Budget 2024: ಇದು ವಿನಾಶಕಾರಿ ಬಜೆಟ್​ ಎಂದ ಸಿಎಂ ಸಿದ್ದರಾಮಯ್ಯ

ಕೇಂದ್ರದ ಬಜೆಟ್ ನಿರಾಶದಾಯಕ ಬಜೆಟ್. ಇದು ಎಲೆಕ್ಷನ್ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್​ನಲ್ಲಿ ಯಾವುದೇ ಹೊಸ ಅಂಶ ಇಲ್ಲ. ವಿಶ್ಲೇಷಣೆ ಮಾಡುವುದು ಕಷ್ಟ. ಚುನಾವಣೆಗೋಸ್ಕರ ಬಜೆಟ್ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Feb 01, 2024 | 5:11 PM

ಬೆಂಗಳೂರು, ಫೆಬ್ರವರಿ 1: ಇದು ಬಹಳ ಹೊತ್ತು ಚರ್ಚೆ ಮಾಡುವ ಬಜೆಟ್ ಅಲ್ಲವೆಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟಾರೆ ಕೇಂದ್ರದ ಬಜೆಟ್ ನಿರಾಶದಾಯಕ ಬಜೆಟ್. ಇದು ಎಲೆಕ್ಷನ್ ಬಜೆಟ್ ಎಂದು ಕಿಡಿಕಾರಿದ್ದಾರೆ. 47 ಲಕ್ಷದ 65 ಸಾವಿರ 768 ಕೋಟಿ‌ ರೂ. ಗಾತ್ರ ಬಜೆಟ್ ಆಗಿದೆ. ಕಳೆದ ವರ್ಷ 45 ಲಕ್ಷದ 3 ಸಾವಿರ 97 ಕೋಟಿ 2 ಲಕ್ಷದ 66 ಸಾವಿರ ಕೋಟಿ ರೂ. ಹೆಚ್ಚು ಈಗಿನ ಮಧ್ಯಂತರ ಬಜೆಟ್ ಘೋಷಣೆ ಆಗದಿರಬಹುದು. ಅಂದರೆ ಕಳೆದ ಬಾರಿಗಿಂತ ಈ ವರ್ಷ 5.8% ಹೆಚ್ಚಳವಾಗಿದೆ ಎಂದಿದ್ದಾರೆ.

ಬಜೆಟ್ ವಿಶ್ಲೇಷಣೆ ಮಾಡುವುದು ಕಷ್ಟ

16 ಲಕ್ಷದ 85 ಸಾವಿರದ 496 ಕೋಟಿ ರೂ. ಸಾಲ ಮಾಡಿದ್ದಾರೆ. 190 ಲಕ್ಷ ಕೋಟಿ‌ ರೂ. ಸಾಲ‌ ಕೇಂದ್ರದ ಮೇಲಿದೆ. ಈ ಬಜೆಟ್​ನಲ್ಲಿ‌ ಸಾಲಕ್ಕಾಗಿ ಬಡ್ಡಿ ಪಾವತಿ 11 ಲಕ್ಷದ 91 ಸಾವಿರ ಕೋಟಿ ರೂ. ಒಟ್ಟಾರೆಯಾಗಿ ಈ ಬಜೆಟ್ ನಿರಾಶಾದಾಯಕವಾಗಿದ್ದು, ಚುನಾವಣೆಗೋಸ್ಕರ ಮಾಡಿದ್ದಾರೆ. ಯಾವುದೇ ಹೊಸ ಅಂಶ ಇಲ್ಲ. ಬಜೆಟ್ ವಿಶ್ಲೇಷಣೆ ಮಾಡುವುದು ಕಷ್ಟ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ದೇಶ ಮತ್ತು ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು ಸಚಿವೆ ಬಜೆಟ್ ಮಂಡಿಸಿದ್ದಾರೆ: ಆರ್ ಅಶೋಕ

ಈ ಬಜೆಟ್ ಜನರ ಮುಂದೆ ಇಡುವುದಕ್ಕಿಂತ, ಮುಚ್ಚಿಟ್ಟಿರುವುದೇ ಜಾಸ್ತಿ. ನಿರುದ್ಯೋಗ, ಬೆಲೆ‌ ಏ‌ರಿಕೆ, ರೈತರ ಸಮಸ್ಯೆ, ಬರಗಾಲದ ಬಗ್ಗೆ ಹೇಳಿಲ್ಲ. ಸಾಲ ಎಷ್ಟು ಮಾಡಿದ್ದೇವೆ, ವಿಕಸಿತ ಭಾರತ‌ ಅಂತ ಎಲ್ಲ ಕಡೆ ಮೋದಿ ಸರ್ಕಾರದ ಸಾಧನೆ ಅಂತ ಪ್ರಚಾರ ಮಾಡುತ್ತಿದ್ದಾರೆ. ಇದು ವಿಕಸಿತ ಬಜೆಟ್ ಅಂತ ಹೇಳುತ್ತಿದ್ದಾರೆ. ವಿಕಸಿತ ಅಲ್ಲ, ಇದು ವಿನಾಶಕಾರಿ ಭಾರತ ಮಾಡುವ ಬಜೆಟ್​ ಎಂದು ಕಿಡಿಕಾರಿದ್ದಾರೆ.

ಇದು ವಿನಾಶಕಾರಿ ಬಜೆಟ್ 

ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಈ ಬಜೆಟ್ ಅಂತಾರೆ, ಇದು ವಿನಾಶಕಾರಿ ಬಜೆಟ್ ಅಂತ ನಾನು ಹೇಳುತ್ತೇನೆ. ನಾವು ನಿಜವಾಗಿಯೂ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಗೃಹಜ್ಯೋತಿ ಕೃಷಿಭಾಗ್ಯ ಭಾಗ್ಯಗಳನ್ನ ಕೊಟ್ಟಿದ್ದೇವೆ. ಕಳೆದ 45 ವರ್ಷಗಳಲ್ಲಿ ಬಹಳ ನಿರುದ್ಯೋಗ ಬೆಳೆದಿದೆ ಎಂದು ತಿಳಿಸಿದರು.

Mspಗೆ ಕನಿಷ್ಠ ಬೆಲೆಗೆ ಕಡಿಮೆ ಬೆಳೆಗಳನ್ನ ಮಾತ್ರ ಸೇರಿಸಿದ್ದಾರೆ. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ MSP ಘೋಷಿಸಬೇಕು. ಇದು ಸೀತಾರಾಮನ್ ಅವರ ಆರನೇ ಬಜೆಟ್. ತೆರಿಗೆಯನ್ನ 30% ಇಳಿಸಿದ್ದೇವೆ ಅಂತ ಹೇಳುತ್ತಾರೆ. ಬಡವರಿಗೆ ಜಾಸ್ತಿ ತೆರಿಗೆ ವಿಧಿಸಿದ್ದಾರೆ. ಇದು‌ ರೈತರ, ಬಡವರ ಹಾಗೂ ದಲಿತರ ವಿರೋಧಿ ಬಜೆಟ್ ಆಗಿದೆ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್​ರನ್ನು ಕರ್ನಾಟಕದಿಂದ ಕಳಿಸಿದರೂ ರಾಜ್ಯಕ್ಕೆ ಏನೂ ಪ್ರಯೋಜನವಾಗಿಲ್ಲ: ಪ್ರಿಯಾಂಕ್ ಖರ್ಗೆ

2004 ರಿಂದ 2014 ಮನ್ ಮೋಹನ್‌ಸಿಂಗ್ ಪ್ರಧಾನಿ‌ ಆಗಿದ್ದರು. ಆಗ ಬಜೆಟ್ ಗಾತ್ರ 13.79 ಇತ್ತು. ಈಗ ಬಜೆಟ್ ಗಾತ್ರ ಕಳೆದ 10 ವರ್ಷಗಳಿಗೆ ಹೋಲಿಸಿದರೆ 9.6% ಆಗಿದೆ. ಮನ್ ಮೋಹನ್ ಸಿಂಗ್ ಕಾಲಕ್ಕೆ ಹೋಲಿಸಿದರೆ ಈಗ ಬಜೆಟ್ ಗಾತ್ರ 4.19% ಕಡಿಮೆ ಆಗಿದೆ. UPA ಇದ್ದಾಗ 11.14 ಇತ್ತು. ಜಿಡಿಪಿ ಬೆಳಗವಣಿಗೆ NDA ಕಾಲದಲ್ಲಿ 6.5% ಇದೆ. ವಿಕಸಿತ‌ ಹೇಗೆ ಆಯ್ತು? ಇದು ಕುಸಿತ, ವಿಕಸಿತ ಅಲ್ಲ ಎಂದಿದ್ದಾರೆ.

ಕೇಂದ್ರದಿಂದ ಬರಬೇಕಾದ ಹಣ ರಾಜ್ಯಕ್ಕೆ ಬರಲಿಲ್ಲ. 15 ನೇ ಹಣಕಾಸು ಹಣ ಬರಲಿಲ್ಲ. ಫೆರಫೆರಲ್ ರಿಂಗ್ ರಸ್ತೆಗೆ 6 ಸಾವಿರ ಕೋಟಿ ರೂ. ಕೊಡುತ್ತೇವೆ ಅಂದಿದ್ದರು ಕೊಟ್ಟಿಲ್ಲ. ಬರಗಾಲದ ಹಣವನ್ನೂ ಇನ್ನೂ ಕೊಟ್ಟಿಲ್ಲ. ಮನವಿ ಕೊಟ್ಟರೂ ಒಂದು ಪೈಸೆಯೂ ಬಂದಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:09 pm, Thu, 1 February 24