಮಂತರ ಆಹಾರ ಎಂದೇ ಕರೆಯಿಸಿಕೊಳ್ಳುವ ಗೋಡಂಬಿಯನ್ನು ಬೆಳೆದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದ್ದು ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಬೀದರ್ ಜಿಲ್ಲೆಗೂ ಕಾಲಿಟ್ಟಿರುವ ಮಲೆನಾಡಿನ ಗೋಡಂಬಿ (Cashew) ಬೆಳೆಯಿಂದಾಗಿ ಜಿಲ್ಲೆ ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ. ಹೌದು ಬಯಲು ಸೀಮೆಯ ಬರಡು ಭೂಮಿಯಲ್ಲಿ ಗೋಡಂಬಿಯ ಬಂಪರ್ ಬೆಳೆಯನ್ನ ಬೆಳೆಯುವುದರ ಮೂಲಕ ಬೀದರ್ ಜಿಲ್ಲೆಯ ರೈತರು (Farmers) ಸೈ ಎನಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸರಿ ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ಗೇರು ಗಿಡ ನೆಟ್ಟ ರೈತರು ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಕೇವಲ ಮಲೆನಾಡಿಗಷ್ಟೇ ಸೀಮತವಾಗಿದ್ದ ಗೋಡಂಬಿ ಬೆಳೆ ಬೀದರ್ ಜಿಲ್ಲೆಗೂ ಕಾಲಿಟ್ಟು ರೈತರ ಪಾಲಿಗೆ ಹಣ ನೀಡೋ ಯಂತ್ರವಾಗಿ ಪರಿಣಮಿಸಿದೆ. ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಂತೆ ಶೂನ್ಯ ಬಂಡವಾಳದೊಂದಿಗೆ ಬೆಳೆದ ಗೋಡಂಬಿ ಬೆಳೆಯಿಂದ ರೈತರು ಸಾಂಪ್ರದಾಯಿಕ ಬೆಳೆಗಳಿಂದಷ್ಟೇ ಆದಾಯ ಪಡೆಯುತ್ತಿದ್ದರು. ಆದರೆ, ಇದೀಗ ಜೌಗು ಮಿಶ್ರಿತ ಕೆಂಪು ಭೂ ಪ್ರದೇಶವನ್ನು ಹೊಂದಿರುವ ಬೀದರ್ ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಗೋಡಂಬಿ ಮರಗಳು ನಿರೀಕ್ಷೆಗೂ ಮೀರಿ ಆದಾಯವನ್ನು ತಂಡುಕೊಡಲು ತೊನೆದಾಡುತ್ತಿದೆ.

ಯಾವುದೇ ರಾಸಾಯನಿಕ ಬಳಸದೆ ಸಾವಯವ ಕೃಷಿ ಪದ್ಧತಿಯಲ್ಲಿ ಜಮೀನಿನ ಬದುವಿನಲ್ಲಿ ಹಾಕಲಾದ ಗೋಡಂಬಿ ಬೀಜಗಳು ನೈಸರ್ಗಿಕ ಕೃಷಿ ಪದ್ಧತಿಯಿಂದಾಗಿ ಹುಲುಸಾಗಿ ಬೆಳೆದು ನಿಂತಿದೆ. ಇನ್ನು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಳಚಾಪುರ ಗ್ರಾಮದ ರೈತ ವಿದ್ಯಾಸಾಗರ್ ಪಾಟೀಲ್ ಅವರು ಕೂಡಾ ತಮ್ಮ ಹೊಲದಲ್ಲಿ ಸುಮಾರು ಮೂರು ಎಕರೆಯಷ್ಟು ಪ್ರದೇಶದಲ್ಲಿ ಗೋಡಂಬಿ ಬೆಳೆಸಿದ್ದಾರೆ. ಮೂರು ಎಕರೆಯಷ್ಟು ಜಮೀನಿನಲ್ಲಿ ಬೆಳೆಸಿದ ಗೋಡಂಬಿ ಚೆನ್ನಾಗಿ ಬಂದಿದ್ದು ಸುಮಾರು 20 ಕ್ವಿಂಟಾಲ್ ವರೆಗೆ ಬೀಜಗಳು ಬರಬಹುದೆಂದು ಅಂದಾಜು ಮಾಡಿದ್ದು, ಎರಡು ಲಕ್ಷವರೆಗೂ ಅದಾಯ ಗಳಿಸುವ ನಿರೀಕ್ಷೆಯನ್ನ ಈ ರೈತ ಹೊಂದಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ಭಾಲ್ಕಿ ಹಾಗೂ ಬೀದರ್ ತಾಲೂಕಿನಲ್ಲಿ ಗೇರು ಗಿಡಗಳನ್ನ ನೆಟ್ಟಿದ್ದು ಭಾಲ್ಕಿ ತಾಲೂಕಿನ ಮಳಚಾಪುರ (Malchapur) ಗ್ರಾಮ ಒಂದರಲ್ಲಿಯೇ 50 ಹೆಕ್ಟೇರ್ ಗೂ ಅಧಿಕ ಗೇರು ಗಿಡಗಳನ್ನ ನೆಟ್ಟಿದ್ದು ಅದರಿಂದಾಗಿ ಲಾಭ ಪಡೆಯುತ್ತಿದ್ದಾರೆ. ಬೀದರ್ ಜಿಲ್ಲೆಯ ಹವಾಮಾನಕ್ಕೆ ಗೇರು ಗಿಡಗಳನ್ನ ನೆಟ್ಟರೆ ಉತ್ತಮ ಇಳುವರಿಯನ್ನ ಕೊಡುತ್ತದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಸಮಯೋಚಿತ ಸಲಹೆಯನ್ನ ನೀಡಿದ್ದರು. ಇದನ್ನರಿತ ರೈತರು ಸಾಲಸೋಲ ಮಾಡಿ ಗೇರು ಗಿಡಗಳನ್ನ ನೆಟ್ಟಿದ್ದಾರೆ.

ಇದರಿಂದ ಈ ಗೋಡಂಬಿ ಬೆಳೆಗಾರರು ಇತರೆ ತೋಟಗಾರಿಕೆ ಬೆಳೆಗಾರರಿಗೆ ಮಾದರಿಯಾಗಿ ನಿಂತಿದ್ದಾರೆ. ಸರ್ಕಾರದ ಯಾವುದೇ ಪ್ರೋತ್ಸಾಹ ಧನ, ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನಿನಲ್ಲಿ ಪ್ರಾಯೋಗಿಕವಾಗಿ ಜಿಲ್ಲೆಯ ನೂರಾರು ರೈತರು ಗೋಡಂಬಿ ಗಿಡ ನೆಟ್ಟು ಈಗ ಕೈತುಂಬ ಹಣ ಪಡೆಯುತ್ತಿದ್ದಾರೆ.

ಕೆಲವು ರೈತರು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶವನ್ನ ಪಡೆಯದೇ ಗೋಡಂಬಿ ಬೀಜವನ್ನು ಉತ್ತರ ಕನ್ನಡ ಜಿಲ್ಲೆಯಿಂದ ತಂದು ತಮ್ಮ ಬರಡು ಭೂಮಿಯಲ್ಲಿ ನೆಟ್ಟು ಇದೀಗ ಪ್ರತಿ ವರ್ಷ ಸಾಂಪ್ರದಾಯಿಕ ವಾರ್ಷಿಕ ಬೆಳೆ ನೀಡುವ ಆದಾಯಕ್ಕಿಂತ ಹೆಚ್ಚು ಆದಾಯ ಈ ಗೋಡಂಬಿಯಿಂದ ಪಡೆಯುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಗೋಡಂಬಿ ಬೆಳೆ ಬೆಳೆಯಲು ಸೂಕ್ತವಾದ ವಾತಾವರಣ ಅದಕ್ಕೆ ಬೇಕಾದ ಕೆಂಪು ಮಿಶ್ರಿತ ಮಣ್ಣು ಇಲ್ಲಿ ಇರುವುದರಿಂದ ರೈತರು ಗೋಡಂಬಿ ಬೆಳೆದು ಬದುಕು ಹಸನಾಗಿಸಿಕೊಳ್ಳಬಹುದೆಂದು ತೋಟಗಾರಿಗೆ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೇ ನೀಡುತ್ತಿದ್ದಾರೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಲಾಗಿ ಪ್ರಸಕ್ತ ವರ್ಷ ಮರಗಳು ಮೈತುಂಬ ಹೂಗಳನ್ನು ಧರಿಸಿ ಕಂಗೊಳಿಸುತ್ತಿವೆ. ಹೀಗಾಗಿ ಈ ವರ್ಷವೂ ಗೋಡಂಬಿ ಎಕರೆಗೆ 10-12 ಕ್ವಿಂಟಾಲ್ ಇಳುವರಿ ನೀಡುವ ನಿರೀಕ್ಷೆ ಇದೆ. ಇನ್ನು ಇವರು ಬೆಳೆದಿರುವ ಗೇರು ಬೀಜವನ್ನ ಗ್ರಾಮಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಿರುವುದರಿಂದ ಮಾರುಕಟ್ಟೆಯ ಸಮಸ್ಯೆ ಕೂಡಾ ಇವರಿಗಿಲ್ಲವಾಗಿದೆ. ಹೀಗಾಗಿ ಗೇರು ಬೀಜದಿಂದ ನಿರ್ದಿಷ್ಟವಾಗಿ ಲಾಭ ಪಡೆಯುತ್ತಿದ್ದಾರೆ.

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್

Published On - 2:03 pm, Tue, 4 April 23