ಕಾವೇರಿ ವಿಚಾರದಲ್ಲಿ ನಾನು ಯಾವುದೇ ಸಲಹೆ ಕೊಡಲ್ಲ: ಹೆಚ್​​ಡಿ ದೇವೇಗೌಡ 

ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಕಾವೇರಿ ನದಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದೇನೆ. ಕಾವೇರಿ ವಿಚಾರದಲ್ಲಿ ನಾನು ಯಾವುದೇ ಸಲಹೆ ಕೊಡಲ್ಲ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಹೇಳಿದರು.

ಕಾವೇರಿ ವಿಚಾರದಲ್ಲಿ ನಾನು ಯಾವುದೇ ಸಲಹೆ ಕೊಡಲ್ಲ: ಹೆಚ್​​ಡಿ ದೇವೇಗೌಡ 
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
Edited By: ವಿವೇಕ ಬಿರಾದಾರ

Updated on: Sep 22, 2023 | 11:01 AM

ನವದೆಹಲಿ ಸೆ.22: ರಾಜ್ಯ ರಾಜಕಾರಣದಲ್ಲಿ ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಸಂಬಂಧ ದಳಪತಿಗಳು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿಯಾಗಲಿದ್ದಾರೆ. ಅಧಿವೇಶನ ನಿಮಿತ್ತ ಈಗಾಗಲೆ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ (HD Devegowda) ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೈತ್ರಿ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಈ ಹಿಂದೆಯೇ ಹೇಳಿದ್ದೇನೆ. ಮೈತ್ರಿ ವಿಚಾರದ ಬಗ್ಗೆ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ (HD Kumarswamy) ಮಾತನಾಡುತ್ತಾರೆ ಎಂದು ಹೇಳಿದರು.

ದೆಹಲಿಯ ಸಫ್ದರ್​ಜಂಗ್ ಲೇನ್​ನಲ್ಲಿರುವ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಕಾವೇರಿ ನದಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದೇನೆ. ಕಾವೇರಿ ವಿಚಾರದಲ್ಲಿ ನಾನು ಯಾವುದೇ ಸಲಹೆ ಕೊಡಲ್ಲ. ಸುಪ್ರೀಂಕೋರ್ಟ್​ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಈಗ ನಾನು ಏನೂ ಮಾತಾಡಲ್ಲ. ನೀರು ಬಿಟ್ಟಿದ್ದು ತಪ್ಪು ಅಂತಾ ಪಕ್ಷದ ಪರ ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ತಮಿಳುನಾಡಿಗೆ ಹರಿದ ಕಾವೇರಿ: ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ದುರಂತ ಎಂದ ಹೆಚ್​ಡಿ ದೇವೇಗೌಡ

ಮಹಿಳಾ ಮೀಸಲಾತಿ ಹಾಗೂ ಕಾವೇರಿ ವಿಚಾರವಾಗಿ ಕಲಾಪದಲ್ಲಿ ಮಾತನಾಡಿದ್ದೇನೆ. 1996 ರಲ್ಲಿ ನಾನೇ ಮಹಿಳಾ ಮೀಸಲಾತಿ ಬಿಲ್ ಪ್ರಸ್ತಾಪ ತಂದಿದ್ದೆ. ಕಾವೇರಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಎಂಎಲ್​ಸಿ ಒಬ್ಬರನ್ನು ನನ್ನ ಬಳಿ ಕಳಿಸಿದ್ದರು. ನನ್ನ ಸಹಕಾರ ಇದೆ ಎಂದು ಹೇಳಿದ್ದೆ. ನಾನು ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲು ಆಗಿಲ್ಲ. ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು ಎಂದು ತಿಳಿಸಿದರು.

ಕಾವೇರಿ ವಿಚಾರವಾಗಿ ವಸ್ತುಸ್ಥಿತಿ ಅರಿಯಲು ಬೇರೆ ರಾಜ್ಯದ ಅಧಿಕಾರಗಳನ್ನು ಕಳಿಸುವಂತೆ ರಾಜ್ಯಸಭೆಯಲ್ಲೇ ಸಲಹೆ ನೀಡಿದ್ದೇನೆ. ರಾಜ್ಯಸಭೆಯಲ್ಲಿ ಕಾವೇರಿ ವಿಚಾರದಲ್ಲಿ ನಾನೊಬ್ಬನೆ ಮಾತನಾಡಿದೆ. ಮಲ್ಲಿಕಾರ್ಜುನ ಖರ್ಗೆ ಮಾತನಾಡಲಿಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ನನ್ನ ಬಾಯಲ್ಲಿ ಏನೇನು ಹೇಳಿಸಬೇಡಿ. ಅವರೊಬ್ಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಂದು ಜಾರಿಕೊಂಡರು.

ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮನಮೋಹನ್​ ಸಿಂಗ್ ಅವರ ಕೇಂದ್ರ​​ ಸರ್ಕಾರದಲ್ಲಿ ಕರ್ನಾಟಕದ ನಾಲ್ಕು ಜನ ಮಂತ್ರಿಗಳಿದ್ದರು. ಅವಾಗ ಕಾವೇರಿ ವಿಚಾರವಾಗಿ ಮಾತನಾಡಿದ್ರಾ? ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:40 am, Fri, 22 September 23

Loading...
Unable to load recommendations.
Follow Us