ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಅದ್ದೂರಿ ದಸರಾ: ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೀಗೆಂದಿದ್ದೇಕೆ?

|

Updated on: Sep 18, 2024 | 12:25 PM

ಮುಡಾ ಸೈಟ್ ಹಂಚಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಹಗರಣಗಳ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರ ದಸರಾ ಮಹೋತ್ಸವದಲ್ಲೂ ಹಗರಣ ಎಸಗದಿರಲಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಕಳೆದ ವರ್ಷದಂತೆ ಕಮಿಷನ್ ಕೇಳಿ ಕರ್ನಾಟಕದ ಮಾನ ಹಾರಾಜು ಹಾಕದಿರಲಿ ಎಂದಿದ್ದಾರೆ. ಅಶೋಕ್ ಹೀಗೆ ಹೇಳಿದ್ದೇಕೆ? ಇಲ್ಲಿದೆ ವಿವರ.

ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಅದ್ದೂರಿ ದಸರಾ: ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೀಗೆಂದಿದ್ದೇಕೆ?
ಆರ್ ಅಶೋಕ್
Follow us on

ಬೆಂಗಳೂರು, ಸೆಪ್ಟೆಂಬರ್ 18: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಕರ್ನಾಟಕ ಸರ್ಕಾರದ ನಡೆ ಸ್ವಾಗತಾರ್ಹ. ಆದರೆ, ಅದರಲ್ಲಿಯೂ ಅದ್ದೂರಿ ಭ್ರಷ್ಟಾಚಾರ ಎಸಗಿ ನಾಡಿನ ಮಾನ ಹರಾಜು ಹಾಕದಿರಲಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಕಳೆದ ವರ್ಷ ದಸರಾ ಸಂದರ್ಭದಲ್ಲಿ ಸರೋದ್ ವಾದಕ ಶ್ರೀ ಪಂಡಿತ್ ತಾರಾನಾಥ್ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಲಾಗಿತ್ತು ಎಂಬ ಪತ್ರಿಕಾ ವರದಿಯ ತುಣುಕನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ನಾಡಹಬ್ಬ ಮೈಸೂರು ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎಂಬ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಅದ್ದೂರಿ ದಸರಾ, ಕಾಂಗ್ರೆಸ್ ಸರ್ಕಾರದದ ಮತ್ತೊಂದು ಅದ್ದೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಎನ್ನುವುದೇ ಕನ್ನಡಿಗರ ಆಶಯ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

ಕಳೆದ ವರ್ಷ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಶ್ರೀ ಪಂಡಿತ್ ತಾರಾನಾಥ್ ಅವರ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಿ ಕರ್ನಾಟಕದ ಮಾನ ಹಾರಾಜು ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈ ವರ್ಷವಾದರೂ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿಸದೆ ನಾಡಿನ ಸಂಸ್ಕೃತಿ, ಪರಂಪರೆಯ ಗೌರವ ಉಳಿಸುತ್ತೋ ಅಥವಾ ಈ ವರ್ಷವೂ ಮತ್ತೊಂದು ಭ್ರಷ್ಟಾಚಾರದ ಅಂಬಾರಿ ಹೊತ್ತು ಕನ್ನಡಿಗರ ಮಾನ ಕಳಿಯುತ್ತೋ ಕಾದು ನೋಡಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ಪ್ರಾಯೋಜಕತ್ವದ ಪಟ್ಟಿ‌ ಬಿಡುಗಡೆ: ಜಂಬೂಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ರೂ ನಿಗದಿ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂದರೆ ಅದು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಇಡೀ ದೇಶವೇ, ಪ್ರಪಂಚವೇ ಎದುರು ನೋಡುವ ಇಂತಹ ಉತ್ಸವವನ್ನ ರಾಜ್ಯ ಸರ್ಕಾರ ಅತ್ಯಂತ ಆಸಕ್ತಿ, ಶ್ರದ್ಧೆ, ಭಕ್ತಿಗಳಿಂದ ಆಚರಿಸಬೇಕು. ಇಲ್ಲವಾದರೆ ಈ ಸರ್ಕಾರ ಆ ತಾಯಿ ಚಾಮುಂಡೇಶ್ವರಿಯ ಶಾಪಕ್ಕೆ ಗುರಿಯಾಗುವುದು ನಿಶ್ಚಿತ ಎಂದು ಅಶೋಕ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ